ವಿಜಯಸಾಕ್ಷಿ ಸುದ್ದಿ, ಡಂಬಳ: ಕಾರಹುಣ್ಣಿಮೆ ಅಂಗವಾಗಿ ಡಂಬಳ ಗ್ರಾಮದ ರೈತರು ಎತ್ತುಗಳನ್ನು ಓಡಿಸಿ ಹಬ್ಬವನ್ನು ಸಂಭ್ರಮದಿಂದ ಆಚರಿಸಿದರು. ಮುಂಗಾರು ಬಿತ್ತನೆ ಸಮಯದಲ್ಲಿ ಡಂಬಳ ಗ್ರಾಮದಲ್ಲಿ ಪ್ರತಿವರ್ಷ ಶರಣು ಬಂಡಿಹಾಳ ಕುಟುಂಬದ ಮನೆಯವರು ಬಿಳಿ ಮತ್ತು ಕಂದು ಬಣ್ಣದ ಎತ್ತುಗಳನ್ನು ಪೂಜಿಸಿದ ಬಳಿಕ ಹುಣ್ಣಿಮೆಯನ್ನು ರೈತಾಪಿ ವರ್ಗದ ಜನ ಹಬ್ಬದ ರೀತಿಯಲ್ಲಿ ಆಚರಿಸುತ್ತಾರೆ.
ಒಂದೇ ವೇದಿಕೆಯಲ್ಲಿ ಎತ್ತುಗಳನ್ನು ನಿಲ್ಲಿಸಿ ಕಾರ ಹುಣ್ಣಿಮೆ ಕರಿ ಹರಿಯಲು ಅವುಗಳನ್ನು ಓಡಿಸುವ ಕಾರ್ಯಕ್ರಮ ನಡೆಯಿತು. ಬಿಳಿ ಮತ್ತು ಕಂದು ಬಣ್ಣದ ಎತ್ತುಗಳನ್ನು ಡಂಬಳ ಗ್ರಾಮದಿಂದ ಮುಂಡರಗಿ ರಸ್ತೆಗೆ ಸಂಪರ್ಕಿಸುವ ರಸ್ತೆಯಲ್ಲಿ ಓಡಿಸಲಾಯಿತು. ಯಾವ ಬಣ್ಣದ ಹೋರಿ ಮೊದಲು ಕರಗಲ್ ಮುಟ್ಟುತ್ತದೆಯೋ ಅದೇ ಬಣ್ಣದ ಬೆಳೆಗಳು ಚೆನ್ನಾಗಿ ಬೆಳೆಯುತ್ತದೆ ಎನ್ನುವುದು ರೈತರ ನಂಬಿಕೆ. ಬಿಳಿ ಬಣ್ಣದ ಎತ್ತು ಮೊದಲು ಕರಗಲ್ ತಲುಪಿದ್ದರಿಂದ ಈ ವರ್ಷ ಪ್ರತಿ ಫಸಲು ಚೆನ್ನಾಗಿ ಬರುತ್ತದೆ ಎಂದು ರೈತರು ಅಭಿಪ್ರಾಯಪಟ್ಟರು. ಈ ಸಂದರ್ಭದಲ್ಲಿ ಗ್ರಾಮದ ರೈತರು, ಹಿರಿಯರು, ಯುವಕರು ಇದ್ದರು.