ಶೃಂಗೇರಿ:- ಶೃಂಗೇರಿಗೆ ಮಂಗಳೂರಿನಿಂದ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿಯಲ್ಲಿ ನೆಮ್ಮಾರು ಗ್ರಾಮ ಪ್ರದೇಶದಲ್ಲಿ ಮತ್ತೆ ಗುಡ್ಡ ಕುಸಿತ ಸಂಭವಿಸಿದ್ದು, ರಸ್ತೆಯುದ್ದಕ್ಕೂ ಮಣ್ಣು ತುಂಬಿದೆ. ಜತೆಗೆ ಬೃಹತ್ ಬಿರುಕೊಂದು ಬಿಟ್ಟಿದೆ.
ರಸ್ತೆಯಲ್ಲೇ ವಾಹನಗಳು ಬಿಡುವಿಲ್ಲದೇ ಸಂಚಾರ ಮಾಡುತ್ತಿವೆ. ಗುಡ್ಡ ಕುಸಿತದಿಂದಾಗಿ ದೊಡ್ಡ ದೊಡ್ಡ ಮರಗಳು, ಕಲ್ಲು, ಬಂಡೆಗಳು ರಸ್ತೆಗೆ ಬಿದ್ದಿವೆ ಎನ್ನಲಾಗಿದೆ.
ಇನ್ನೂ ಕರ್ನಾಟಕದಾದ್ಯಂತ ವರುಣಾರ್ಭಟ ಜೋರಾಗಿದ್ದು ಕರಾವಳಿ ಪ್ರದೇಶ, ಮಲೆನಾಡು ಹಾಗೂ ಬಯಲು ಸೀಮೆಯಲ್ಲಿಯೂ ಭಾರಿ ಮಳೆ ಆಗುತ್ತಿದೆ. ಭಾರಿ ಮಳೆ ಕಾರಣ ಮಂಗಳೂರಿನಿಂದ ಪ್ರಸಿದ್ಧ ಯಾತ್ರಾ ಸ್ಥಳ ಶೃಂಗೇರಿಯನ್ನು ಸಂಪರ್ಕಿಸುವ ಹೆದ್ದಾರಿಯಲ್ಲಿ ಭೂಕಸಿತ ಸಂಭವಿಸಿದೆ. ಮಳೆಯಿಂದಾಗಿ ರಾಜ್ಯದ ಹಲವೆಡೆ ಹಾನಿ ಸಂಭವಿಸಿದೆ.
ಇನ್ನೂ ಮತ್ತೊಂದೆಡೆ ಕಳಸ ತಾಲೂಕಿನಲ್ಲಿ ವರುಣಾರ್ಭಟ ಕೊಂಚ ಕಡಿಮೆಯಾಗಿದೆ. ಕಳಸ, ಕುದುರೆಮುಖ, ಕೆರೆಕಟ್ಟೆ ಭಾಗದಲ್ಲಿ ಮಳೆ ಆರ್ಭಟ ತಗ್ಗಿದೆ. ಹೆಬ್ಬಾಳೆ ಸೇತುವೆ ಮೇಲೆ ಭದ್ರಾ ನದಿ ನೀರು ಹರಿವು ತಗ್ಗಿದೆ. ಕಳೆದ ಎರಡು ದಿನದಿಂದ ಹೆಬ್ಬಾಳೆ ಸೇತುವೆ ಸಂಪೂರ್ಣ ಮುಳುಗಡೆಯಾಗಿತ್ತು. ಪರಿಣಾಮವಾಗಿ ಹೆಬ್ಬಾಳೆ ಸೇತುವೆ ಶಿಥಿಲಗೊಂಡಿದೆ. ಭದ್ರಾ ನದಿಯ ಆರ್ಭಟಕ್ಕೆ ಡಾಂಬರ್ ಕಿತ್ತು ಬಂದಿದ್ದು, ತಡೆಗೋಡೆ ಮುರಿದು ಹೋಗಿದೆ.