ವಿಜಯಸಾಕ್ಷಿ ಸುದ್ದಿ, ರೋಣ: ರೋಣ-ಹುಬ್ಬಳ್ಳಿ ಮುಖ್ಯ ರಸ್ತೆಗೆ ಹೊಂದಿಕೊಂಡಿರುವ ಎಂಆರ್ಬಿಸಿ ಪ್ರವಾಸಿ ಮಂದಿರದ ಬಳಿ ಗಾಳಿಗೆ ಬೃಹದಾಕಾರದ ಮರವೊಂದು ಸೋಮವಾರ ಮಧ್ಯಾಹ್ನ ನೆಲಕಚ್ಚಿದೆ.
Advertisement
ರೋಣದಿಂದ ಹುಬ್ಬಳ್ಳಿಗೆ ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆ ಇದಾಗಿದ್ದು, ನಿತ್ಯ ಸಾವಿರಾರು ವಾಹನಗಳು ಈ ರಸ್ತೆಯ ಮೂಲಕ ಸಂಚರಿಸುತ್ತವೆ. ಸಾರಿಗೆ ಬಸ್ಸೊಂದು ಇದೇ ಮಾರ್ಗದಲ್ಲಿ ಮುಂದಕ್ಕೆ ಸಾಗಿದ ಕ್ಷಣಾರ್ಧದಲ್ಲಿ ವಿದ್ಯುತ್ ತಂತಿಗಳೊಂದಿಗೆ ಬೃಹತ್ ಮರ ನೆಲಕ್ಕುರುಳಿದ್ದು, ಕೂದಲೆಳೆ ಅಂತರದಲ್ಲಿ ಭಾರೀ ಅನಾಹುತ ತಪ್ಪಿದೆ.
ಸುದ್ದಿ ತಿಳಿದ ತಕ್ಷಣ ಸ್ಥಳಕ್ಕೆ ಧಾವಿಸಿದ ಪೊಲೀಸ್ ಸಿಬ್ಬಂದಿ ಆನಂದ ಮೇಟಿ ಹಾಗೂ ಪ್ರವಾಸಿ ಮಂದಿರದ ಸಿಬ್ಬಂದಿ ಯಲ್ಲಪ್ಪ ಹೆಸ್ಕಾಂ ಅಧಿಕಾರಿಗಳಿಗೆ ಘಟನೆ ಬಗ್ಗೆ ವಿವರಿಸಿದರು. ಕೆಲ ನಿಮಿಷಗಳಲ್ಲಿ ಆಗಮಿಸಿದ ಹೆಸ್ಕಾಂ ಸಿಬ್ಬಂದಿಗಳು ವಿದ್ಯುತ್ ಪೂರೈಕೆಯನ್ನು ಸ್ಥಗಿತಗೊಳಿಸಿ ರಸ್ತೆ ಸಂಚಾರವನ್ನು ಸುಗಮಗೊಳಿಸುವಲ್ಲಿ ನೆರವಾದರು.