ರಾಯಚೂರು:- ಜಿಲ್ಲೆಯ ಲಿಂಗಸುಗೂರು ತಾಲೂಕಿನ ಮುದಗಲ್ ಹೊರವಲಯದಲ್ಲಿ ಬೈಕ್ನಲ್ಲಿ ಹೊರಟಿದ್ದಾಗ ಬೃಹತ್ ಮರವೊಂದು ಉರುಳಿ ಬಿದ್ದು ದಂಪತಿ ಸಾವನ್ನಪ್ಪಿರುವ ಘಟನೆ ಜರುಗಿದೆ.
25 ವರ್ಷದ ರಮೇಶ್, 22 ವರ್ಷದ ಅನುಸೂಯ ಮೃತ ದಂಪತಿ. ಘಟನೆಯಲ್ಲಿ 3 ವರ್ಷದ ಬಾಲಕಿ ಪವಾಡ ಎಂಬಂತೆ ಬದುಕುಳಿದಿದೆ. ದಂಪತಿ ತಮ್ಮ ಮಗುವಿನ ಜೊತೆಗೆ ಬೈಕ್ನಲ್ಲಿ ಮುದಗಲ್ ಪಟ್ಟಣದಿಂದ ನಾಗಲಾಪೂರ ಗ್ರಾಮಕ್ಕೆ ತೆರಳುತ್ತಿದ್ದರು. ಈ ವೇಳೆ ಬೃಹತ್ ಬಸರಿ ಮರವೊಂದು ಗಾಳಿಗೆ ಬುಡ ಸಮೇತ ಬೈಕ್ ಮೇಲೆ ಉರುಳಿ ಬಿದ್ದಿದೆ. ಪರಿಣಾಮ ಪತಿ ಸ್ಥಳದಲ್ಲೇ ಸಾವನ್ನಪ್ಪಿದ್ದು, ಪತ್ನಿ ಗಂಭೀರವಾಗಿ ಗಾಯಗೊಂಡಿದ್ದರು ಹಾಗೂ ಮಗುವಿಗೆ ಸಣ್ಣಪುಟ್ಟ ಗಾಯಗಳಾಗಿವೆ.
ಕೂಡಲೇ ಆಸ್ಪತ್ರೆಗೆ ದಾಖಲಿಸಿದ್ದರೂ ಕೂಡ ಚಿಕಿತ್ಸೆ ಫಲಕಾರಿಯಾಗದೇ ಪತ್ನಿ ಸಾವನ್ನಪ್ಪಿದ್ದಾರೆ. ಸ್ಥಳಕ್ಕೆ ಮುದಗಲ್ ಠಾಣೆ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.



