ಗದಗ: ರಸ್ತೆ ದಾಟುವಾಗ ಪೊಲೀಸ್ ಜೀಪ್ಗೆ ಕತ್ತೆಕಿರುಬವೊಂದು ಅಡ್ಡ ಬಂದು ಚಕ್ರದಲ್ಲಿ ಸಿಲುಕಿದ ಪರಿಣಾಮ ಜೀಪ್ ನ ಸ್ಟೇರಿಂಗ್ ಲಾಕ್ ಆಗಿ ಅಪಘಾತ ನಡೆದ ಪರಿಣಾಮವಾಗಿ ಕತ್ತೆಕಿರುಬ ಸಾವನ್ನಪ್ಪಿದ್ದಲ್ಲದೆ ಪೊಲೀಸ್ ಜೀಪ್ ನಲ್ಲಿದ್ದ ಎಎಸ್ಐ ಗಂಭೀರವಾಗಿ ಗಾಯಗೊಂಡ ಘಟನೆ ಗದಗ ತಾಲೂಕಿನ ಸೊರಟೂರ ಗ್ರಾಮದ ಬಳಿ ನಡೆದಿದೆ.
ಬೆಟಗೇರಿ ಠಾಣೆ ಎಎಸ್ಐ ಕಾಶಿಂಸಾಬ್ ಹರಿವಾಣಗೆ ಗಂಭೀರವಾಗಿ ಗಾಯಗಳಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿಯ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಜೀಪ್ ನಲ್ಲಿದ್ದ ವೈರ್ಲೆಸ್ ಪೊಲೀಸ್ ಇನ್ಸ್ಪೆಕ್ಟರ್ ಉಮೇಶ್ ಗೌಡ, ಚಾಲಕ ಓಂ ನಾಥ್ ಗೆ ಗದಗ ಜಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ.
ಲಕ್ಷ್ಮೇಶ್ವರದಲ್ಲಿನ ಗಣಪತಿ ವಿಸರ್ಜನೆಯ ಬಂದೂಬಸ್ತ್ ಮುಗಿಸಿಕೊಂಡು ಬೆಳಗಿನ ಜಾವ ಶಿರಹಟ್ಟಿ ಮಾರ್ಗವಾಗಿ ಗದಗ ಕಡೆಗೆ ಬರುತ್ತಿದ್ದಾಗ ಸೊರಟೂರು ಬಳಿ ಈ ಘಟನೆ ನಡೆದಿದ್ದು, ಪೊಲೀಸ್ ಜೀಪ್ಗೆ ಕತ್ತೆಕಿರುಬ ಅಡ್ಡ ಬಂದ ನಂತರ ಗೂಡ್ಸ್ ವಾಹನಕ್ಕೂ ಜೀಪ್ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ. ಮುಳಗುಂದ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.