ಹಾಸನ:- ಗ್ರಾಮಕ್ಕೆ ಸೈಲೆಂಟಾಗಿಯೇ ಎಂಟ್ರಿ ಕೊಟ್ಟ ಆನೆಯೊಂದು ನಾಯಿಗಳ ಮೇಲಿನ ಸಿಟ್ಟಿಗೆ ಆಲ್ಟೋ ಕಾರನ್ನೇ ಎತ್ತಿ ಬಿಸಾಡಿರುವ ಘಟನೆ ಬೇಲೂರಿನ ಅರೇಹಳ್ಳಿ ಗ್ರಾಮದಲ್ಲಿ ಜರುಗಿದೆ.
ಗ್ರಾಮದೊಳಗೆ ಒಂಟಿ ಸಲಗ ಎಂಟ್ರಿಕೊಟ್ಟಾಗ, ನಾಯಿಗಳು ಬೊಗಳಲಾರಂಭಿಸಿವೆ. ಇದರಿಂದ ಕೋಪಗೊಂಡ ಆನೆ ಗ್ರಾಮದ ಹಲವೆಡೆ ದಾಂಧಲೆ ನಡೆಸಿದೆ. ಇದೇ ವೇಳೆ, ಮನೆಯ ಬಳಿ ನಿಂತಿದ್ದ ಮೀನಾ ಎಂಬವರಿಗೆ ಸೇರಿದ ಕಾರನ್ನು ಆನೆ ಎತ್ತಿ ಎಸೆದಿದೆ. ಆನೆ ನಡೆಸಿದ ದಾಳಿಯಿಂದ ಕಾರು ನಜ್ಜು ಗುಜ್ಜಾಗಿದೆ.
ಕ್ಯಾಪ್ಟನ್ ಹೆಸರಿನ ಈ ಒಂಟಿ ಸಲಗ ವರ್ಷದ ಹಿಂದೆ ಕರಡಿ ಹಾಗೂ ಕಾಡಾನೆಯೊಂದಿಗೆ ಸೆಣೆಸಾಡಿತ್ತು. ಈಗ ಗ್ರಾಮದೊಳಗೆ ಬಂದು ಆನೆ ಪುಂಡಾಟ ನಡೆಸಿದೆ. ಇದರಿಂದ ಗ್ರಾಮಸ್ಥರು ಆತಂಕಗೊಂಡಿದ್ದಾರೆ. ಈ ಸಂಬಂಧ ಅರಣ್ಯ ಇಲಾಖೆ ಅಧಿಕಾರಿಗಳು ಸೂಕ್ತ ಕ್ರಮಕೈಗೊಳ್ಳಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.



