ತಿರುವನಂತಪುರಂ:- ಒಬ್ಬ ವ್ಯಕ್ತಿ ಸತ್ತ ಮೇಲೆ ಮತ್ತೆ ಜೀವಂತವಾಗೋದು ನಿಜಾನಾ!? ಅಯ್ಯೋ ಶಿವ, ಇದು ನಿಜ ಆಗ್ಬಿಟ್ಟಿದೆ ಮರ್ರೆ. ಕನ್ಫ್ಯೂಸ್ ಆಗ್ಬೇಡಿ ಈ ಸ್ಟೋರಿ ಪೂರ್ತಿ ಓದಿ.
ಹೌದು, ಕೇರಳ ಆಸ್ಪತ್ರೆಯ ಶವಾಗಾರದಲ್ಲಿ ಚಿಕಿತ್ಸೆ ಫಲಿಸದೇ ಮಂಗಳೂರು ಆಸ್ಪತ್ರೆಯಲ್ಲಿ ಮೃತಪಟ್ಟ 67 ವರ್ಷದ ವ್ಯಕ್ತಿಗೆ ಪುನರ್ಜನ್ಮ ಸಿಕ್ಕಿದೆ. ಪಾರ್ಶ್ವವಾಯು ಹಾಗೂ ತೀವ್ರ ಉಸಿರಾಟ ಸಮಸ್ಯೆಯಿಂದ ಬಳಲುತ್ತಿದ್ದ ಕಣ್ಣೂರಿನ ಪಚಪೊಯ್ಕಾದ ವೆಲ್ಲುವಕ್ಕಂಡಿ ಪವಿತ್ರನ್ ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ವೆಂಟಿಲೇಟರ್ನಲ್ಲಿ ಇರಿಸಿ ಚಿಕಿತ್ಸೆ ನೀಡುತ್ತಿದ್ದರೂ ಆರೋಗ್ಯ ಸ್ಥಿತಿ ಹದಗೆಟ್ಟಿತ್ತು. ಆರೋಗ್ಯದಲ್ಲಿ ಯಾವುದೇ ಚೇತರಿಕೆ ಕಾಣದ ಹಿನ್ನೆಲೆಯಲ್ಲಿ ಜೀವರಕ್ಷಕ ಸಾಧನಗಳನ್ನು ಹಿಂತೆಗೆದುಕೊಳ್ಳುವುದಾಗಿ ಕುಟುಂಬಕ್ಕೆ ಆಸ್ಪತ್ರೆ ತಿಳಿಸಿತ್ತು. ಸೋಮವಾರ ಸಂಜೆಯ ವೇಳೆ ಪವಿತ್ರನ್ ಮೃತಪಟ್ಟಿದ್ದಾರೆ ಎಂದು ಆಸ್ಪತ್ರೆ ಘೋಷಿಸಿತ್ತು.
ಸೋಮವಾರ ಸಂಜೆ 6:30 ರ ಸುಮಾರಿಗೆ ಅವರ ಶವವನ್ನು ಅಂಬುಲೆನ್ಸ್ ಮೂಲಕ ಕಣ್ಣೂರಿಗೆ ಕಳುಹಿಸಲಾಗಿತ್ತು. ರಾತ್ರಿ 11:30ರ ಹೊತ್ತಿಗೆ ಶವವನ್ನು ಶವಾಗಾರಕ್ಕೆ ಸ್ಥಳಾಂತರಿಸುತ್ತಿದ್ದಾಗ ಪವಿತ್ರನ್ ಕೈ ಅಲುಗಾಡುದನ್ನು ಕರ್ತವ್ಯದಲ್ಲಿದ್ದ ಅಟೆಂಡೆಂಟ್ ಜಯನ್ ಗಮನಿಸಿದ್ದಾರೆ. ಈ ವಿಚಾರ ತಿಳಿಯುತ್ತಿದ್ದಂತೆ ಆಸ್ಪತ್ರೆಯ ವೈದ್ಯಕೀಯ ತಂಡವು ದೇಹ ಪರೀಕ್ಷಿಸಿ ಪವಿತ್ರನ್ ಜೀವಂತವಾಗಿರುವುದನ್ನು ದೃಢಪಡಿಸಿತು. ಹೆಚ್ಚಿನ ಚಿಕಿತ್ಸೆಗಾಗಿ ಅವರನ್ನು ತಕ್ಷಣವೇ ತೀವ್ರ ನಿಗಾ ಘಟಕಕ್ಕೆ ಸ್ಥಳಾಂತರಿಸಲಾಯಿತು. ಈಗ ಚಿಕಿತ್ಸೆಗೆ ಪವಿತ್ರನ್ ಸ್ಪಂದಿಸುತ್ತಿದ್ದಾರೆ ಎಂದು ವರದಿಯಾಗಿದೆ.