ವಿಜಯಸಾಕ್ಷಿ ಸುದ್ದಿ, ಗದಗ : ರೋಗಗಳು ತೀವ್ರವಾಗಿ ಹರಡುವ ಮುನ್ನವೇ ಗುರುತಿಸಿದರೆ ತಡೆಗಟ್ಟಬಹುದು. ಅದೇ ರೀತಿ ಕ್ಷಯರೋಗವನ್ನು ಕೂಡ ಆದಷ್ಟು ಬೇಗ ಗುರುತಿಸಿದರೆ ಅದು ಹರಡದಂತೆ ತಡೆಗಟ್ಟಲು ಸಾಧ್ಯವಿದೆ ಎಂದು ಜಿಲ್ಲಾ ಕ್ಷಯರೋಗ ನಿರ್ಮೂಲನಾ ಯೋಜನೆಯ ಜಿಲ್ಲಾ ಸಂಯೋಜಕ ಎಫ್.ಪಿ. ಮೊದಿನ್ನವರ ಅಭಿಪ್ರಾಯಪಟ್ಟರು.
ಅವರು ನಗರದ ನವಜ್ಯೋತಿ ಸೇವಾ ಸಂಸ್ಥೆಯ ಆವರಣದಲ್ಲಿ ನಡೆದ ಸಭೆಯಲ್ಲಿ ಮಾತನಾಡಿ, ಕ್ಷಯರೋಗವು ಶೀಘ್ರವಾಗಿ ಹರಡುವ ರೋಗವಾಗಿದೆ. ಇದಕ್ಕೆ ಚಿಕಿತ್ಸೆ ಲಭ್ಯವಿದ್ದು, ಸಂಪೂರ್ಣವಾಗಿ ಗುಣಮುಖರಾಗಬಹುದು.
ಸರ್ಕಾರಿ ಆಸ್ಪತ್ರೆಗಳಲ್ಲಿ ಇದರ ಚಿಕಿತ್ಸೆ ಸಂಪೂರ್ಣವಾಗಿ ಉಚಿತವಾಗಿದೆ. ಹಾಗಾಗಿ ರೋಗಿಗಳು ಯಾವುದೇ ಹಿಂಜರಿಕೆ ಇಲ್ಲದೆ ಮುಕ್ತವಾಗಿ ವೈದ್ಯರೊಂದಿಗೆ ಸಮಾಲೋಚನೆ ಮಾಡಿ ಚಿಕಿತ್ಸೆ ಪಡೆದು ಗುಣಮುಖರಾಗಬೇಕು ಎಂದರು.
2025ಕ್ಕೆ ದೇಶವನ್ನು ಕ್ಷಯಮುಕ್ತ ದೇಶವಾಗಿಸುವ ಗುರಿ ಇದೆ. ಆದರೆ ಇದು ಬರೀ ಸರ್ಕಾರದಿಂದಾಗುವ ಕೆಲಸವಲ್ಲ. ಸಾರ್ವಜನಿಕ ಸಹಕಾರವೂ ಮುಖ್ಯ ಎಂದರು. ಜಿ.ಎಸ್. ಬಾಗಡೆ, ರೇಣುಕಾ ಮಾಹಿತಿ ನೀಡಿದರು.
ನವಜ್ಯೋತಿ ಸೇವಾ ಸಂಸ್ಥೆಯ ವ್ಯವಸ್ಥಾಪಕಿ ನೇತ್ರಾ ಕಂಠಿ ಸೇರಿದಂತೆ ಸಿಬ್ಬಂದಿಗಳು ಹಾಜರಿದ್ದರು. ದಾನಮ್ಮ ಪ್ರಾರ್ಥಿಸಿದರು.ಶಿವಾನಂದ ಹಡಗಲಿ ಸ್ವಾಗತಿಸಿದರು. ಬಸು ಕರಲಿಂಗಣ್ಣವರ ನಿರೂಪಿಸಿದರು. ಶರಣಪ್ಪ ಸಾಲಮನಿ ವಂದಿಸಿದರು.