ನೆಲಮಂಗಲ: ಸಚಿವರ ವರ್ತನೆಗೆ ತೈಲೇಶ್ವರ ಗಾಣಿಗ ಸಮುದಾಯದ ಶ್ರೀ ಪೂರ್ಣಾನಂದಪುರಿ ಸ್ವಾಮೀಜಿ ಕಣ್ಣೀರಿಟ್ಟ ಪ್ರಸಂಗ ಜರುಗಿದೆ. ವಿಶ್ವಗಾಣಿಗರ ಸಮುದಾಯ ಟ್ರಸ್ಟ್ ಗೆ ಮಂಜೂರಾದ ಹಣ ಬಿಡುಗಡೆ ಮಾಡಲು ಸಚಿವರು ಮೀನಾಮೇಷ ಮಾಡುತ್ತಿದ್ದಾರೆ ಎಂದು ಆರೋಪಿಸಿ ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಶಿವರಾಜ್ ತಂಗಡಗಿ ವಿರುದ್ದ ಸ್ವಾಮೀಜಿ ಆಕ್ರೋಶ ಹೊರ ಹಾಕಿದ್ದಾರೆ.
ಮುಖ್ಯಮಂತ್ರಿಗಳ ಆದೇಶ ಮಾಡಿದ್ರು ಸಚಿವರು ಕ್ಯಾರೆ ಎನ್ನುತ್ತಿಲ್ಲ. ಹಿಂದುಳಿದ ವರ್ಗದ ಮಠದ ಅಭಿವೃದ್ದಿಗೆ ಸಚಿವರು ಅಸಹಕಾರ ತೋರಿದ್ದಾರೆ. ಹೀಗಾಗಿ ಮಠದ ಅಭಿವೃದ್ದಿಗೆ ವಿಧಾನಸೌಧದಲ್ಲಿ ವಿಷ ಕುಡಿಯಲು ಸಿದ್ದ ಎಂದು ಸ್ವಾಮೀಜಿ ಹೇಳಿದ್ದಾರೆ.
ಸರ್ಕಾರಕ್ಕೆ ಮುಜುಗರ ತರುವ ಕೆಲಸವನ್ನು ಸಚಿವ ತಂಗಡಗಿ ಮಾಡುತ್ತಿದ್ದಾರೆ. ವಿಶ್ವಗಾಣಿಗರ ಸಮುದಾಯ ಟ್ರಸ್ಟ್ ಗೆ 3.5 ಕೋಟಿ ಅನುದಾನ ನೀಡಿತ್ತು ಸರ್ಕಾರ. ಉಳಿದ 1.5 ಕೋಟಿ ಹಣ ಬಿಡುಗಡೆಗೆ ಸಚಿವರು ಮೀನಾಮೇಷ ಎಣಿಸುತ್ತಿದ್ದಾರೆ. ಕಾನೂನು ಹೋರಾಟಕ್ಕೆ ತೈಲೇಶ್ವರ ವಿಶ್ವ ಗಾಣಿಗರ ಮಠದ ಸ್ವಾಮೀಜಿ ನಿಂತಿದ್ದಾರೆ. ಸರ್ಕಾರವನ್ನಾಗಲಿ ಮುಖ್ಯಮಂತ್ರಿಯನ್ನಾಗಲಿ ನಾನು ದೂಷಿಸಲ್ಲ ಕೇವಲ ಸಚಿವರಿಂದ ಅನ್ಯಾಯ ಆಗಿದೆ ಎಂದು ಶ್ರೀಗಳು ಆರೋಪಿಸಿದ್ದಾರೆ.