ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ನಿತ್ಯದ ಬದುಕಿನ ಜಂಜಾಟಗಳ ನಡುವೆಯೂ ಶ್ರಾವಣ ಮಾಸದಲ್ಲಿ ಮನಸ್ಸಿನ ಶಾಂತಿ ಮತ್ತು ನೆಮ್ಮದಿಗಾಗಿ ಪುಣ್ಯ ಪುರುಷರ ಪುರಾಣ ಪುಣ್ಯಕಥೆಗಳನ್ನು ಆಲಿಸುವದು, ಧಾರ್ಮಿಕ ಕಾರ್ಯಗಳನ್ನು ಕೈಗೊಳ್ಳುವದು ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುತ್ತವೆ ಎಂದು ಗಂಜಿಗಟ್ಟಿ ಚರಮೂರ್ತೆಶ್ವರಮಠದ ಡಾ.ವೈಜನಾಥ ಶಿವಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು ನುಡಿದರು.
ಅವರು ಶ್ರಾವಣ ಮಾಸದ ಕಡೆಯ ಸೋಮವಾರ ಮಹೇಶ ಹೊಗೆಸೊಪ್ಪಿನ ಅವರ ನೇತೃತ್ವದ ಭಕ್ತವೃಂದದವರು ಹಮ್ಮಿಕೊಂಡಿದ್ದ ಗುರುಭಕ್ತಿ ಶ್ರಾವಣದ ನಿಮಿತ್ತ ಗಂಜಿಗಟ್ಟಿ ಶ್ರೀಗಳ ತುಲಾಭಾರ, ಗೋಪೂಜೆ, ತಾಯಂದಿರ ಉಡಿ ತುಂಬುವ ಹಾಗೂ ಪ್ರತಿಭಾವಂತರಿಗೆ, ಸಾಧಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ತುಲಭಾರ ಸೇವೆಯನ್ನು ಸ್ವೀಕರಿಸಿ ಆಶೀರ್ವಚನ ನೀಡಿ ಮಾತನಾಡಿದರು.
ಕಾರ್ಯಕ್ರಮ ಉದ್ಘಾಟಿಸಿದ ಮಾಜಿ ಶಾಸಕ ಜಿ.ಎಸ್. ಗಡ್ಡದೇವರಮಠ, ವರ್ತಕ ಬಸವೇಶ ಮಹಾಂತಶೆಟ್ಟರ ಮಾತನಾಡಿ, ಅನೇಕ ಧಾರ್ಮಿಕ ಕಾರ್ಯಗಳಲ್ಲಿ ಮುಖ್ಯವಾಗಿ ಗೋಮಾತೆಯನ್ನು ಪೂಜಿಸುವ ಸಂಪ್ರದಾಯ ನಮ್ಮಲ್ಲಿದೆ, ಸಹಸ್ರಾರು ದೇವರುಗಳ ಸಂಗಮವಾಗಿರುವ ಮಹತ್ವದ ಗೋವುಗಳನ್ನು ಪೂಜಿಸುವದರಿಂದ ಮನಸ್ಸಿಗೆ ನೆಮ್ಮದಿಯ ಜೊತೆಗೆ ಪುಣ್ಯ ಪ್ರಾಪ್ತಿಯಾಗುತ್ತದೆ. ಗೋವಿಗೆ ದೇವಾನುದೇವತೆಗಳ ಕಾಲದಿಂದಲೂ ಶ್ರೇಷ್ಠ ಸ್ಥಾನವಿದೆ. ಅಲ್ಲದೆ ಗುರುವಿನ ತುಲಾಭಾರ ಮಾಡುವ ಶ್ರೇಷ್ಠ ಕಾರ್ಯವು ಇಲ್ಲಿ ನಡೆದಿರುವದು ಮಹತ್ವದ್ದಾಗಿದೆ. ಶ್ರಾವಣ ಮಾಸದ ಈ ಕಾರ್ಯಕ್ರಮ ನೆಮ್ಮದಿ ತರುವಂತಿದೆ ಎಂದು ಹೇಳಿದರು.
ಕಾರ್ಯಕ್ರಮದ ರೂವಾರಿ ಮಹೇಶ ಹೊಗೆಸೊಪ್ಪಿನ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಭೆಯಲ್ಲಿ ಮಾಜಿ ಶಾಸಕ ರಾಮಣ್ಣ ಲಮಾಣಿ ಮಾತನಾಡಿದರು. ವೇದಿಕೆಯಲ್ಲಿ ಪುರಸಭೆ ಅಧ್ಯಕ್ಷೆ ಯಲ್ಲಮ್ಮ ದುರಗಣ್ಣವರ, ಶರಣಬಸಪ್ಪ ಗುಡಿಮನಿ, ಹನುಮಂತಪ್ಪ ಅಬ್ಬಿಗೇರಿ, ಬಸಣ್ಣ ಬೆಟಗೇರಿ, ಚನ್ನಬಸಪ್ಪ ಲಿಂಗಶೆಟ್ಟಿ, ಚಂಬಣ್ಣ ಬಾಳಿಕಾಯಿ, ಗುರುನಾಥ ದಾನಪ್ಪನವರ, ದೊಡ್ಡೀರಪ್ಪ ಬನ್ನಿಕೊಪ್ಪ, ಸೋಮಣ್ಣ ಡಾಣಗಲ್, ಬಸಣ್ಣ ಬೆಂಡಿಗೇರಿ, ರಾಜಣ್ಣ ಕುಂಬಿ, ಮಂಜುನಾಥ ಮಾಗಡಿ, ಬಸಣ್ಣ ಓದುನವರ, ವಿಜಯಕುಮಾರ ಹತ್ತಿಕಾಳ, ಶಕುಂತಲಾ ಬಸೆಟ್ಟೆಪ್ಪ ಹೊಗೆಸೊಪ್ಪಿನ್, ಬಸವರಾಜ ಹೊಗೆಸೊಪ್ಪಿನ ಮುಂತಾದವರಿದ್ದರು. ನಾಗರಾಜ ಪೂಜಾರ, ಕಿರಣ ನವಲೆ, ಬಸವರಾಜ ಬಾಳೇಶ್ವರಮಠ ನಿರೂಪಿಸಿದರು.