ವಿಜಯಸಾಕ್ಷಿ ಸುದ್ದಿ, ಗದಗ: ಅಧಿಕಾರ, ಅಂತಸ್ತು ಶಾಶ್ವತವಾದುದಲ್ಲ. ಇವುಗಳು ದೊರೆತ ಸಂದರ್ಭದಲ್ಲಿ ಜನಮಾನಸದಲ್ಲಿ ನೆಲೆ ನಿಲ್ಲುವ ಕಾರ್ಯವನ್ನು ಮಾಡಬೇಕು. ಜನರಿಂದಲೇ ದೊರೆಕಿರುವದರಿಂದ ಅವರಿಗೆ ಸಮರ್ಪಿಸುವ ಕೆಲಸವನ್ನು ಮಾಡುವವರು ಆದರ್ಶಪ್ರಾಯರಾಗುತ್ತಾರೆ. ಈ ನಿಟ್ಟಿನಲ್ಲಿ ರಾಣಿ ಅಹಲ್ಯಾಬಾಯಿ ಜನರ ಸಂಕಷ್ಟಗಳಿಗೆ ಸ್ಪಂದಿಸಿದರು. ಸಾಮಾಜಿಕ ಕಾರ್ಯಗಳ ಜೊತೆಗೆ ದೇವಾಲಯಗಳನ್ನು ಜೀರ್ಣೋದ್ಧಾರ ಮಾಡಿದರು ಎಂದು ಓಂಕಾರೇಶ್ವರ ಮಠದ ಫಕೀರೇಶ್ವರ ಶಿವಾಚಾರ್ಯ ಸ್ವಾಮಿಗಳು ನುಡಿದರು.
ಅವರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನಿಂದ ಗದುಗಿನ ತೋಂಟದ ಸಿದ್ಧಲಿಂಗಶ್ರೀಗಳ ಕನ್ನಡ ಭವನದಲ್ಲಿ ಕಾಯಕರತ್ನ ಮೈಲಾರೆಪ್ಪ ಮೆಣಸಗಿ ಇವರ ಸ್ಮರಣಾರ್ಥ ಹಮ್ಮಿಕೊಂಡಿದ್ದ ದತ್ತಿ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು.
ಸಹಾಯಕ ಪ್ರಾಧ್ಯಾಪಕಿ ಶೋಭಾ ಯಕ್ಕೇಲಿ ಉಪನ್ಯಾಸ ನೀಡಿ, ಮಾಳ್ವ ಪ್ರಾಂತ್ಯದ ರಾಣಿಯಾಗಿದ್ದ ಅಹಲ್ಯಾಬಾಯಿ ಹೋಳ್ಕರ್ ಅಧಿಕಾರ ಮತ್ತು ಹಣವನ್ನು ಸಮಾಜೋಪಯೋಗಿ ಕಾರ್ಯಗಳಿಗೆ ವಿನಿಯೋಗಿಸುವ ಮೂಲಕ ಭಾರತೀಯರ ಹೃದಯದಲ್ಲಿ ಶಾಶ್ವತವಾಗಿ ನೆಲೆನಿಂತಿದ್ದಾರೆ. ಉತ್ತಮ ಆಡಳಿತ, ಧಾರ್ಮಿಕ, ಶೈಕ್ಷಣಿಕ ಕಾರ್ಯಗಳು ಹಾಗೂ ಆಕೆ ಮಾಡಿದ ದಾನ, ದತ್ತಿಗಳು ಭಾರತೀಯ ಪರಂಪರೆಯನ್ನು ಉಜ್ವಲಗೊಳಿಸಿವೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಕಸಾಪ ಅಧ್ಯಕ್ಷ ವಿವೇಕಾನಂದಗೌಡ ಪಾಟೀಲ ಮಾತನಾಡಿ, ಅನೇಕ ರಾಜಮನೆತನಗಳು ಜನಕಲ್ಯಾಣವನ್ನೇ ಮುಖ್ಯ ಗುರಿಯಾಗಿಸಿಕೊಂಡು ಕಾರ್ಯ ಮಾಡಿರುವ ಹಿನ್ನೆಲೆಯಲ್ಲಿ ಕೆರೆ-ಕಟ್ಟೆಗಳನ್ನು, ವಾಸ್ತುಶಿಲ್ಪವನ್ನು ಕಾಣಬಹುದಾಗಿದೆ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ವಾಸುದೇವಾಚಾರ್ಯ ಹೂಲಿ ಅವರು ಷಟ್ಪದಿಯಲ್ಲಿ ರಚಿಸಿದ ಶಿವನು ಗಿರಿಜೆಗೆ ಹೇಳಿದ ರಾಮಾಯಣವನ್ನು ಫಕೀರೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು ಹಾಗೂ ಸಿದ್ಧೇಶ್ವರ ಸ್ವಾಮಿಗಳಿಂದ ಪ್ರೇರಿತರಾಗಿ ತುಕಾರಾಮ ಜಾಧವ ಅವರು ಬರೆದ ಡಾ. ಆಶಾ ಅನುವಾದಿಸಿರುವ `ಬ್ಯೂಟಿಫುಲ್ ವರ್ಡ್ಸ್ ಫಾರ್ ಎ ಬ್ಯೂಟಿಫುಲ್ ಲೈಫ್’ ಪುಸ್ತಕವನ್ನು ವಿವೇಕಾನಂದಗೌಡ ಪಾಟೀಲ ಲೋಕಾರ್ಪಣೆಗೊಳಿಸಿದರು. ಲೇಖಕ ವಾಸುದೇವಾಚಾರ್ಯ ಹೂಲಿ ಮಾತನಾಡಿದರು. ಐಶ್ವರ್ಯ ಹೂಲಿ ಅವರಿಂದ ಸಂಗೀತ ಕಾರ್ಯಕ್ರಮ ಜರುಗಿತು.
ಕಾರ್ಯಕ್ರಮದಲ್ಲಿ ಕೆ.ಎಚ್. ಬೇಲೂರ, ಅ.ದ. ಕಟ್ಟಿಮನಿ, ಡಾ. ಅನಂತ ಶಿವಪೂರ, ಡಾ. ರಾಜಶೇಖರ ದಾನರಡ್ಡಿ, ಬಸವರಾಜ ವಾರಿ, ರಾಚಪ್ಪ ಕುಪ್ಪಸದ, ಚನ್ನವೀರಪ್ಪ ದುಂದೂರ, ಸುಧಾ ಮೆಣಸಗಿ, ಎಂ.ಜೆ. ಮಮತಾ, ಉಮಾ ಪಾರ್ವತಿಮಠ, ಅರವಿಂದ ಹುಯಿಲಗೋಳಕರ, ಎಸ್.ಕೆ. ತೆಂಬದಮನಿ, ವಿ.ಬಿ. ದೇಶಪಾಂಡೆ, ಶ್ರೀಕಾಂತ ಹೂಲಿ, ಡಾ. ಬಿ.ಬಿ. ಹೊಳಗುಂದಿ, ಎಚ್.ಟಿ. ಸಂಜೀವಸ್ವಾಮಿ, ಬಿ.ಎಸ್. ಹಿಂಡಿ, ಕೆ.ಜಿ. ವ್ಯಾಪಾರಿ, ಪ್ರ.ತೋ. ನಾರಾಯಣಪೂರ, ದಿಲೀಪಕುಮಾರ ಮುಗಳಿ, ಶಶಿಕಾಂತ ಕೊರ್ಲಹಳ್ಳಿ, ಜಿ.ಎ. ಪಾಟೀಲ, ಶರಣಪ್ಪ ಹೊಸಂಗಡಿ, ಶಾರದಾ ಕಾತರಕಿ, ಸುಧಾ ಬಳ್ಳಿ, ಪ್ರಶಾಂತ ಪಾಟೀಲ, ಅಮೃತಾ ಚನ್ನಪಗೌಡರ, ಎಂ.ಎಂ. ಶಟವಾಜಿ, ಮಹಾಂತೇಶ ಬಾತಾಖಾನಿ, ಪರಮೇಶ್ವರ ಐರಣಿ, ಎ.ಸಿ. ಹಿರೇಮಠ, ಆರ್.ವಿ. ಮ್ಯಾಗೇರಿ, ಪ್ರಹ್ಲಾದ ನರಸಪ್ಪನವರ, ಸತೀಶ ಚನ್ನಪ್ಪಗೌಡರ, ಅಮರೇಶ ರಾಂಪೂರ, ಚನವೀರಪ್ಪ ದುಂದೂರ, ಎಸ್.ಸಿ. ಹಾಲಕೇರಿ, ರತ್ನಾ ಪುರಂತರ, ಆರ್.ಡಿ. ಕಪ್ಪಲಿ, ಬಸವರಾಜ ದೇಗುಲ, ಈರಣ್ಣ ಪಟ್ಟಣಶೆಟ್ಟಿ, ಜಿ.ಕೆ. ಮುರಳಿ, ಗೋವಿಂದರಾಜ ಮುಕ್ತುಂ, ಸುಮನ ಪಾಟೀಲ, ಎಸ್.ಎ. ದೇಶಪಾಂಡೆ, ಎಲ್.ಪಿ. ಕಟ್ನಳ್ಳಿ, ಅಕ್ಕಮಹಾದೇವಿ, ಪದ್ಮಾ ಮುಗಳಿ, ಮೊದಲಾದವರು ಉಪಸ್ಥಿತರಿದ್ದರು.
ಕಿಶೋರಬಾಬು ನಾಗರಕಟ್ಟಿ ಸ್ವಾಗತಿಸಿದರು. ಡಾ. ದತ್ತಪ್ರಸನ್ನ ಪಾಟೀಲ ನಿರೂಪಿಸಿದರು. ಡಿ. ಎಸ್. ಬಾಪುರಿ ವಂದಿಸಿದರು.
ಜಯದೇವ ಮೆಣಸಗಿ ಮಾತನಾಡಿ, ವಿದ್ಯಾನಿಧಿ ಪ್ರಕಾಶನದ ಮೂಲಕ ವಿದ್ಯಾರ್ಥಿಗಳಿಗೆ ಉಪಯುಕ್ತವಾಗುವ ಪುಸ್ತಕಗಳ ಜೊತೆಗೆ ಸೃಜನಶೀಲ ಕೃತಿಗಳನ್ನು ಪ್ರಕಟಿಸುತ್ತಿದ್ದೇವೆ. ದೂರದರ್ಶಿತ್ವ ಹೊಂದಿದ್ದ ಮೈಲಾರೆಪ್ಪನವರ ವಿಚಾರಗಳಿಗೆ ಪೂರಕವಾಗಿ ಕಾರ್ಯ ನಿರ್ವಹಿಸುತ್ತಿರುವದು ಸಮಾಧಾನ ತಂದಿದೆ ಎಂದು ತಿಳಿಸಿದರು.
ಡಾ. ದತ್ತಪ್ರಸನ್ನ ಪಾಟೀಲ ಮಾತನಾಡಿ, ಮೈಲಾರೆಪ್ಪ ಮೆಣಸಗಿ ಶ್ರಮ ಸಂಸ್ಕೃತಿಯ ಪ್ರತೀಕವಾಗಿದ್ದಾರೆ. ಗದಗ ಮುದ್ರಣ ಕಾಶಿ ಎನಿಸಿಕೊಳ್ಳಲು ಅವರ ಕೊಡುಗೆ ಅಪಾರವಾಗಿದೆ. ವಿದ್ಯಾನಿಧಿ ಪ್ರಕಾಶನದ ಮೂಲಕ ಪುಸ್ತಕ ಪರಂಪರೆಯನ್ನು ಬಲಗೊಳಿಸಿದ್ದಾರೆ. ಕನ್ನಡ ನಾಡು-ನುಡಿ ಕುರಿತು ಅಪಾರ ಕಾಳಜಿ ಹೊಂದಿದ್ದ ಇವರು ಸಾಹಿತಿಗಳನ್ನು ಪೋಷಿಸಿದ್ದಾರೆ ಎಂದು ತಿಳಿಸಿದರು.