ವಿಜಯಸಾಕ್ಷಿ ಸುದ್ದಿ, ಗದಗ: ಜಗತ್ತಿನಲ್ಲಿ ಯಾವುದೇ ಒಂದು ವಸ್ತು ಸೃಷ್ಟಿಯಾಗಬೇಕಾದರೆ ಅದಕ್ಕೆ ಮನಸ್ಥಿತಿ, ಬೌದ್ಧಿಕ ಸ್ಥಿತಿ ಮತ್ತು ದೈಹಿಕ ಸ್ಥಿತಿ ಬಹಳ ಮುಖ್ಯವಾಗಿದೆ. ಕಲಾವಿದರನ್ನು ಭೂಲೋಕದ ಸೃಷ್ಟಿಕರ್ತರು ಎನ್ನಬಹುದು. ಅವರು ದೂರದೃಷ್ಟಿ ಮತ್ತು ಅಂತರದೃಷ್ಟಿ ಉಳ್ಳವರು. ಅವರಿಂದ ಭಿನ್ನವಾದ ಸೃಷ್ಟಿ ಸಾಧ್ಯ ಎಂದು ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯ (ಡಯಟ್) ಪ್ರಾಚಾರ್ಯ ಜಿ.ಎಂ. ಮುಂದಿನಮನಿ ಅಭಿಪ್ರಾಯಪಟ್ಟರು.
ನಗರದ ವಿಜಯ ಕಲಾಮಂದಿರದಲ್ಲಿ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ವತಿಯಿಂದ ಹೈಯರ್/ಲೋವರ್ ಗ್ರೇಡ್ ಪರೀಕ್ಷೆಗೆ ಕುಳಿತುಕೊಳ್ಳುವ ಮಕ್ಕಳನ್ನು ತರಬೇತಿಗೊಳಿಸಲು ಮತ್ತು ಹೆಚ್ಚು ಅಂಕ ಪಡೆಯಲು ನೆರವಾಗುವಂತೆ ಗದಗ ಜಿಲ್ಲೆಯ ಚಿತ್ರಕಲಾ ಶಿಕ್ಷಕರಿಗೆ ಹಮ್ಮಿಕೊಂಡಿದ್ದ ಒಂದು ದಿನದ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಮಕ್ಕಳಲ್ಲಿ ಸೃಜನಶೀಲತೆ ಮತ್ತು ಕಲಾತ್ಮಕತೆಯನ್ನು ಹೊರಸೂಸುವಂತೆ ಮಾಡುವ ಶಕ್ತಿ ಮತ್ತು ಕುಶಲತೆ ಚಿತ್ರಕಲಾ ಶಿಕ್ಷಕರಿಗೆ ಇದೆ. ಒಂದು ಚಿತ್ರ ಸಾವಿರ ಶಬ್ದಗಳಿಗೆ ಸಮ. ಪಠ್ಯಕ್ಕಿಂತಲೂ ಮಕ್ಕಳಿಗೆ ಚಿತ್ರಗಳು ಮಸ್ತಕದಲ್ಲಿ ಉಳಿಯುತ್ತವೆ ಎಂದು ಹೇಳಿದರು.
ಡಯಟ್ನ ಹಿರಿಯ ಉಪನ್ಯಾಸಕರಾದ ಯಲ್ಲಪ್ಪ ಹಂದ್ರಾಳ ಮಾತನಾಡಿ, ಲಲಿತಕಲೆಗಳನ್ನು ಕಲಿಸುವುದರಿಂದ ಮಕ್ಕಳನ್ನು ವಿಭಿನ್ನವಾಗಿ ಯೋಚಿಸುವಂತೆ ಮತ್ತು ಕಾರ್ಯತತ್ಪರವಾಗುವಂತೆ ಮಾಡಬಹುದು. ಆದ್ದರಿಂದ ಕಲೆಗಳಿಗೆ ಮಕ್ಕಳನ್ನು ತೊಡಗಿಸಿ ಪ್ರೋತ್ಸಾಹಿಸಬೇಕು ಎಂದರು.
ಡಯಟ್ನ ಉಪನ್ಯಾಸಕರು ಮತ್ತು ಪ್ರವಾಸೋದ್ಯಮ ಇಲಾಖೆಯ ಸಹನಿರ್ದೇಶಕರಾದ ಕೊಟ್ರೇಶ ವಿಭೂತಿ ಮಾತನಾಡಿ, ಮಕ್ಕಳಿಗೆ ದೇಶದ ಪರಂಪರೆ ಹಾಗೂ ಕಲಾತ್ಮಕ, ಐತಿಹಾಸಿಕ ತಾಣಗಳ ಪರಿಚಯವನ್ನು ಮಾಡುವುದು ಮತ್ತು ಅವುಗಳನ್ನು ಆಳವಾಗಿ ತಿಳಿದುಕೊಳ್ಳುವಂತೆ ಮಾಡುವ ಕಾರ್ಯದಲ್ಲಿ ಚಿತ್ರಕಲಾ ಶಿಕ್ಷಕರ ಪಾತ್ರ ಮಹತ್ವದ್ದಾಗಿದೆ ಎಂದರು.
ವಿಜಯಕಲಾ ಮಂದಿರದ ಪ್ರಾಚಾರ್ಯ ಕೃಷ್ಣಾ ಕೆ.ಎಂ ಮಾತನಾಡಿ, ಇಂದಿನ ತಂತ್ರಜ್ಞಾನ ಯುಗದಲ್ಲಿ ಕಲಾತ್ಮಕತೆಯ ಪರಿಚಯ ಎಲ್ಲರಿಗೂ ಆಗಬೇಕು ಮತ್ತು ಇದರಿಂದ ಮನುಷ್ಯ ಈ ದಿನಕ್ಕೆ ಹೊಂದಿಕೊಂಡು ವಿಶಿಷ್ಟಪೂರ್ಣ ಎನಿಸಬಲ್ಲ ಎಂದರು.
ವಿಜಯಕಲಾ ಮಂದಿರದ ಮುಖ್ಯಸ್ಥ ಪ್ರಕಾಶ ಅಕ್ಕಿ, ಮೊರಾರ್ಜಿ ವಸತಿ ಶಾಲೆಗಳ ಚಿತ್ರಕಲಾ ಅಧ್ಯಕ್ಷ ರಮಜಾನ್ ಮುತ್ತಣ್ಣವರ ಮಾತನಾಡಿದರು. ಟಿ.ಆರ್. ಬೇವಿನಮರದ, ಸರೋಜಾ ಮುಂಡೇವಾಡಿ, ಶಾರದಾ ಪರ್ವತಿ, ಕೆ.ಬಿ. ಬಡಿಗೇರ, ಮಹೇಶ ಹಿರೇಗೌಡರ, ಜೆ.ಕೆ. ಬಾಗವಾನರ, ವಿಜಯ ಕಿರೇಸೂರ ಮುಂತಾದವರು ಉಪನ್ಯಾಸ ನೀಡಿದರು. ಗದಗಿನ ಚಿತ್ರಕಲಾ ಶಿಕ್ಷಕರ ಸಂಘದ ಕಾರ್ಯದರ್ಶಿ ಅಶೋಕ ಬಾವಿ, ಶರಣಯ್ಯ ವಸ್ತ್ರದ, ನಾಗರಾಜ ಚಿತ್ರಗಾರ, ಮಹೇಶ ಸಂದಿಗೋಡ ಮತ್ತು ಜಿಲ್ಲೆಯ ಎಲ್ಲ ಚಿತ್ರಕಲಾ ಶಿಕ್ಷಕರು ಭಾಗವಹಿಸಿ ಕಾರ್ಯಾಗಾರ ಯಶಸ್ವಿಗೊಳಿಸಿದರು. ಪಂಚಾಕ್ಷರಿ ಹಿರೇಮಠ ನಿರೂಪಿಸಿದರು. ತೋಂಟೇಶ ಬೇವಿನಮರದ ಸ್ವಾಗತಿಸಿ ವಂದಿಸಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಜಿಲ್ಲಾ ಚಿತ್ರಕಲಾ ಶಿಕ್ಷಕರ ಸಂಘದ ಅಧ್ಯಕ್ಷ ವಿಜಯ ಕಿರೇಸೂರ, ರಾಜ್ಯದಲ್ಲಿಯೇ ಈ ರೀತಿಯ ಗ್ರೇಡ್ ಮಕ್ಕಳಿಗೆ ಪ್ರೋತ್ಸಾಹಿಸುವ ತರಬೇತಿ ನೀಡುವ ಪ್ರಯತ್ನ ಮೊದಲು. ಈ ಪ್ರಯತ್ನದಿಂದ ಮಕ್ಕಳಲ್ಲಿ ಉತ್ಸಾಹ ಮೂಡಿ ಹೆಚ್ಚು ಕ್ರಿಯಾಶೀಲರಾಗುವಂತೆ ಮಾಡುವುದರಲ್ಲಿ ಸಂದೇಹವಿಲ್ಲ. ಜಗತ್ತಿನಲ್ಲಿ ಚಿತ್ರಕಲೆಗೆ ವಿಶಿಷ್ಟ ಸ್ಥಾನವಿದ್ದು, ಇದನ್ನು ಪ್ರಾಥಮಿಕ ಹಂತದಲ್ಲಿಯೇ ಮಕ್ಕಳಿಗೆ ಕಲಿಸುವುದರಿಂದ ಪ್ರಯೋಗಾತ್ಮಕ ಕಲಿಕೆಗೆ ನೈಜ ಅರ್ಥ ಬರುತ್ತದೆ ಎಂದು ಹೇಳಿದರು.



