ವಿಜಯಸಾಕ್ಷಿ ಸುದ್ದಿ, ಗದಗ: ಸಮಕಾಲೀನ ಸಂಕಟಗಳಿಗೆ ಕವಿ ದನಿಯಾಗಬೇಕು. ವಿರೋಧ ಪಕ್ಷದ ರೀತಿಯಲ್ಲಿ ಕವಿ ಕಾರ್ಯಮಾಡಬೇಕು. ಸದಾ ಸತ್ಯದ ಪರವಾಗಿದ್ದು, ಜೀವಪರ ನಿಲುವಿನ ಪ್ರತಿಪಾದಕನಾಗಿರಬೇಕು. ಸಮಾಜವನ್ನು ತಿದ್ದಿ-ತೀಡಿ ಸರಿದಾರಿಗೆ ತರುವ ರೀತಿಯಲ್ಲಿ ಅಕ್ಷರಗಳನ್ನು ಪೋಣಿಸಬೇಕು. ಕವಿಗೆ ಬದ್ಧತೆ ಮತ್ತು ಸುತ್ತಲಿನ ಸಂಗತಿಗಳನ್ನು ಸೂಕ್ಷ್ಮವಾಗಿ ಅವಲೋಕಿಸಿ ಅಭಿವ್ಯಕ್ತಿಸುವ ಒಳದನಿ ಇರಬೇಕು. ಎಂದು ಕವಿ ಹಾಗೂ ಗದಗ ಜಿಲ್ಲಾ ಖಜಾನೆ ಅಧಿಕಾರಿ ವಿ. ಹರಿನಾಥಬಾಬು ನುಡಿದರು.
ಅವರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಗದಗ ಹಾಗೂ ಡಿ.ಸಿ. ಪಾವಟೆ ಶಿಕ್ಷಣ ಮಹಾವಿದ್ಯಾಲಯ ಗದಗ ಇವರ ಸಹಯೋಗದಲ್ಲಿ ಜರುಗಿದ ಬುದ್ಧ, ಬಸವ, ಅಂಬೇಡ್ಕರ ಕವಿಗೋಷ್ಠಿಯನ್ನು ಉದ್ಘಾಟಿಸಿ ಮಾತನಾಡಿದರು.
ಬುದ್ಧ, ಬಸವ, ಅಂಬೇಡ್ಕರ ಅವರ ಚಿಂತನೆಗಳು ಸಾರ್ವಕಾಲಿಕವಾದವುಗಳು. ಅವುಗಳು ಕೇವಲ ಮಾತಿನಲ್ಲಿ ಕೊನೆಗೊಳ್ಳದೇ ಆಚರಣೆಯ ರೂಪದಲ್ಲಿ ಬಂದಾಗ ಸುಂದರ ಸಮಾಜ ನಿರ್ಮಾಣವಾಗಲು ಸಾಧ್ಯವಾಗುತ್ತದೆ. ಆ ಕೆಲಸವನ್ನು ಕವಿಗಳು, ಬರಹಗಾರರು ಮಾಡಬೇಕೆಂದು ಕರೆ ನೀಡಿದರು.
ಆಶಯ ನುಡಿಗಳನ್ನಾಡಿದ ಸಾಹಿತಿ, ಪತ್ರಕರ್ತ ಆಯ್.ಕೆ. ಕಮ್ಮಾರ, ಸ್ವಾತಂತ್ರö್ಯ, ಸಮಾನತೆ ತತ್ವಗಳನ್ನು ಬುದ್ಧ, ಬಸವ, ಅಂಬೇಡ್ಕರರು ಪ್ರತಿಪಾದಿಸಿದ್ದಾರೆ. ಜಾತಿ, ವರ್ಗ, ವರ್ಣವನ್ನು ಮೀರಿದ ಸಮಾಜ ನಿರ್ಮಾಣಗೊಳ್ಳಬೇಕಾದರೆ ಅವರ ವಿಚಾರಗಳನ್ನು ಅರಿತು ಆಚರಿಸಬೇಕೆಂದು ತಿಳಿಸಿದರು.
ಸಾಹಿತಿ ರಾಮಚಂದ್ರ ಹಂಸನೂರ ಮಾತನಾಡಿ, ಮಹಾನ್ ವ್ಯಕ್ತಿಗಳನ್ನು ಫೋಟೋಗಳಿಗಾಗಿ ಸೀಮಿತಗೊಳಿಸದೇ ಅವರ ಚಿಂತನೆಗಳಡಿ ನಮ್ಮ ಬದುಕನ್ನು ರೂಪಿಸಿಕೊಂಡಾಗ ಅವರ ಕನಸು ಈಡೇರುತ್ತದೆ. ಈ ದಿಸೆಯಲ್ಲಿ ನಮ್ಮೆಲ್ಲರ ಪ್ರಯತ್ನ ನಿರಂತರವಾಗಿರಬೇಕೆಂದು ತಿಳಿಸಿದರು.
ಪ್ರಾಚಾರ್ಯ ಎಸ್.ಪಿ. ಗೌಳಿ ಮಾತನಾಡಿ, ಕವಿಯಾದವನಿಗೆ ಸಾಮಾಜಿಕ ಜವಾಬ್ದಾರಿ ಎಲ್ಲರಿಗಿಂತಲೂ ಹೆಚ್ಚಿರುತ್ತದೆ. ಅಧ್ಯಯನದ ಮೂಲಕ ನಮ್ಮ ಅನುಭವಗಳನ್ನು ವಿಸ್ತರಿಸಿಕೊಳ್ಳಬೇಕು. ವಿದ್ಯಾರ್ಥಿಗಳು ನಿರಂತರ ಓದು ಮತ್ತು ಚರ್ಚೆಯ ಮೂಲಕ ತಮ್ಮ ಜ್ಞಾನವನ್ನು ವಿಸ್ತರಿಸಿಕೊಳ್ಳಬೇಕೆಂದರು.
ಕವಿಗೋಷ್ಠಿಯ ಲ್ಲಿಶಿಲ್ಪಾ ಮ್ಯಾಗೇರಿ, ಮಂಜುಳಾ ವೆಂಕಟೇಶಯ್ಯ, ಹೇಮಾ ಮೊರಬ, ಭುವನೇಶ್ವರಿ ಅಂಗಡಿ, ವಿನಾಯಕ ಕಮತದ, ಭಾಗ್ಯಶ್ರೀ ಹುರಕಡ್ಲಿ, ಟಿ.ಬಿ. ಕರದಾನಿ, ಹುಚ್ಚೀರಪ್ಪ ಈಟಿ, ವಿಶ್ವನಾಥ ಆದಿ, ಮಂಜುನಾಥ ವಟ್ಟಿ, ಡಾ. ಗಿರಿಜಾ ಹಸಬಿ, ಶಿವರಾಜ, ಪ್ರೇರಣಾ ಅಂಗಡಿ ಮೊದಲಾದವರು ಕವನ ವಾಚಿಸಿದರು.
ವೇದಿಕೆ ಮೇಲೆ ಯಲ್ಲಪ್ಪ ಹಂದ್ರಾಳ, ಗೋಪಾಲ ದಾಸರ, ಡಿ.ಎಸ್. ಬಾಪುರಿ ಉಪಸ್ಥಿತರಿದ್ದರು. ಡಾ. ಜಿ.ಬಿ. ಪಾಟೀಲ, ಕೆ.ಎಚ್. ಬೇಲೂರ, ಸಂಜೀವಸ್ವಾಮಿ, ಬಸವರಾಜ ತೋಟಗೇರ, ಎ.ಎಸ್. ಮಕಾನದಾರ, ಶರೀಫ ಬಿಳೇಯಲಿ, ರತ್ನಾ ಪುರಂತರ ಸೇರಿದಂತೆ ಮಹಾವಿದ್ಯಾಲಯದ ಸಿಬ್ಬಂದಿ ವರ್ಗದವರಿದ್ದರು.
ತೇಜಸ್ವಿನಿ ಗಡ್ಡಿ ಸ್ವಾಗತಿಸಿದರು. ಪ್ರಮೋದ ಕಪ್ಪಲಿ, ಅಂಜಲಿ ಬೇಲೆರಿ ನಿರೂಪಿಸಿದರು. ಕಾವೇರಿ ಹೊಂಬಳ ವಂದಿಸಿದರು.
ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಕಸಾಪ ಅಧ್ಯಕ್ಷ ವಿವೇಕಾನಂದಗೌಡ ಪಾಟೀಲ ಮಾತನಾಡಿ, ಅಸಮಾನತೆ, ಅಂಧಶ್ರದ್ಧೆಗಳನ್ನು ದೂರೀಕರಿಸಿ, ಬದುಕಿನ ಮೌಲ್ಯವನ್ನು ಅರುಹಿದ ಬುದ್ಧ, ಬಸವ, ಅಂಬೇಡ್ಕರರ ವಿಚಾರಗಳನ್ನು ಇಂದಿನ ಯುವಜನಾಂಗ ಅರಿತುಕೊಳ್ಳಬೇಕು. ಸಾಮಾಜಿಕ ಜಾಲತಾಣಗಳಿಗೆ ಬಲಿಯಾಗದೇ ಪುಸ್ತಕಗಳನ್ನು ಓದುವ ಮೂಲಕ ವ್ಯಕ್ತಿಗಳ ಸಿದ್ಧಾಂತಗಳನ್ನು ಅರ್ಥೈಸಿಕೊಳ್ಳುವ ಅಗತ್ಯವಿದೆ ಎಂದರು.