ಆದೇಶ ಹಿಂಪಡೆಯದಿದ್ದರೆ ರಾಷ್ಟ್ರಪತಿಗಳಿಗೆ ದೂರು

0
A protest by Ahinda Union
Spread the love

ವಿಜಯಸಾಕ್ಷಿ ಸುದ್ದಿ, ಗಜೇಂದ್ರಗಡ : ಜನಾದೇಶದ ಮೇರೆಗೆ ಬಹುಮತದೊಂದಿಗೆ ಆಡಳಿತ ನಡೆಸುತ್ತಿರುವ ಸಿಎಂ ಸಿದ್ದರಾಮಯ್ಯರ ವಿರುದ್ಧ ನೀಡಿರುವ ಪ್ರಾಸಿಕ್ಯೂಷನ್ ಹಿಂಪಡೆಯದಿದ್ದರೆ ರಾಷ್ಟ್ರಪತಿಗೆ ದೂರು ನೀಡಲು ನಿರ್ಧಾರ ಮಾಡಿದ್ದೇವೆ ಎಂದು ಶಾಸಕ ಜಿ.ಎಸ್. ಪಾಟೀಲ ಹೇಳಿದರು.

Advertisement

ರಾಜ್ಯದ ಜನರು ಬಹುಮತ ನೀಡಿರುವ ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರವನ್ನು ಅಸ್ಥಿರಗೊಳಿಸಲು ಕೇಂದ್ರ ಸರ್ಕಾರ ರಾಜ್ಯಪಾಲರ ಮೂಲಕ ಸಂಚನ್ನು ನಡೆಸುತ್ತಿದೆ ಎಂದು ಆರೋಪಿಸಿ ಪಟ್ಟಣದಲ್ಲಿ ಮಂಗಳವಾರ ತಾಲೂಕಾ ಅಹಿಂದ ಒಕ್ಕೂಟದಿಂದ ನಡೆದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.

ಕೆಲವು ಪ್ರಕರಣಗಳಲ್ಲಿ ಚಾರ್ಜ್ಶೀಟ್ ಸಿದ್ಧವಿದ್ದರೂ ಬಿಜೆಪಿ, ಜೆಡಿಎಸ್ ನಾಯಕರ ಪ್ರಕರಣಗಳಿಗೆ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡದ ರಾಜ್ಯಪಾಲರು ಸಿಎಂ ಸಿದ್ದರಾಮಯ್ಯ ವಿರುದ್ಧ ಕಾರ್ಯಕರ್ತರೊಬ್ಬರು ನೀಡಿದ ದೂರಿಗೆ ಮರುದಿನವೇ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿದ್ದು ಆಶ್ಚರ್ಯಕರವಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟçಪತಿಗಳನ್ನು ಭೇಟಿ ಮಾಡಲು ನಿರ್ಧರಿಸಿದ್ದೇವೆ. ಹೀಗಾಗಿ ಪ್ರಕರಣವನ್ನು ದೀರ್ಘಕ್ಕೆ ಒಯ್ಯುವ ಮುನ್ನ ರಾಜ್ಯಪಾಲರು ತಮ್ಮ ಆದೇಶ ಹಿಂಪಡೆಯಬೇಕು ಎಂದ ಆಗ್ರಹಿಸಿದ ಅವರು, ಸಿದ್ದರಾಮಯ್ಯ ರಾಜ್ಯದ ಸರ್ವ ಸಮುದಾಯಗಳ ಅಭಿವೃದ್ಧಿಯೊಂದಿಗೆ ಜನಪರ ಆಡಳಿತ ನಡೆಸುತ್ತಿದ್ದಾರೆ. ಆದರೆ ಕೇವಲ ಬಂಡವಾಳಶಾಹಿಗಳ ಪರವಾಗಿ ಆಡಳಿತ ನಡೆಸುತ್ತಿರುವ ಮೋದಿ ಅವರು ಲೋಕಸಭಾ ಚುನಾವಣೆಯಲ್ಲಿ ಚಾರ್‌ಸೌ ಪಾರ್ ಎಂದಿದ್ದರು. ಆದರೆ ದೇಶದ ಜನತೆ ಅವರಿಗೆ ಬಹುಮತ ನೀಡದೇ ಪಾಠ ಕಲಿಸಿದ್ದಾರೆ ಎಂದರು.

ಬಿಜೆಪಿ ಆಡಳಿತದಲ್ಲಿ ಜನಾರ್ಧನ ರೆಡ್ಡಿ ಸೇರಿ ಇತರರ ಹಗರಣಗಳು ದೊಡ್ಡದಿವೆ. ಸಿಎಂ ಆಗಿದ್ದಾಗ ಯಡಿಯೂರಪ್ಪ ಜೈಲುಪಾಲಾಗಿದ್ದರು. ಆದರೆ 2008ರಿಂದ ಇಲ್ಲಿವರೆಗೆ ಸಿಎಂ ಆಗಿರುವ ಸಿದ್ದರಾಮಯ್ಯ ಅವರಿಗೆ ಆಕಾಶವೇ ದೂರವಿರದ ದಿನಗಳಿದ್ದಾಗ ಸಿಎಂ ಇಂತಹ ಕ್ಷುಲ್ಲಕ ಕೆಲಸಕ್ಕೆ ಕೈ ಹಾಕಿಲ್ಲ ಎಂಬುದನ್ನು ನಾವು ಅರಿತುಕೊಂಡು ಒಗ್ಗಟ್ಟಾಗಬೇಕಿದೆ ಎಂದರು.

ಮುಖಂಡರಾದ ಎಚ್.ಎಸ್. ಸೋಂಪುರ, ಎಂ.ಎಸ್. ಹಡಪದ ಮಾತನಾಡಿದರು. ಇದಕ್ಕೂ ಮುನ್ನ ಪಟ್ಟಣದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಯಿತು. ಸಿದ್ದಪ್ಪ ಬಂಡಿ, ಮುರ್ತುಜಾ ಡಾಲಾಯತ್, ವಿ.ಆರ್. ಗುಡಿಸಾಗರ, ಎಫ್.ಎಸ್. ಕರಿದುರಗನವರ, ರಫೀಕ್ ತೋರಗಲ್, ಯಲ್ಲಪ್ಪ ಬಂಕದ, ರಾಜು ಸಾಂಗ್ಲೀಕರ, ಉಮೇಶ ರಾಠೋಡ, ಅಂದಪ್ಪ ಬಿಚ್ಚೂರ, ಶರಣು ಪೂಜಾರ, ಶಶಿಧರ ಹೂಗಾರ, ಶ್ರೀಧರ ಬಿದರಳ್ಳಿ ಸೇರಿ ಇತರರು ಇದ್ದರು.

ಕುಮಾರಸ್ವಾಮಿ ಮನೆತನದಲ್ಲಿ ನಡೆದ ಘಟನೆಗಳನ್ನು ಜನತೆ ಮರೆತಿಲ್ಲ. ಅವೆಲ್ಲವನ್ನು ಬಿಟ್ಟು ಮೈಕ್ ಮುಂದೆ ಬಂದು ನಿಲ್ಲುವ ಭಂಡತನವನ್ನು ಜೆಡಿಎಸ್ ನಾಯಕರು ಹೊಂದಿದ್ದಾರೆ. ರಾಜ್ಯದ ಬಿಜೆಪಿ ನಾಯಕರು ಮಾಡಿದ ತಪ್ಪಿಗೆ ರಾಜ್ಯದ ಜನತೆ ಪಾಠ ಕಲಿಸಿದ್ದಾರೆ. ಆದರೂ ಕೆಲ ಬಿಜೆಪಿ ನಾಯಕರು ಅದೇ ಹಾದಿಯಲ್ಲಿ ಮುಂದುವರೆಯಬೇಕು ಅಂತಿದ್ದೀರಾ, ನಿಮ್ಮ ನಾಯಕರ ಕಾರ್ಯಗಳಿಗೆ ಖುಷಿಪಡುತ್ತಿದ್ದೀರಾ, ನೀವು ಅದೇ ದೋಣಿಯಲ್ಲಿ ಸಾಗುವಿರಾ ಎಂದು ಶಾಸಕ ಜಿ.ಎಸ್. ಪಾಟೀಲ ಪ್ರಶ್ನಿಸಿದರು.

 


Spread the love

LEAVE A REPLY

Please enter your comment!
Please enter your name here