ಬೆಂಗಳೂರು: ಬಡತನದ ನಡುವೆಯೂ ಕನಸುಗಳನ್ನು ಕೈಬಿಡದೇ ಸಾಧನೆ ಮಾಡಿದ ಹೆಮ್ಮೆಯ ಕಥೆ ಇದು. ಬೆಂಗಳೂರು ಹೊರವಲಯದ ತಿರುಪಾಳ್ಯ ಗ್ರಾಮದ ನಾಗಿಣಿ ಎಲ್. ಅವರು ಸಿವಿಲ್ ನ್ಯಾಯಾಧೀಶೆಯಾಗಿ ಆಯ್ಕೆಯಾಗುವ ಮೂಲಕ ಸಾಧನೆಯ ಶಿಖರಕ್ಕೇರಿದ್ದಾರೆ.
ನಾಗಿಣಿಯ ತಂದೆ ಲಕ್ಷ್ಮಣ್ ದಿನವಿಡೀ ಆಟೋ ಚಾಲನೆ ಮಾಡಿ ಕುಟುಂಬವನ್ನು ಸಾಗಿಸುತ್ತಿದ್ದರು. ತಾಯಿ ಮಂಜುಳಾ ಮಾರುಕಟ್ಟೆಯಲ್ಲಿ ಹೂವಿನ ವ್ಯಾಪಾರ ಮಾಡುತ್ತಿದ್ದರು. ಆರ್ಥಿಕ ಸಂಕಷ್ಟಗಳಿದ್ದರೂ ಮಗಳ ವಿದ್ಯಾಭ್ಯಾಸಕ್ಕೆ ಅಡ್ಡಿಯಾಗಲಿಲ್ಲ. ಮಗಳು ಓದಿ ದೊಡ್ಡವಳಾಗಬೇಕು ಎಂಬ ಕನಸಿಗಾಗಿ ಅವರು ನಿರಂತರ ಶ್ರಮಿಸಿದರು.
ನಾಗಿಣಿ ಬಾಲ್ಯದಿಂದಲೇ ಪರಿಶ್ರಮಿ. ಬೆಳಗ್ಗೆ ತಾಯಿಗೆ ಹೂ ಮಾರಾಟದಲ್ಲಿ ಸಹಾಯ ಮಾಡಿ ನಂತರ ಶಾಲೆಗೆ ತೆರಳುತ್ತಿದ್ದಳು. 1ರಿಂದ 10ನೇ ತರಗತಿವರೆಗೆ ಸರ್ಕಾರಿ ಶಾಲೆಯಲ್ಲಿ ಕನ್ನಡ ಮಾಧ್ಯಮದಲ್ಲೇ ವಿದ್ಯಾಭ್ಯಾಸ ಮಾಡಿದರು. ಬಳಿಕ ಕಾನೂನು ಪದವಿ ಪಡೆದು ವಕೀಲೆಯಾಗಿ ಸೇವೆ ಸಲ್ಲಿಸಿದರು. ವೃತ್ತಿಯ ಜೊತೆಗೆ ನ್ಯಾಯಾಂಗ ಪರೀಕ್ಷೆಗೆ ತಯಾರಿ ನಡೆಸಿ ಹಗಲಿರುಳು ಅಧ್ಯಯನ ಮಾಡಿದ ನಾಗಿಣಿ, ಇದೀಗ ಸಿವಿಲ್ ನ್ಯಾಯಾಧೀಶೆಯಾಗಿ ಆಯ್ಕೆಯಾಗಿದ್ದಾರೆ.
ಮಗಳ ಸಾಧನೆ ಕುರಿತು ತಾಯಿ ಮಂಜುಳಾ ಸಂತಸ ವ್ಯಕ್ತಪಡಿಸಿ, ನಮ್ಮ ಕಷ್ಟ ವ್ಯರ್ಥವಾಗಲಿಲ್ಲ. ಮಗಳು ಶ್ರಮಪಟ್ಟು ಓದಿದ್ದಕ್ಕೆ ಇಂದು ಈ ಗೌರವ ಸಿಕ್ಕಿದೆ ಎಂದರು. ತಂದೆ ಲಕ್ಷ್ಮಣ್ ಕೂಡ, “ಬಡತನ ಇದ್ದರೂ ಮಕ್ಕಳಿಗೆ ಶಿಕ್ಷಣ ನೀಡಬೇಕು. ಮಗಳು ನಮ್ಮ ಕನಸು ನನಸು ಮಾಡಿದ್ದಾಳೆ.
ನ್ಯಾಯಾಧೀಶೆಯಾಗಿ ನೊಂದವರಿಗೆ ನ್ಯಾಯ ನೀಡಲಿ ಎಂದು ಆಶಿಸಿದರು. ನಾಗಿಣಿಯ ಸಾಧನೆ ಇಂದಿನ ಯುವ ಸಮುದಾಯಕ್ಕೆ ಪ್ರೇರಣೆಯಾಗಿದೆ. ಸಂಕಲ್ಪ ಮತ್ತು ಪರಿಶ್ರಮ ಇದ್ದರೆ ಬಡತನ ಸಾಧನೆಗೆ ಅಡ್ಡಿಯಲ್ಲ ಎಂಬುದಕ್ಕೆ ಅವರು ಜೀವಂತ ಸಾಕ್ಷಿಯಾಗಿದ್ದಾರೆ.



