ಚಿಕ್ಕಮಗಳೂರು:- ಜಿಲ್ಲೆಯ ತರೀಕೆರೆ ತಾಲೂಕಿನ ಅಮೃತಾಪುರ ಗ್ರಾಮದಲ್ಲಿ ಚೀಟಿ ಹಣದ ವಿಚಾರವಾಗಿ ಯುವಕನನ್ನ ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಜರುಗಿದೆ.
27 ವರ್ಷದ ಸಂಜುನಾಯ್ಕ ಕೊಲೆಯಾದ ದುರ್ದೈವಿ. 30 ವರ್ಷದ ರುದ್ರೇಶ್ ನಾಯ್ಕ ಎಂಬಾತನಿಂದ ಕೊಲೆ ನಡೆದಿದೆ. ಅಮೃತಾಪುರ ಗ್ರಾಮದ ಸೇವಾಲಾಲ್ ಸಂಘದ ಚೀಟಿ ವ್ಯವಹಾರದಲ್ಲಿ ಇಬ್ಬರ ನಡುವೆ ಗಲಾಟೆಯಾಗಿದೆ. ಗಲಾಟೆ ವೇಳೆ ರುದ್ರೇಶ್, ಸಂಜುನಾಯ್ಕನ ತಲೆ ಮೇಲೆ ದೊಣ್ಣೆಯಿಂದ ಹಲ್ಲೆ ಮಾಡಿದ್ದಾನೆ. ಪರಿಣಾಮ ಗಂಭೀರ ಗಾಯಗೊಂಡು ರಕ್ತಸ್ರಾವದಿಂದ ಯುವಕ ಸಾವಿಗೀಡಾಗಿದ್ದಾನೆ.
ಹತ್ಯೆಯಾದ ಸಂಜುನಾಯ್ಕ ಸರಿಯಾಗಿ ಚೀಟಿ ಕಟ್ಟದೇ ಚೀಟಿ ಸದಸ್ಯರ ಜೊತೆ ಗಲಾಟೆ ಮಾಡುತ್ತಿದ್ದ. ಇದರಿಂದ ಗ್ರಾಮಸ್ಥರು ಅವನನ್ನು ಚೀಟಿಯಿಂದ ತೆಗೆದು ಹಾಕಿದ್ದರು. ಚೀಟಿ ದಿನ ವ್ಯವಹಾರ ನಡೆಯುವ ಜಾಗಕ್ಕೆ ಬಂದ ಸಂಜುನನ್ನ ಸದಸ್ಯರು ವಾಪಸ್ ಕಳಿಸಿದ್ದರು. ಮನೆಗೆ ಹೋಗಿದ್ದ ಸಂಜು ಮನೆಯಿಂದ ಸದಸ್ಯರಿಗೆ ಕರೆ ಮಾಡಿ ಜಗಳ ಮಾಡುತ್ತಿದ್ದ. ಮತ್ತೆ ಸದಸ್ಯರ ಬಳಿ ಬಂದು ನೇರವಾಗಿ ಗಲಾಟೆಗೆ ಮುಂದಾದಾಗ ರುದ್ರೇಶ್ ನಾಯ್ಕ ದೊಣ್ಣೆಯಿಂದ ತಲೆಗೆ ಹೊಡೆದಿದ್ದಾನೆ. ಈ ವೇಳೆ ತೀವ್ರ ರಕ್ತಸ್ರಾವದಿಂದ ಸಂಜುನಾಯ್ಕ ಸಾವನ್ನಪ್ಪಿದ್ದಾರೆ.
ತರೀಕೆರೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ಸ್ಥಳ ಪರಿಶೀಲನೆ ನಡೆಸಿದ್ದಾರೆ.