ವಿಜಯಸಾಕ್ಷಿ ಸುದ್ದಿ, ಗದಗ : ಮೇ 7ರಂದು ನಡೆಯಲಿರುವ ಲೋಕಸಭಾ ಚುನಾವಣೆಯಲ್ಲಿ ಎಲ್ಲ ಅರ್ಹ ಮತದಾರರು ಕಡ್ಡಾಯವಾಗಿ ಮತದಾನ ಮಾಡಲು ಯುವಜನ ಕ್ರೀಡಾ ಇಲಾಖೆಯ ನೆಹರು ಯುವ ಕೇಂದ್ರದ ಜಿಲ್ಲಾ ನಿರ್ದೇಶಕ, ಗದಗ ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿ ಪ್ರೊ. ಕಿಶೋರಬಾಬು ನಾಗರಕಟ್ಟಿಯವರು ವಿನಂತಿಸಿದ್ದಾರೆ.
ಮತದಾನ ಎನ್ನುವುದು ಒಂದು ಪವಿತ್ರ ಕಾರ್ಯವಾಗಿದ್ದು, ಭಾರತ ದೇಶದ ಪ್ರಜೆಯಾಗಿ ನಾವು ನಮ್ಮ ಹಕ್ಕುಗಳನ್ನು ಯಾವ ರೀತಿಯಾಗಿ ಪ್ರತಿಪಾದಿಸುತ್ತೇವೆಯೋ ಅದೇ ರೀತಿಯಾಗಿ ಮತದಾನವು ನಮ್ಮ ಕರ್ತವ್ಯವಾಗಿದೆ. 5 ವರ್ಷಕ್ಕೊಮ್ಮೆ ಬರುವ ಸಾರ್ವತ್ರಿಕ ಚುನಾವಣೆಯಲ್ಲಿ ಉತ್ತಮ ವ್ಯಕ್ತಿಗೆ ಮತದಾನ ಮಾಡುವ ಮೂಲಕ ನಮ್ಮ ಪ್ರತಿನಿಧಿಯನ್ನು ಆಯ್ಕೆ ಮಾಡುವುದು ನಮ್ಮ ಆದ್ಯ ಕರ್ತವ್ಯವಾಗಿದೆ.
ಆದ್ದರಿಂದ ಮತದಾನದ ದಿನದಂದು ವೈಯಕ್ತಿಕ ಕೆಲಸಗಳನ್ನು ಬದಿಗಿಟ್ಟು, `ಸದೃಢ ಸಮಾಜಕ್ಕಾಗಿ ಮೊದಲು ನನ್ನ ಮತ’ ಎನ್ನುವುದನ್ನು ಮನದಲ್ಲಿಟ್ಟುಕೊಂಡು ಮತದಾನ ಮಾಡಲು ಪ್ರೊ. ಕಿಶೋರಬಾಬು ನಾಗರಕಟ್ಟಿ ವಿನಂತಿಸಿದ್ದಾರೆ.
Advertisement