ವಿಜಯಸಾಕ್ಷಿ ಸುದ್ದಿ, ಗದಗ: ಗದಗ-ಬೆಟಗೇರಿ ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆಗೆ ಹೈಕೋರ್ಟ್ ಸಮ್ಮತಿ ನೀಡಿದ್ದರಿಂದ ಗದಗ-ಬೆಟಗೇರಿ ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆ ದಿನಾಂಕವನ್ನು ನಿಗದಿಪಡಿಸಿರುವ ಬಗ್ಗೆ ಲಿಖಿತ ಮಾಹಿತಿ ಒದಗಿಸುವಂತೆ ಗದಗ ಜಿಲ್ಲಾ ಬಿಜೆಪಿ ಅಧ್ಯಕ್ಷ ರಾಜು ಕುರಡಗಿ ನೇತೃತ್ವದಲ್ಲಿ ಬಿಜೆಪಿ ಪಕ್ಷದ ನಗರಸಭೆ ಸದಸ್ಯರು, ಮುಖಂಡರು ಗದಗ ಉಪವಿಭಾಗಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದರು.
ಗದಗ ಜಿಲ್ಲಾ ಬಿಜೆಪಿ ಅಧ್ಯಕ್ಷ ರಾಜು ಕುರುಡಗಿ ಮಾತನಾಡಿ, ದಿನಾಂಕ 09/01/2025ರಂದು ಹೈಕೋರ್ಟ್ನ ದೃಢೀಕೃತ ಆದೇಶದೊಂದಿಗೆ ಅರ್ಜಿ ಸಲ್ಲಿಸಲಾಗಿತ್ತು. ಆದರೆ ಈ ಬಗ್ಗೆ ವಿನಾಕಾರಣ ವಿಳಂಬ ಮಾಡುತ್ತಿದ್ದು ಮೇಲ್ನೋಟಕ್ಕೆ ಕಂಡುಬರುತ್ತಿದೆ.
ಹೈಕೋರ್ಟ್ನಲ್ಲಿದ್ದ ಸ್ಥಳೀಯ ಸಂಸ್ಥೆಗಳ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆಗೆ ಸಂಬಂಧಿಸಿದಂತೆ 18 ಪ್ರಕರಣಗಳಲ್ಲಿ ಸರಿ ಸುಮಾರು 17 ಸ್ಥಳೀಯ ಸಂಸ್ಥೆಗಳ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆ ಪ್ರಕ್ರಿಯೆ ಪೂರ್ಣಗೊಂಡಿದೆ. ಆದರೆ ನಗರಸಭೆಯ ಸದರಿ ಚುನಾವಣೆಯ ಚುನಾವಣಾಧಿಕಾರಿಯಾಗಿರುವ ತಾವು ಸೂಕ್ತ ಕ್ರಮ ಜರುಗಿಸದೆ, ದಿನಾಂಕವನ್ನು ನಿಗದಿಪಡಿಸದೆ ಸದಸ್ಯರ ಹಕ್ಕು-ಕರ್ತವ್ಯಕ್ಕೆ ಚ್ಯುತಿ ಬರುವಂತೆ ನಡೆದುಕೊಳ್ಳುತ್ತಿರುವುದು ಜನಪ್ರತಿನಿಧಿಗಳಿಗೆ ಅವಮಾನಿಸಿದಂತಾಗುತ್ತಿದೆ ಎಂದರು.
ಮನವಿ ಸ್ವೀಕರಿಸಿದ ಉಪವಿಭಾಗಾಧಿಕಾರಿಗಳು, ಈ ಪ್ರಕರಣದ ಬಗ್ಗೆ ಕಾನೂನಿನನ್ವಯ ನಿಗದಿತ ಸಮಯದಲ್ಲಿ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರಾದ ಎಂ.ಎಸ್. ಕರಿಗೌಡ್ರ, ನಗರಸಭೆ ಹಿರಿಯ ಸದಸ್ಯರಾದ ವಿನಾಯಕ ಮಾನ್ವಿ, ಅನಿಲ ಅಬ್ಬಿಗೇರಿ, ಮುತ್ತು ಮುಶಿಗೇರಿ, ಚಂದ್ರು ತಡಸದ, ನಾಗರಾಜ ತಳವಾರ, ಮಹಾಂತೇಶ ಶಲವಡಿ, ಉಷಾ ಮಹೇಶ ದಾಸರ, ವಿದ್ಯಾವತಿ ಗಡಗಿ, ಲಕ್ಷ್ಮೀ ಕಾಕಿ, ರಾಘು ಯಳವತ್ತಿ, ಪ್ರಕಾಶ ಅಂಗಡಿ, ಸುಧೀರ ಕಾಟಿಗರ, ಬಿಜೆಪಿ ಕಾರ್ಯಕರ್ತರಾದ ಮಹೇಶ ದಾಸರ, ಪ್ರಶಾಂತ ನಾಯ್ಕರ, ರಮೇಶ ಸಜ್ಜಗಾರ ಸೇರಿದಂತೆ ಬಿಜೆಪಿ ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು.