ವಿಜಯಸಾಕ್ಷಿ ಸುದ್ದಿ, ಗದಗ: ಇತ್ತೀಚೆಗೆ ಗದಗ ನಗರದ ಸೆಟ್ಲಮೆಂಟ್ ಗಾಂಧಿ ನಗರದ ಘಟನೆಯಲ್ಲಿ ಮೀಟರ್ ಬಡ್ಡಿ ದಂಧೆಕೋರರು ದಶರಥ ಬಳ್ಳಾರಿಯವರಿಗೆ ಚಿತ್ರಹಿಂಸೆ ನೀಡಿದ್ದಾರೆ. ಆದ್ದರಿಂದ ಮೀಟರ್ ಬಡ್ಡಿ ದಂಧೆಕೋರರನ್ನು ಕೂಡಲೇ ಬಂಧಿಸಿ, ಗಡಿಪಾರು ಮಾಡಬೇಕು ಹಾಗೂ ಅವರ ಆಸ್ತಿಯ ಮೇಲೆ ಮುಟ್ಟುಗೋಲು ಹಾಕಬೇಕೆಂದು ರಾಜ್ಯ ದಲಿತ ಸಂಘರ್ಷ ಸಮಿತಿಯ ಮುಖಂಡ ಎಸ್.ಎನ್. ಬಳ್ಳಾರಿ ನೇತೃತ್ವದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಎಸ್. ನೇಮಗೌಡ ಅವರಿಗೆ ಮನವಿ ಸಲ್ಲಿಸಿದರು.
ಆರೋಪಿಗಳಾದ ಮಂಜುನಾಥ ಹಂಸನೂರ, ಡಿಸ್ಕವರಿ ಮಂಜು, ಮಹೇಶ ಹಂಸನೂರ, ಹನಮಂತ ಎಂಬುವರಿಂದ ಈ ಕೃತ್ಯ ನಡೆದಿದ್ದು, ಮನೆಯಲ್ಲಿ ಕೂಡಿಹಾಕಿ ಬೆಲ್ಟ್, ಕೇಬಲ್ ವಾಯರ್ ಹಾಗೂ ಕುರ್ಚಿಯಿಂದ ಹೊಡೆದು ಚಿತ್ರಹಿಂಸೆ ಕೊಟ್ಟಿದ್ದಾರೆ. ಈ ಆರೋಪಿಗಳನ್ನು ಕೂಡಲೇ ಬಂಧಿಸಬೇಕು ಹಾಗೂ ಗದಗ ಜಿಲ್ಲೆಯಿಂದ ಗಡಿಪಾರು ಮಾಡಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಜೈಭೀಮ್ ಸಂಘರ್ಷ ಸಮಿತಿಯ ಗದಗ ಜಿಲ್ಲಾಧ್ಯಕ್ಷ ಗಣೇಶ ವಾಯ್.ಹುಬ್ಬಳ್ಳಿ, ಕರ್ನಾಟಕ ಮಾದಿಗ ಸಂಘರ್ಷ ಸಮಿತಿ ಜಿಲ್ಲಾಧ್ಯಕ್ಷ ರಾಘವೇಂದ್ರ ಪರಸಪ್ಪ ಪರಾಪೂರ, ಮಂಜುನಾಥ ತೌಜಲ್, ಮರಿಯಪ್ಪ ಪರಾಪೂರ, ಗಿರೀಶ ತಳಗೇರಿ, ಕೃಷ್ಣ, ಪರಶುರಾಮ ಪೂಜಾರ ಮುಂತಾದವರು ಉಪಸ್ಥಿತರಿದ್ದರು.