ನಟ ಸುದೀಪ್ ಕೇವಲ ಒಳ್ಳೆಯ ನಟ ಮಾತ್ರವಲ್ಲ, ಜವಾಬ್ದಾರಿಯುತ ಮತ್ತು ಸೆನ್ಸಿಬಲ್ ವ್ಯಕ್ತಿಯೂ ಹೌದು ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ. ಇತ್ತೀಚೆಗೆ ಪೈರಸಿ ಕುರಿತು ಅವರು ಮಾತನಾಡಿದ ಮಾತು ವಿವಾದಕ್ಕೆ ಕಾರಣವಾಗಿತ್ತು. ಕೆಲವರು ಆ ವಿವಾದಕ್ಕೆ ತುಪ್ಪ ಸುರಿದು ಅದನ್ನು ಕಾಡ್ಗಿಚ್ಚಾಗಿಸಲು ಪ್ರಯತ್ನಿಸಿದರೂ, ಸುದೀಪ್ ಅದನ್ನೆಲ್ಲ ಜಾಣ್ಮೆಯಿಂದಲೇ ನಿಭಾಯಿಸಿದರು. ಹೇಳಿಕೆಯ ನಂತರ ನೀಡಿದ ಪ್ರತಿಯೊಂದು ಸಂದರ್ಶನದಲ್ಲೂ ಅವರು ಜವಾಬ್ದಾರಿಯುತವಾಗಿ ಮಾತನಾಡಿ, ವಿವಾದ ಹೆಚ್ಚಾಗದಂತೆ ತಡೆದರು.
ಹುಬ್ಬಳ್ಳಿಯಲ್ಲಿ ಪೈರಸಿ ವಿರುದ್ಧ ಮಾತನಾಡಿದ್ದನ್ನು ಕೆಲವರು ವೈಯಕ್ತಿಕವಾಗಿ ಪರಿಗಣಿಸಿ ಸಾಮಾಜಿಕ ಜಾಲತಾಣದಲ್ಲಿ ಸುದೀಪ್ ವಿರುದ್ಧ ಟೀಕೆ ನಡೆಸಿದರು. ದರ್ಶನ್ ಅಭಿಮಾನಿಗಳಿಂದ ಪೋಸ್ಟ್ಗಳು ಹರಿದಾಡಿದವು. ಇದೇ ವೇಳೆ ದರ್ಶನ್ ಪತ್ನಿ ವಿಜಯಲಕ್ಷ್ಮಿ ಅವರ ಹೇಳಿಕೆ ಹಾಗೂ ದರ್ಶನ್ ಆಪ್ತ ಧನ್ವೀರ್ ಅವರ ಟ್ವೀಟ್ಗಳು ವಿವಾದಕ್ಕೆ ಇನ್ನಷ್ಟು ಇಂಧನ ನೀಡಿದವು. ಇದಕ್ಕೆ ಸುದೀಪ್ ಆಪ್ತ ವಿನಯ್ ಕೂಡ ಪ್ರತಿಕ್ರಿಯಿಸಿದ್ದರು.
ಈ ಎಲ್ಲದರ ನಡುವೆ, ಸುದೀಪ್ ತಮ್ಮ ವಿರುದ್ಧ ಮಾತನಾಡಿದ ಯುವ ನಟರ ಬಗ್ಗೆಯೂ ಕೋಪವಿಲ್ಲದೆ, ಪ್ರೀತಿ ಮತ್ತು ಗೌರವದಿಂದಲೇ ಮಾತನಾಡಿದರು. ಸಂದರ್ಶನವೊಂದರಲ್ಲಿ ಮಾತನಾಡಿದ ಅವರು, ಧನ್ವೀರ್ ಹಾಗೂ ವಿನಯ್ ಇಬ್ಬರೂ ತಮ್ಮಿಗೆ ಒಂದೇ, ಅವರು ಚಿತ್ರರಂಗದ ಯುವ ನಟರು ಎಂದರು. ಧನ್ವೀರ್ ಅವರ ಕೆಲಸ ಮತ್ತು ನಡವಳಿಕೆಯನ್ನು ತಾವು ಮೆಚ್ಚಿಕೊಳ್ಳುತ್ತೇನೆ ಎಂದು ಹೇಳಿದರು.
ಮುಂದುವರೆದು, “ಒಬ್ಬ ಹೀರೋ ಜೊತೆಗೆ ನಿಲ್ಲಬೇಕು ಅಂದರೆ ನಿಯತ್ತು, ಲಾಯಲ್ಟಿ ಮತ್ತು ಪ್ರೀತಿ ಇರಬೇಕು. ನಮ್ಮ ಹೀರೋ ಜೊತೆ ನಿಂತುಕೊಳ್ಳಬೇಕು ಎಂಬ ಅವರ ಹಠ ನನಗೆ ಇಷ್ಟವಾಯಿತು” ಎಂದು ಹೇಳುವ ಮೂಲಕ ಪರೋಕ್ಷವಾಗಿ ಟೀಕೆ ಮಾಡಿದವರ ಬಗ್ಗೆಯೂ ಸುದೀಪ್ ಪ್ರಶಂಸಾತ್ಮಕ ಮಾತುಗಳನ್ನೇ ಆಡಿದರು.
ಸುದೀಪ್ ಅವರ ಈ ಸಂಯಮಿತ, ತೂಕದ ಮಾತುಗಳನ್ನು ದರ್ಶನ್ ಅಭಿಮಾನಿಗಳೂ ಸೇರಿದಂತೆ ಅನೇಕರು ಮೆಚ್ಚಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಿದ್ದಾರೆ. ತಮ್ಮ ನಡವಳಿಕೆ ಮತ್ತು ಮಾತಿನ ಮೂಲಕ ವಿರೋಧಿಗಳ ಮನವನ್ನೂ ಗೆದ್ದ ಕಿಚ್ಚ ಸುದೀಪ್ ಮತ್ತೊಮ್ಮೆ ತಮ್ಮ ದೊಡ್ಡತನವನ್ನು ತೋರಿಸಿದ್ದಾರೆ.



