ವಿಜಯಸಾಕ್ಷಿ ಸುದ್ದಿ, ಗದಗ : ರಾಮನಗರದ ಕಾಂಗ್ರೆಸ್ ಶಾಸಕರ ಅಶ್ಲೀಲ ವಿಡಿಯೊ ಈಗಾಗಲೇ ರಾಜ್ಯಾದ್ಯಂತ ಓಡಾಡುತ್ತಿದ್ದು, ಇದರ ವಿರುದ್ಧ ಯಾರೂ ಮಾತನಾಡುತ್ತಿಲ್ಲ. ಅವಳಿ ನಗರದಲ್ಲಿ ನೀರಿನ ಸಮಸ್ಯೆ ತಾಂಡವಾಡುತ್ತಿದ್ದು, ಇದೆಲ್ಲವನ್ನು ಖಂಡಿಸಿ ಖಾಲಿ ಕೊಡ ಹಿಡಿದು ಮೇ.4ರಂದು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಆಗಮಿಸಿದ ಸಂದರ್ಭದಲ್ಲಿ ಜಿಲ್ಲಾ ಜೆಡಿಎಸ್ನಿಂದ ಮುತ್ತಿಗೆ ಹಾಕಲಾಗುವುದು ಎಂದು ಜೆಡಿಎಸ್ ರಾಜ್ಯ ವಕ್ತಾರ ವ್ಹಿ.ಆರ್. ಗೋವಿಂದಗೌಡ್ರ ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಬುಧವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಿಂದೆ ಕಾಂಗ್ರೆಸ್ ಶಾಸಕ ಹೆಚ್.ವೈ. ಮೇಟಿಯವರ ರಾಸಲೀಲೆ ಪ್ರಕರಣದಲ್ಲಿ, ಆಗ ಸಿಎಂ ಆಗಿದ್ದ ಸಿದ್ದರಾಮಯ್ಯನವರು ಮಾತನಾಡಲಿಲ್ಲ. ಪ್ರಜ್ವಲ್ ರೇವಣ್ಣನವರನ್ನು ಈಗಾಗಲೇ ಪಕ್ಷದಿಂದ ಉಚ್ಛಾಟನೆ ಮಾಡಲಾಗಿದೆ. 2ರಿಂದ 3ಸಾವಿರ ಮಹಿಳೆಯರ ಅಶ್ಲೀಲ ವಿಡಿಯೊಗಳನ್ನು ಕಾಂಗ್ರೆಸ್ನವರೇ ಹಂಚಿದ್ದಾರೆ. ಆ ಮಹಿಳೆಯರಿಗೆ ಕಾಂಗ್ರೆಸ್ ಪಕ್ಷ ಅವಮಾನ ಮಾಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕುಮಾರಸ್ವಾಮಿ ಸಿಎಂ ಆಗಿದ್ದಾಗ ಮದ್ಯ ಹಾಗೂ ಲಾಟರಿ ಬಂದ್ ಮಾಡಿಸಿ ಮಹಿಳೆಯರ ಹಿತ ಕಾಪಾಡಿದ್ದರು.
ತದ್ವಿರುದ್ಧವಾಗಿ ಈಗಿನ ಕಾಂಗ್ರೆಸ್ ಸರ್ಕಾರ ಸಾರಾಯಿ ಕುಡಿಸಿ ಜನರನ್ನು ಹಾಳು ಮಾಡುತ್ತಿದೆ. ಕಾಂಗ್ರೆಸ್ ಪ್ರಣಾಳಿಕೆ ಬಗ್ಗೆ ಮಿತ್ರ ಪಕ್ಷದವರೇ ಒಪ್ಪಿಗೆ ಸೂಚಿಸಿಲ್ಲ. ಕೇಂದ್ರದಲ್ಲಿ ಯಾವುದೇ ಪಕ್ಷ ಅಧಿಕಾರಕ್ಕೆ ಬರಲು 272ಸ್ಥಾನ ಬೇಕು. ಆದರೆ, ದೇಶಾದ್ಯತ ಕೇವಲ 230 ಕ್ಷೇತ್ರಗಳಲ್ಲಿ ಮಾತ್ರ ಕಾಂಗ್ರೆಸ್ ಸ್ಪರ್ಧಿಸಿದೆ. ಅದರಲ್ಲಿ ಈಗಾಗಲೇ ಎರಡು ಸ್ಥಾನ ಕಳೆದುಕೊಂಡಿದೆ. ಇಂತಹ ಪರಿಸ್ಥಿತಿಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲು ಸಾಧ್ಯವೇ ಎಂದು ಪ್ರಶ್ನಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಲ್ಲಿಕಾರ್ಜುನ ಪರ್ವತಗೌಡ್ರ, ಪ್ರಫುಲ್ ಪುಣೇಕರ್, ಜೋಸೆಫ್ ಉದೋಜಿ, ಜಿ.ಕೆ. ಕೊಳ್ಳಿಮಠ ಸೇರಿದಂತೆ ಜೆಡಿಎಸ್ ಮುಖಂಡರು ಉಪಸ್ಥಿತರಿದ್ದರು.
ಪಕ್ಷದ ವಯಕ್ತಿಕ ಸಭೆ ನಡೆದಾಗ ಗಲಾಟೆ ಮಾಡಿದ್ದು ತಪ್ಪು. ನೇಹಾ ಹಿರೇಮಠ, ಸೌಜನ್ಯ ಸೇರಿದಂತೆ ಹಲವು ಮಹಿಳೆಯರ ದೌರ್ಜನ್ಯದ ಬಗ್ಗೆ ಕಾಂಗ್ರೆಸ್ ಪಕ್ಷದ ಮಹಿಳಾ ಮುಖಂಡರು ಮಾತನಾಡುತ್ತಿಲ್ಲ. ಪ್ರಜ್ವಲ್ ಪ್ರಕರಣದಲ್ಲಿ ರಾಜಕೀಯ ಲಾಭ ಪಡೆಯಲು ಕಾಂಗ್ರೆಸ್ ಮುಂದಾಗಿದೆ. ಬೇರೆ ಮಹಿಳೆಯರಿಗೆ ಅನ್ಯಾಯವಾದಾಗ ಬಾಯಿ ಬಿಡುವುದಿಲ್ಲ. ಒಬ್ಬ ಮಹಿಳೆ ಸಿಎಂ ಬಳಿ ನ್ಯಾಯ ಕೇಳಲು ಹೋದಾಗ ಕೆಟ್ಟದಾಗಿ ನಡೆದುಕೊಳ್ಳುತ್ತಾರೆ. ಈ ಬಗ್ಗೆ ಕಾಂಗ್ರೆಸ್ ಮಹಿಳೆಯರು ಮಾತನಾಡುವುದಿಲ್ಲ. ಪ್ರಜ್ವಲ್ ಪ್ರಕರಣದ ಮಹಿಳೆಯರ ವಿಡಿಯೊ ಲೀಕ್ ಮಾಡಿ ಅವರ ಮಾನ ಹರಾಜು ಹಾಕಿದ್ದು ಇದೇ ಕಾಂಗ್ರೆಸ್. ಚುನಾವಣೆಯಲ್ಲಿ ಸೋಲುವ ಭೀತಿಯಿಂದ ಕಾಂಗ್ರೆಸ್ ಈ ರೀತಿ ಕುತಂತ್ರ ಮಾಡುತ್ತಿದೆ.
– ವ್ಹಿ.ಆರ್. ಗೋವಿಂದಗೌಡ್ರ.
ಜೆಡಿಎಸ್ ರಾಜ್ಯ ವಕ್ತಾರ.