ವಿಜಯಸಾಕ್ಷಿ ಸುದ್ದಿ, ನರಗುಂದ : ರೈತರಿಗೆ ಅಗತ್ಯ ಬೀಜ, ಗೊಬ್ಬರ ಇನ್ನಿತರ ಸವಲತ್ತುಗಳನ್ನು ಒದಗಿಸಬೇಕಾದ ರೈತ ಸಂಪರ್ಕ ಕೇಂದ್ರ ಮುಂಜಾನೆ 10.30, 11 ಗಂಟೆಯಾದರೂ ಬೀಗ ತೆಗೆಯದೇ ಇರುವುದಕ್ಕೆ ಗ್ರಾಮದ ರೈತರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ನರಗುಂದ ತಾಲೂಕಿನ ಕೊಣ್ಣೂರ ಹೊಬಳಿಯಲ್ಲಿರುವ ರೈತ ಸಂಪರ್ಕ ಕೇಂದ್ರ ಸುತ್ತಮುತ್ತಲಿನ ಹತ್ತು ಹಳ್ಳಿಗಳ ರೈತರಿಗೆ ಕೃಷಿ ಸಂಬಂಧಿತ ಮಾಹಿತಿ ಹಾಗೂ ಬೀಜ, ಗೊಬ್ಬರ ಇತ್ಯಾದಿ ಪರಿಕರಗಳನ್ನು ವಿತರಣೆಗೆ ಅನೂಕುಲವಾಗಲೆಂದೇ ಸ್ಥಾಪಿಸಲಾಗಿದ್ದು, ಸಂಬಂಧಪಟ್ಟ ಅಧಿಕಾರಿಗಳು ಕಚೇರಿಯ ಸಮಯಕ್ಕೆ ಸರಿಯಾಗಿ ಬರುತ್ತಿಲ್ಲ ಎಂದು ರೈತರು ಆರೋಪಿಸಿದ್ದಾರೆ.
ಯಾವುದೋ ಸಭೆಯಿದೆ, ಕಚೇರಿ ಕೆಲಸವಿದೆ ಎಂದು ಕುಂಟು ನೆಪ ಹೇಳಿ ಮಧ್ಯಾಹ್ನ 2 ಅಥವಾ 3 ಗಂಟೆಗೆ ಬೀಗ ಹಾಕುತ್ತಾರೆ. ಹೀಗಾದರೆ, ರೈತರಿಗೆ ಅನುಕೂಲಗಳನ್ನು ಕಲ್ಪಿಸುವುದು ಯಾವಾಗ ಎಂಬುದು ರೈತರ ಪ್ರಶ್ನೆ.



