ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ : ಜಾಗತಿಕ, ಜಗನ್ಮಾನ್ಯವಾದ ಸಂಸ್ಕೃತವು ಎಲ್ಲ ಭಾಷೆಗಳಿಗೆ ಜನನಿಯಾಗಿದ್ದು, ಸಂಸ್ಕೃತ ಭಾಷೆಯ ಜ್ಞಾನ ಮಕ್ಕಳಿಗೆ ಕಲಿಸಬೇಕು ಎಂದು ಧಾರವಾಡ ವಲಯ ವಿಷಯ ಪರಿವೀಕ್ಷಕರಾದ ವಿದ್ವಾನ್ ಗಣಪತಿ ಭಟ್ ಗಾಂವಕರ ಹೇಳಿದರು.
ಅವರು ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯ, ಸಂಸ್ಕೃತ ಶಿಕ್ಷಣ ನಿರ್ದೇಶನಾಲಯ ಬೆಂಗಳೂರು ಮತ್ತು ಪಟ್ಟಣದ ಶ್ರೀ ತಾಯಿ ಪಾರ್ವತಿ ಮಕ್ಕಳ ಬಳಗ ಆಶ್ರಯದಲ್ಲಿ ಶ್ರೀ ಜಗದ್ಗುರು ರೇಣುಕಾಚಾರ್ಯ ಸಂಸ್ಕೃತ ಪಾಠಶಾಲೆಯಲ್ಲಿ ಸೋಮವಾರ ನಡೆದ `ಅಸ್ಮಾಕಂ ಸಂಸ್ಸೃತಂ’ ಎಂಬ ಸರಣಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸಂಸ್ಕೃತ ಭಾಷೆಯ ಕಲಿಕೆಯಿಂದ ಕುವೆಂಪುರವರ ಶ್ರೀ ರಾಮಾಯಣ ದರ್ಶನಂದಂತಹ ಮಹಾಕಾವ್ಯಗಳನ್ನು ಓದಬಹುದು. ಈ ಭಾಷೆಯ ಜ್ಞಾನಕ್ಕೆ ವಿಶ್ವ ಮಾನ್ಯತೆಯಿದ್ದು, ಮಕ್ಕಳು ಬಾಲ್ಯದಲ್ಲಿಯೇ ಸಂಸ್ಕೃತ ಭಾಷೆಯ ಸಾಮಾನ್ಯ ಜ್ಞಾನವನ್ನಾದರೂ ಹೊಂದಬೇಕು. ಈ ನಿಟ್ಟಿನಲ್ಲಿ ಪಟ್ಟಣದ ಪಾರ್ವತಿ ಮಕ್ಕಳ ಬಳಗದ ಕಾರ್ಯ ಶ್ಲಾಘನೀಯ ಎಂದರು.
ಕಾರ್ಯಕ್ರಮದ ಪೂರ್ವದಲ್ಲಿ ಸಂಸ್ಕೃತ ಭಾಷೆಯ ಬಗ್ಗೆ ಘೋಷಣೆ ಕೂಗುತ್ತಾ ಪಟ್ಟಣದಲ್ಲಿ ಜಾಥಾ ಮಾಡಲಾಯಿತು. ಈ ವೇಳೆ ವಿದ್ಯಾರ್ಥಿಗಳಿಂದ ಸಾಮೂಹಿಕ ರಕ್ಷಾಬಂಧನ ಕಾರ್ಯಕ್ರಮ, ಭಗವದ್ಗೀತೆ ಶ್ಲೋಕ, ಸಂಸ್ಕೃತ ಗೀತೆ ಪ್ರಸ್ತುತಿ ನಡೆಯಿತು. ಸಮಾಜ ಚಿಂತಕಿ ಶಾರದಕ್ಕ ಮಹಾಂತಶೆಟ್ಟರ, ಮುಖ್ಯ ಶಿಕ್ಷಕಾದ ಜೆ.ಡಿ. ಲಮಾಣಿ, ಇಂದುಮತಿ ಜಕ್ಕನಗೌಡ್ರ, ಹನುಮಂತಪ್ಪ ಭಜಂತ್ರಿ ಮಾತನಾಡಿದರು. ಸಾಕ್ಷಿ ಮೆಣಸಿನಕಾಯಿ, ಕೆ.ಎಸ್. ಹಿರೇಮಠ, ಪಿ.ಎಸ್. ಕೊಂಡಾಬಂಗಿ, ಆಯ್.ಬಿ. ಬಳಿಗಾರ ಸೇರಿ ಹಲವರಿದ್ದರು.