HomeGadag Newsಟಿಎಪಿಸಿಎಂಎಸ್‌ನಲ್ಲಿ ಪ್ರಾರಂಭಿಸಿರುವ ಗೋವಿನಜೋಳ ಖರೀದಿ ಕೇಂದ್ರದಲ್ಲಿ ಗೊಂದಲಗಳ ಸರಮಾಲೆ

ಟಿಎಪಿಸಿಎಂಎಸ್‌ನಲ್ಲಿ ಪ್ರಾರಂಭಿಸಿರುವ ಗೋವಿನಜೋಳ ಖರೀದಿ ಕೇಂದ್ರದಲ್ಲಿ ಗೊಂದಲಗಳ ಸರಮಾಲೆ

For Dai;y Updates Join Our whatsapp Group

Spread the love

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಪಟ್ಟಣದಲ್ಲಿ ರೈತರ ಹೋರಾಟದ ಫಲವಾಗಿ ಇದೇ ತಿಂಗಳು 1ರಂದು ಗೋವಿನಜೋಳ ಬೆಂಬಲ ಬೆಲೆ ಖರೀದಿ ಕೇಂದ್ರ ಪ್ರಾರಂಭವಾಗಿದ್ದು, ಗೋವಿನಜೋಳ ಬೆಂಬಲ ಬೆಲೆ ಖರೀದಿ ಕೇಂದ್ರಕ್ಕಾಗಿ ನಡೆದಿರುವ ಹೋರಾಟದಿಂದ ಅನೇಕ ಜಿಲ್ಲೆಗಳಲ್ಲಿ ಗೋವಿನಜೋಳ ಬೆಳೆದ ರೈತರಿಗೆ ಉಪಯೋಗವಾಗಿದೆ. ಆದರೆ, ಪಟ್ಟಣದಲ್ಲಿ ಟಿಎಪಿಸಿಎಂಎಸ್ ವತಿಯಿಂದ ಪ್ರಾರಂಭಿಸಿರುವ ಖರೀದಿ ಕೇಂದ್ರಕ್ಕೆ ಬರುವ ರೈತರು ನಿಯಮಗಳಿಂದ ಗೊಂದಲಕ್ಕೀಡಾಗುತ್ತಿದ್ದಾರೆ.

ಗೋವಿನಜೋಳ ಬೆಂಬಲ ಬೆಲೆ ಖರೀದಿ ಕೇಂದ್ರಕ್ಕೆ ಹೆಸರು ನೋಂದಾಯಿಸುವ ಕಾರ್ಯ ಪ್ರಾರಂಭವಾದ ಸಂದರ್ಭದಲ್ಲಿ ನೆಟ್‌ವರ್ಕ್ ಸಮಸ್ಯೆ ಎದುರಾಗಿತ್ತು. ಕೆಎಂಎಫ್‌ನ ಲಾಗಿನ್‌ನಲ್ಲಿ ನೋಂದಣಿಯಾದ ರೈತರು ಧಾರವಾಡಕ್ಕೆ ಬೆಳೆಯನ್ನು ತೂಕ ಮಾಡಿ ಅಲ್ಲಿಯೇ ಕೊಡಬೇಕು ಎನ್ನುವ ವದಂತಿಯಿಂದ ರೈತರು ಗೊಂದಲಕ್ಕೀಡಾದರು. ಆದರೆ ಇಲ್ಲಿಯೇ ತೆಗೆದುಕೊಳ್ಳಲಾಗುವದು ಎನ್ನುವ ಮಾಹಿತಿ ನೀಡಲಾಯಿತು. ನಂತರ ಫೆಡರೇಷನ್‌ನ ಲಾಗಿನ್ ನೋಂದಣಿಯೂ ಸಹ ಇದೇ ರೀತಿ ನೆಟ್‌ವರ್ಕ್ ಸಮಸ್ಯೆ ಎದುರಿಸಿತು. ಒಟ್ಟಿನಲ್ಲಿ ಸಾವಿರಾರು ರೈತರು ಗೋವಿನಜೋಳ ಮಾರಾಟಕ್ಕೆ ಹೆಸರು ನೋಂದಾಯಿಸಿಕೊಂಡು, ಖರೀದಿ ಪ್ರಾರಂಭವಾಗುವದನ್ನು ಕಾಯುತ್ತಿದ್ದರು.

ಕೊನೆಗೆ ಶುಕ್ರವಾರ ಬೆಂಬಲ ಬೆಲೆ ಖರೀದಿ ಕೇಂದ್ರದಲ್ಲಿ ಗೋವಿನಜೋಳ ಖರೀದಿ ಪ್ರಾರಂಭಿಸಲಾಯಿತು. ಎರಡು ದಿನಗಳ ಕಾಲ ಅಧಿಕಾರಿಗಳು ಗೋವಿನಜೋಳದ ಕಾಳುಗಳ ತೇವಾಂಶ ಪರೀಕ್ಷೆ ಮಾಡಿ ಖರೀದಿಸುವ ಕಾರ್ಯ ಪ್ರಾರಂಭಿಸಿದರು. ಇದಕ್ಕೂ ಸಹ ರೈತರು ಕಾಯುವಂತಾಯಿತು. ನಂತರ ತೂಕ ಪ್ರಕ್ರಿಯೆ ಪ್ರಾರಂಭ ಮಾಡಲಾಗಿದ್ದರೂ ಅದು ಸಹ ನಿಧಾನಗತಿಯಲ್ಲಿ ಸಾಗುತ್ತಿದ್ದು ಅದಕ್ಕೂ ರೈತರು ಕಾಯುವಂತಾಗಿದೆ.

ಸೋಮವಾರ ವಾಹನಗಳಲ್ಲಿ ಗೋವಿನಜೋಳದ ಚೀಲಗಳನ್ನು ತುಂಬಿಕೊಂಡು ಬಂದಿದ್ದ ರೈತರು ತಮ್ಮ ಸರದಿಗಾಗಿ ಕಾಯುತ್ತಿದ್ದರು. ಅನೇಕ ರೈತರು ನೋಂದಣಿಯಾಗದಿರುವದಕ್ಕೂ ಅಸಮಾಧಾನ ವ್ಯಕ್ತಪಡಿಸುತ್ತಿದ್ದರು. ಅಲ್ಲದೆ ಒಂದು ಎಕರೆಗೆ 12 ಕ್ವಿಂಟಲ್ ಮಾತ್ರ ಖರೀದಿ ಎನ್ನಲಾಗಿದ್ದರೂ ಕೆಲವು ರೈತರು ಪ್ರತಿ ರೈತರಿಗೆ 50 ಕ್ವಿಂಟಲ್ ಎನ್ನುತ್ತಿರುವುದೂ ಗೊಂದಲ ಮೂಡಿಸಿದರೆ, ತೂಕ ಮಾಡಿಕೊಳ್ಳುವದು ಯಾವಾಗ, ದುಡ್ಡು ಬರುವದು ಯಾವಾಗ ಎನ್ನುವದು ರೈತರಿಗೆ ಬಿಡಿಸಲಾರದ ಪ್ರಶ್ನೆಯಂತೆ ಕಾಡುತ್ತಿದೆ ಎನ್ನುತ್ತಾರೆ ಗೊಜನೂರಿನ ರೈತರಾದ ನಿಂಗನಗೌಡ ಪಾಟೀಲ, ಮಹಾಂತಗೌಡ ಪಾಟೀಲ, ರಮೇಶ ಬಾಕಳೆ ಮುಂತಾದವರು.

ತೂಕ ಮಾಡುವಾಗ ಹಮಾಲಿ ಮಾಡುವ ಕಾರ್ಮಿಕರು ಹಮಾಲಿ ದರವನ್ನು ಸಹ ಸರಿಯಾಗಿ ನಿರ್ಧರಿಸಿಲ್ಲ ಎನ್ನಲಾಗಿದೆ. ಎಪಿಎಂಸಿ ನೀಡುವಂತೆ ಹಮಾಲಿ ದರ ಸಹ ನಿರ್ದಿಷ್ಟವಾಗಿಲ್ಲ. ಹಮಾಲಿ ದರ ಕಡಿಮೆಯಾದರೆ ನಮಗೆ ಕಷ್ಟವಾಗುತ್ತದೆ ಎನ್ನುತ್ತಾರೆ ಕೂಲಿ ಕಾರ್ಮಿಕರು. ಇಂತಹ ಗೊಂದಲಗಳೆಲ್ಲವನ್ನು ಬಗೆಹರಿಸಿ ರೈತರಿಗೆ ಭರವಸೆ ನೀಡುವ ಕಾರ್ಯವಾಗಬೇಕಾಗಿದೆ.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!