ವ್ಯಸನಮುಕ್ತ ಯುವಜನಾಂಗದಿಂದ ಸದೃಢ ಸಮಾಜ

0
Spread the love

ವಿಜಯಸಾಕ್ಷಿ ಸುದ್ದಿ, ಗಗದ: ಆಧುನಿಕ ದಿನಗಳಲ್ಲಿ ನಾನಾ ಬಗೆಯ ವ್ಯಸನಗಳು ಯುವ ಜನಾಂಗವನ್ನು ಆಕರ್ಷಿಸುತ್ತಿದ್ದು, ಇವುಗಳ ಅಪಾಯ ವ್ಯಸನಿಗಳ ಕುಟುಂಬಕ್ಕೆ ಮಾತ್ರವಲ್ಲದೇ ಸಮಾಜಕ್ಕೂ ತಟ್ಟುತ್ತದೆ. ಸದೃಢ ಸಮಾಜ ಕಟ್ಟಲು ಯುವಜನಾಂಗ ವ್ಯಸನಮುಕ್ತರಾಗುವುದು ಅವಶ್ಯಕವಾಗಿದೆ ಎಂದು ಡಾ. ತೋಂಟದ ಸಿದ್ಧರಾಮ ಮಹಾಸ್ವಾಮಿಗಳು ನುಡಿದರು.

Advertisement

ಅವರು ರವಿವಾರ ನಗರದ ವಾರ್ಡ್ ನಂ.15 ಹಾಗೂ 16ರಲ್ಲಿ ತೋಂಟದಾರ್ಯ ಮಠದ 2025ನೇ ಸಾಲಿನ ಜಾತ್ರಾ ಮಹೋತ್ಸವದ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ `ವ್ಯಸನ ಮುಕ್ತ ಸಮಾಜ ಜಾಗೃತಿ’ ಪಾದಯಾತ್ರೆಯಲ್ಲಿ ಪಾಲ್ಗೊಂಡು ಮಾತನಾಡಿದರು.

ಭಾರತ ಅತಿ ಹೆಚ್ಚು ಯುವಜನರನ್ನು ಹೊಂದಿದ ದೇಶವಾಗಿದ್ದು, ದೇಶದ ಅಭಿವೃದ್ಧಿಯ ದೃಷ್ಟಿಯಿಂದ ಇದು ಧನಾತ್ಮಕ ಸಂಗತಿಯಾಗಿದೆ. ಯುವಕರು ವ್ಯಸನ-ನಶೆ-ಆಕರ್ಷಣೆಗಳಿಂದ ಹೊರಬರಲು ಸೃಜನಾತ್ಮಕ-ಆಧ್ಯಾತ್ಮಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು. ಮದ್ಯಪಾನ, ಧೂಮಪಾನ, ತಂಬಾಕು ಸೇವನೆಯ ದುಷ್ಪರಿಣಾಮಗಳ ಕುರಿತು ಎಷ್ಟೇ ಅರಿವಿದ್ದರೂ ಸುಶಿಕ್ಷಿತರು ಸಹ ಅಂಥ ಚಟಗಳಿಗೆ ಬಲಿಯಾಗುತ್ತಿರುವುದು ವಿಪರ್ಯಾಸವಾಗಿದೆ. ಮಹಾನ್ ಸಾಧಕರನ್ನು ಆದರ್ಶವಾಗಿಟ್ಟುಕೊಂಡು ಒಳ್ಳೆಯ ವ್ಯಕ್ತಿತ್ವ ಬೆಳೆಸಿಕೊಂಡಾಗ ಇಂಥ ಚಟಗಳಿಂದ ಹೊರಬರಲು ಸಾಧ್ಯ ಎಂದರು.

ಪಾದಯಾತ್ರೆಯು ಶಹಾಪೂರಪೇಟೆಯಿಂದ ಆರಂಭವಾಗಿ ಡಿಸಿ ಮಿಲ್ ರಸ್ತೆ, ಡೋರಗಲ್ಲಿ, ಹೊಂಬಳನಾಕಾ ಮಾರ್ಗವಾಗಿ ಗಂಗಾಪೂರಪೇಟೆಯ ದುರ್ಗಾ ದೇವಸ್ಥಾನದಲ್ಲಿ ಸಂಪನ್ನಗೊAಡಿತು. ನೂರಾರು ಭಕ್ತರು ಪಾದಯಾತ್ರೆಯಲ್ಲಿ ಶ್ರೀಗಳೊಂದಿಗೆ ಹೆಜ್ಜೆ ಹಾಕಿದರು. ಭೈರನಟ್ಟಿ ವಿರಕ್ತಮಠದ ಶಾಂತಲಿಂಗ ಮಹಾಸ್ವಾಮಿಗಳು, ಹುಕ್ಕೇರಿ ಮಠದ ಸದಾಶಿವ ಮಹಾಸ್ವಾಮಿಗಳು ಸಮ್ಮುಖ ವಹಿಸಿದ್ದರು.

ತೋಂಟದಾರ್ಯ ಮಠದ ಆಡಳಿತಾಧಿಕಾರಿ ಪ್ರೊ.ಎಸ್.ಎಸ್. ಪಟ್ಟಣಶೆಟ್ಟರ್, ಎಂ.ಎಸ್. ಅಂಗಡಿ, ನಗರಸಭೆ ಸದಸ್ಯರಾದ ಕೃಷ್ಣಾ ಪರಾಪೂರ, ಚಂದ್ರು ತಡಸದ, ಎಂ.ಎಸ್. ಪಾಟೀಲ, ಬಸವರಾಜ ಬೆಳದಡಿ, ಎಸ್.ಎನ್. ಬಳ್ಳಾರಿ, ರಾಚಪ್ಪ ಮಿಣಜಗಿ, ಬಸವರಾಜ ಕವಳಿಕಾಯಿ, ವಿಜಯ ಕಲ್ಮನಿ, ಅಶೋಕ ಕುಡಿತಿನಿ, ರಾಮು ಬಳ್ಳಾರಿ ಸೇರಿದಂತೆ ತೋಂಟದಾರ್ಯ ಜಾತ್ರಾ ಮಹೋತ್ಸವ ಸಮಿತಿ-2025, ಬಸವದಳ, ಬಸವಕೇಂದ್ರ, ಲಿಂಗಾಯತ ಪ್ರಗತಿಶೀಲ ಸಂಘ, ದುರ್ಗಮ್ಮದೇವಿ ದೇವಸ್ಥಾನ ಟ್ರಸ್ಟ್ ಕಮಿಟಿ ಹಾಗೂ ರೈತ ಸಂಘದ ಪ್ರತಿನಿಧಿಗಳು ಇದ್ದರು.

ಪಾದಯಾತ್ರೆಯ ಯಶಸ್ಸಿಗೆ ಕೈಜೋಡಿಸಿದ ಎಲ್ಲರಿಗೂ ಜಾತ್ರಾ ಸಮಿತಿ ಸದಸ್ಯರು ಅಭಿನಂದನೆ ಸಲ್ಲಿಸಿದರು. ಕೊಟ್ರೇಶ ಮೆಣಸಿನಕಾಯಿ ನಿರೂಪಿಸಿದರು.

ಶೇಗುಣಸಿ ವಿರಕ್ತಮಠದ ಡಾ. ಮಹಾಂತಪ್ರಭು ಮಹಾಸ್ವಾಮಿಗಳು ಮಾತನಾಡಿ, ಜಾತ್ರೆಗಳಲ್ಲಿ ಇಂತಹ ಅರ್ಥಪೂರ್ಣ ಕಾರ್ಯಕ್ರಮಗಳನ್ನು ಆಯೋಜಿಸುವ ಪದ್ಧತಿಯನ್ನು ಜಾರಿಗೆ ತಂದ ಕೀರ್ತಿ ಲಿಂ. ಸಿದ್ಧಲಿಂಗ ಮಹಾಸ್ವಾಮಿಗಳಿಗೆ ಸಲ್ಲುತ್ತದೆ. ಲಿಂಗೈಕ್ಯ ಗುರುಗಳು ಇಡೀ ದಕ್ಷಿಣ ಭಾರತದಲ್ಲೇ ಕೋಮು ಸೌಹಾರ್ದತೆ ಹಾಗೂ ಏಕತೆಗಾಗಿ ಕೇಂದ್ರ ಸರ್ಕಾರದ ಪ್ರಶಸ್ತಿ ಪಡೆದ ಮೊದಲಿಗರಾಗಿದ್ದು, ಅವರ ಆಶಯದಂತೆ ಡಾ. ತೋಂಟದ ಸಿದ್ಧರಾಮ ಮಹಾಸ್ವಾಮಿಗಳ ಮಾರ್ಗದರ್ಶನದಲ್ಲಿ ಜಾತ್ರೆಯಲ್ಲಿ ಅರ್ಥಪೂರ್ಣ ಕಾರ್ಯಕ್ರಮಗಳನ್ನು ಆಯೋಜಿಸಿರುವುದು ಅಭಿನಂದನೀಯ ಎಂದರು.


Spread the love

LEAVE A REPLY

Please enter your comment!
Please enter your name here