ಕಲಬುರ್ಗಿ:- ಡಾಕ್ಟರ್ ಆಗಬೇಕೆಂಬ ಕನಸು ನನಸಾಗದಿದ್ದಕ್ಕೆ ವಿದ್ಯಾರ್ಥಿನಿ ಓರ್ವರು ಜೀವ ಕಳೆದುಕೊಂಡ ಘಟನೆ ಅನಂತಪುರ ಜಿಲ್ಲೆಯ ರಾಯದುರ್ಗದಲ್ಲಿ ಜರುಗಿದೆ.
ತನುಜಾ ಸೂಸೈಡ್ ಮಾಡಿಕೊಂಡ ವಿದ್ಯಾರ್ಥಿನಿ. ಇವರು ಕಲಬುರ್ಗಿ ಮೂಲದವರಾಗಿದ್ದು, ವೈದ್ಯೆಯಾಗಬೇಕೆಂಬ ಕನಸು ಕಂಡಿದ್ದಳು. ಆದ್ರೆ, ಸಿಇಟಿಯಲ್ಲಿ ಕಡಿಮೆ ಅಂಕ ಬಂದಿದ್ದರಿಂದ ಎರಡೂ ಬಾರಿಯೂ ಸಹ ಎಂಬಿಬಿಎಸ್ ಸೀಟು ಸಿಕ್ಕಿರಲಿಲ್ಲ. ಇದರಿಂದ ಮನನೊಂದಿದ್ದ ತನುಜಾ, ಬೆಂಗಳೂರಿನಿಂದ ಕಲಬುರಗಿಗೆ ತೆರಳುತ್ತಿದ್ದ ವೇಳೆ ಅನಂತಪುರ ಜಿಲ್ಲೆಯ ರಾಯದುರ್ಗದ ಬಳಿ ರೈಲಿನಿಂದ ಜಿಗಿದು ಪ್ರಾಣ ಕಳೆದುಕೊಂಡಿದ್ದಾಳೆ.
ರಾಯದುರ್ಗದ ಉಪನಗರದ ರೈಲ್ವೆ ಹಳಿಯಲ್ಲಿ ಯುವತಿಯ ಶವವನ್ನು ರೈಲ್ವೆ ಪೊಲೀಸರು ಪತ್ತೆ ಮಾಡಿದ್ದು, ಕೂಡಲೇ ಕುಟುಂಬಸ್ಥರಿಗೆ ಮಾಹಿತಿ ನೀಡಿದ್ದಾರೆ. ಆರಂಭದಲ್ಲಿ ಆಕಸ್ಮಿಕವಾಗಿ ರೈಲಿನಿಂದ ಬಿದ್ದು ಯುವತಿ ಸಾವನ್ನಪ್ಪಿದ್ದಾಳೆ ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದರು. ಆದ್ರೆ, ಸಾಯುವ ಮುನ್ನ ತನುಜಾ ತನ್ನ ಪೋಷಕರಿಗೆ ದೂರವಾಣಿ ಕರೆ ಮಾಡಿ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ತಿಳಿಸಿರುವುದು ಗೊತ್ತಾಗಿದೆ. ಆಗ ಪೊಲೀಸರಿಗೆ ಇದೊಂದು ಆಕಸ್ಮಿಕ ಸಾವು ಅಲ್ಲ, ಆತ್ಮಹತ್ಯೆ ಎನ್ನುವುದು ಖಚಿತವಾಗಿದೆ.