ವಿಜಯಸಾಕ್ಷಿ ಸುದ್ದಿ, ಗದಗ : ಸಮಾಜವಿಜ್ಞಾನ ವಿಷಯದಲ್ಲಿ ಇತಿಹಾಸ, ಪೌರನೀತಿ ಹಾಗೂ ಭೂಗೋಳ ವಿಷಯದ ಬಗ್ಗೆ ವಿದ್ಯಾರ್ಥಿಗಳು ಹೆಚ್ಚು-ಹೆಚ್ಚು ಅಧ್ಯಯನ ಮಾಡಿ ಇತಿಹಾಸದ ಬಗ್ಗೆ ಹಾಗೂ ಮೂಲಭೂತ ಹಕ್ಕು ಮತ್ತು ಕರ್ತವ್ಯಗಳ ಬಗ್ಗೆ ಅರ್ಥೈಸಿಕೊಂಡು ಅನುಷ್ಠಾನಗೊಳಿಸಿಕೊಳ್ಳುವ ಅಗತ್ಯತೆ ಇಂದಿನ ದಿನಗಳಲ್ಲಿ ಪ್ರಮುಖವಾಗಿದೆ. ಕಾರಣ ಎಲ್ಲ ವಿದ್ಯಾರ್ಥಿಗಳು ಸಾಮಾಜಿಕ, ಆರ್ಥಿಕ, ಧಾರ್ಮಿಕ ವಿಷಯಗಳನ್ನು ಅಧ್ಯಯನ ಮಾಡಬೇಕು. ಸಮಾಜವಿಜ್ಞಾನ ವಿಷಯ ಸುಳ್ಳುಗಳ ಸರಮಾಲೆಯಲ್ಲ, ನೈಜತೆಯ ಪ್ರತೀಕ ಎಂದು ಶ್ರೀ ಜ. ತೋಂಟದಾರ್ಯ ವಿದ್ಯಾಪೀಠದ ಕಾರ್ಯದರ್ಶಿ ಎಸ್.ಎಸ್. ಪಟ್ಟಣಶೆಟ್ಟರ ಹೇಳಿದರು.
ಗದಗ ಶಹರ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದ ವತಿಯಿಂದ ನಡೆದ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳಿಗೆ ಆರನೇ ದಿನದ ನೇರ ಫೋನ್ ಇನ್ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ವಿದ್ಯಾರ್ಥಿಗಳು ಹೆಚ್ಚಾಗಿ ಮಹಿಳೆಯರ ಸ್ಥಾನಮಾನ, ನಕಾಶೆಗಳು, ಅನ್ವಯಿಕ ಪ್ರಶ್ನೆಗಳು, ಸಮಾಜವಿಜ್ಞಾನ ವಿಷಯದಲ್ಲಿ ಬರುವ ವಿವಿಧ ವ್ಯತ್ಯಾಸಗಳ ಬಗ್ಗೆ ಹಾಗೂ ನೂರಕ್ಕೆ ನೂರು ಅಂಕಗಳನ್ನು ಗಳಿಸುವ ಕೌಶಲ ಮುಂತಾದವುಗಳ ಬಗ್ಗೆ ಪ್ರಶ್ನೆಗಳನ್ನು ಕೇಳಿ ಪರಿಹಾರ ಪಡೆದುಕೊಂಡರು.
ಈ ಸಂದರ್ಭದಲ್ಲಿ ಭಾಗವಹಿಸಿದ ಸಮಾಜವಿಜ್ಞಾನ ವಿಷಯದ ಸಂಪನ್ಮೂಲ ವ್ಯಕ್ತಿಗಳು ಮಕ್ಕಳಿಗೆ ಪರೀಕ್ಷೆ ಮುಗಿಯುವವರೆಗೆ ಸತತ ಬೆಂಬಲದ ಭರವಸೆ ನೀಡಿದರು. ಕಾರ್ಯಕ್ರಮದಲ್ಲಿ ಕ್ಷೇತ್ರ ಸಮನ್ವಯಾಧಿಕಾರಿ ಹೆಚ್.ಎ. ಫಾರೂಕಿ, ಶಿಕ್ಷಣ ಸಂಯೋಜಕರಾದ ಶ್ಯಾಮ ಲಾಂಡೆ, ಐ.ಬಿ. ಮಡಿವಾಳರ, ಕ್ಷೇತ್ರ ಸಂಪನ್ಮೂಲ ವ್ಯಕ್ತಿಗಳಾದ ಪಿ.ಡಿ. ಮಂಗಳೂರ, ಸಂಪನ್ಮೂಲ ಶಿಕ್ಷಕರಾಗಿ ಬಸವರಾಜ ಕುಂಬಾರ, ವೈ.ಎಸ್. ಬೊಮ್ಮನಾಳ, ಗಂಗಾಧರಯ್ಯ, ಎಂ.ಎ. ಶಿವಳ್ಳಿ ಭಾಗವಹಿಸಿದ್ದರು.
ತೋಂಟದಾರ್ಯ ಪ್ರೌಢಶಾಲೆಯ ಶಿಕ್ಷಕರಾದ ಕೆ.ಎಮ್. ಗೌಡರ ಹಾಗೂ ತೋಂಟದಾರ್ಯ ಪ್ರಾಥಮಿಕ ಶಾಲೆಯ ಪ್ರಧಾನ ಗುರುಗಳಾದ ನಾಗರಾಜ ಗಾಳಿ ಉಪಸ್ಥಿತರಿದ್ದರು.
ಕ್ಷೇತ್ರ ಶಿಕ್ಷಣಾಧಿಕಾರಿ ಆರ್.ಎಸ್. ಬುರಡಿ ಮಾತನಾಡಿ, ವಿದ್ಯಾರ್ಥಿಗಳು ವರ್ಷದ ಪ್ರಾರಂಭದಿಂದ ವರ್ಗ ಕೊಠಡಿಗಳಲ್ಲಿ ಮಾಡಿದ ಇತಿಹಾಸ ವಿಷಯದ ಯೋಜನಾ ಕಾರ್ಯ, ವಿವಿಧ ರಾಷ್ಟçಗಳ ನಕಾಶೆಗಳು, ಅತ್ಯಂತ ಪ್ರಮುಖವಾದ ಇಸ್ವಿಗಳು, ತಪ್ಪಿಲ್ಲದಂತೆ ನೆನಪಿನಲ್ಲಿಟ್ಟುಕೊಂಡು ಪರೀಕ್ಷೆಯಲ್ಲಿ ಕೇಳಿದ ಪ್ರಶ್ನೆಗೆ ವಿವರವಾದ, ಆಕರ್ಷಕವಾದ ಬರವಣಿಗೆಯ ಮೂಲಕ ಉತ್ತರಿಸುವಂತೆ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮಾಡಿದರು.