ವಿಜಯಸಾಕ್ಷಿ ಸುದ್ದಿ, ಗದಗ: ಮಹಾಕುಂಭ ಮೇಳದಲ್ಲಿ ಹಿಂದೂ ರಾಷ್ಟ್ರಕ್ಕೆ ಹಿಂದೂ ಸಂವಿಧಾನ ಬಿಡುಗಡೆ ಪ್ರಯತ್ನ ನಡೆದಿರುವುದು ದೇಶದ ಸಾರ್ವಭೌಮತ್ವಕ್ಕೆ ಧಕ್ಕೆ ತರುವ ಪ್ರಯತ್ನಗಳಲ್ಲಿ ಒಂದಾಗಿದೆ ಎಂದು ಸಾಹಿತಿ ಬಸವರಾಜ ಸೂಳಿಭಾವಿ ಆರೋಪಿಸಿದರು.
ಬುಧವಾರ ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಹಿಂದೂ ರಾಷ್ಟ್ರಕ್ಕೆ ಹಿಂದೂ ಸಂವಿಧಾನ ತರಲು ಹೊರಟಿರುವವರಿಗೆ ಈಗಿರುವ ಸಂವಿಧಾನದ ಬಗ್ಗೆ ಅವರಿಗಿರುವ ತಕರಾರುಗಳೇನು? ಹಿಂದುತ್ವ ಎನ್ನವುದು ಸಮಾನತೆಗೆ ವಿರುದ್ಧವಾದ ಪರಿಕಲ್ಪನೆ. ಜಾತಿ, ವರ್ಣ ವ್ಯವಸ್ಥೆ ಆಧಾರಿತ ಸಾಮಾಜಿಕ ಸಂರಚನೆ. ಹಿಂದೂಗಳಲ್ಲಿಯೇ ಸಮಾನವಾಗಿ ಕಾಣದ ಹಿಂದೂ ಧರ್ಮದಲ್ಲಿ ಇನ್ನಿತರ ಜಾತಿ ಧರ್ಮದವರನ್ನು ಹೇಗೆ ಸಮಾನವಾಗಿ ಕಾಣಲು ಸಾಧ್ಯ ಎಂದು ಪ್ರಶ್ನಿಸಿದರು.
ಸಂವಿಧಾನ ಭಾರತವನ್ನು ಸಾರ್ವಭೌಮ ರಾಷ್ಟ್ರವನ್ನಾಗಿ ಘೋಷಣೆ ಮಾಡಿದೆ. ಸಂವಿಧಾನದ ಅಡಿಯಲ್ಲಿ ದೇಶ ಉತ್ತರೋತ್ತರ ಅಭಿವೃದ್ಧಿಯಾಗವ ಕಾಲಘಟ್ಟದಲ್ಲಿ ಹಿಂದೂ ಸಂಘಟನೆಗಳು ದೇಶವನ್ನು ಹಿಂದಕ್ಕೆ ಒಯ್ಯುವ ಪ್ರಯತ್ನ ಮಾಡುತ್ತಿವೆ. ಅಷ್ಟಕ್ಕೂ ಹಿಂದೂ ಸಂವಿಧಾನ ಅಧಿಕೃತ ಅಲ್ಲ. ಸಂವಿಧಾನ ರಚನೆ ಎನ್ನುವದು ಮಕ್ಕಳಾಟವೂ ಅಲ್ಲ. ಆದರೆ ಇಂಥ ದೇಶ ವಿರೋಧಿ, ಸಂವಿಧಾನ ವಿರೋಧಿ ಕೃತ್ಯಗಳನ್ನು ತಡೆಯುವಲ್ಲಿ ಸರಕಾರಗಳು ವಿಫಲವಾಗಿರುವುದು ಖಂಡನೀಯ ಎಂದರು.
ಸುದ್ದಿಗೋಷ್ಠಿಯಲ್ಲಿ ಶೇಕಣ್ಣ ಕವಳಿಕಾಯಿ, ಬಾಲರಾಜ ಅರಬರ, ಶರೀಫï ಬಿಳೆಯಲಿ, ಬಸವರಾಜ ಪೂಜಾರ, ಆನಂದ ಸಿಂಗಾಡಿ, ನಾಗರಾಜ ಗೋಕಾವಿ, ಶಿವಾನಂದ ತಮ್ಮಣ್ಣವರ, ಪರಶು ಕಾಳೆ, ಮುತ್ತು ಬಿಳೆಯಲಿ ಉಪಸ್ಥಿತರಿದ್ದರು.