ವಿಜಯಸಾಕ್ಷಿ ಸುದ್ದಿ, ಶಿರಹಟ್ಟಿ: ಉತ್ತರ ಕರ್ನಾಟಕ ಸಹ್ಯಾದ್ರಿ ಬೆಟ್ಟ ಎಂದೇ ಗುರುತಿಸಿಕೊಂಡಿರುವ ಕಪ್ಪತ್ತಗುಡ್ಡದಲ್ಲಿ ಸಧ್ಯ ಮುಂಗಾರು ಮಳೆ ಪ್ರಾರಂಭವಾದಾಗಿನಿಂದಲೂ ಬೆಟ್ಟಗಳ ಮಧ್ಯೆ ಮೋಡಗಳು ಹಾದುಹೋಗುವ, ಮಂಜು ಕವಿದ ವಾತಾವರಣಕ್ಕೆ ಮನಸೋತ ಪ್ರವಾಸಿಗರನ್ನು ಕೈಬೀಸಿ ಕರೆಯುವ ತಾಣವಾಗಿ ಹೊರಹೊಮ್ಮುತ್ತಿದೆ. ಸೂರ್ಯೋದಯ/ಸೂರ್ಯಾಸ್ತವನ್ನು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ನೋಡುತ್ತಿದ್ದ ಜನತೆಗೆ ಇದೀಗ ಅದೇ ದೃಶ್ಯಾವಳಿ ಕಪ್ಪತ್ತಗುಡ್ಡದಲ್ಲೂ ಸಹ ಈ ವಿಸ್ಮಯವನ್ನು ಕಣ್ತುಂಬಿಕೊಳ್ಳುತ್ತಿದ್ದಾರೆ.
ಕಪ್ಪತ್ತಗುಡ್ಡದ (ಗಾಳಿ ಗುಂಡಿ ಬಸಪ್ಪ) ವ್ಯಾಪ್ತಿಯಲ್ಲಿ ಅರಣ್ಯ ಇಲಾಖೆ ವತಿಯಿಂದ ವ್ಯೂಪಾಯಿಂಟ್ ಗುರುತಿಸಲಾಗಿದ್ದು, ಇಲ್ಲಿ ಸೂರ್ಯೋದಯದ ವೇಳೆಗೆ ಬೆಟ್ಟಗಳ ಮಧ್ಯೆ ಮಂಜು ಸೇರಿದಂತೆ ಮೋಡಳು ಅತೀ ಸಮೀಪವಾಗಿ ಕಾಣುತ್ತಿದ್ದು, ಇದನ್ನು ನೋಡಲು ಪ್ರವಾಸಿಗರ ದಂಡೇ ಹರಿದು ಬರುತ್ತಿದೆ. ಜೊತೆಗೆ ಇಲಾಖೆಯು ಟ್ರೆಂಡಿಂಗ್ಗೆ ಪೂರಕವಾಗಿ ಸ್ಥಾಪಿಸಿರುವ `ನಮ್ಮ ಕಪ್ಪತ್ತಗುಡ್ಡ’ ಎಂಬ ಲೋಗೋ ಕೂಡ ಆಕರ್ಷಣೀಯವಾಗಿದ್ದು, ಇಲ್ಲಿ ಫೋಟೋ ಕ್ಲಿಕ್ಕಿಸಲು ಪ್ರವಾಸಿಗರು ಮುಗಿ ಬೀಳುತ್ತಿದ್ದಾರೆ. ವಿಶೇಷವಾಗಿ ವಾರಾಂತ್ಯ ಮತ್ತು ಸರಕಾರಿ ರಜಾ ದಿನಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಈ ಸ್ಥಳಕ್ಕೆ ಆಗಮಿಸುತ್ತಿದ್ದಾರೆ.
ಪ್ರವಾಸಿಗರ ಸಂಖ್ಯೆ ಹೆಚ್ಚಾಗುತ್ತಿದ್ದಂತೆಯೇ ಅರಣ್ಯ ಇಲಾಖೆಯು ಪ್ಲಾಸ್ಟಿಕ್ ಬಳಕೆ ನಿಷೇಧಕ್ಕೆ ಮುಂದಾಗಿದೆ. ಇದಕ್ಕಾಗಿ ಪ್ರವಾಸಿಗರ ತಪಾಸಣೆ ನಡೆಸಿ ಪ್ಲಾಸ್ಟಿಕ್ ವಸ್ತುಗಳಿಗೆ 30 ರೂ.ಗಳ ಸ್ಟಿಕ್ಕರ್ನ್ನು ಅಂಟಿಸಿ ವ್ಯೂ ಪಾಯಿಂಟ್ ಕಡೆಗೆ ಬಿಡುತ್ತಿದ್ದು, ಮರಳಿ ಬರುವಾಗ ಸ್ಟಿಕ್ಕರನ್ನು ತೋರಿಸಿ 30ರೂ.ಗಳನ್ನು ಮರಳಿ ನೀಡುವ ವ್ಯವಸ್ಥೆಯನ್ನು ಮಾಡಿಕೊಂಡಿದ್ದಾರೆ. ಕಾಲ್ನಡಿಗೆಯಲ್ಲಿ ಟ್ರಿಕ್ಕಿಂಗ್ ಮಾಡುವವರಿಗೆ ತಲಾ 25 ರೂ, ಕಾರ್ಗೆ 100ರೂ, ಬೈಕ್ಗೆ 50 ರೂ. ಶುಲ್ಕ ನಿಗದಿಪಡಿಸಲಾಗಿದೆ.
ಅರಣ್ಯ ಇಲಾಖೆಯ ಸುಪರ್ದಿಯಲ್ಲಿ ಬರುವ ಶಿರಹಟ್ಟಿ ತಾಲೂಕಿನ ಕಡಕೋಳದ ದೈವೀವನದಲ್ಲಿ ಕಪ್ಪತ್ತಗುಡ್ಡ ವೀಕ್ಷಣೆಗೆ ಬರುವ ಪ್ರವಾಸಿಗರ ಅನುಕೂಲಕ್ಕಾಗಿ ವಸತಿ ಸಮುಚ್ಛಯಗಳನ್ನು ನಿರ್ಮಿಸಿದ್ದು, ಪ್ರವಾಸಿಗರಿಗೆ ಇದು ಅನುಕೂಲವಾಗಿದೆ. ಸೂಕ್ತ ಪಾರ್ಕಿಂಗ್ ವ್ಯವಸ್ಥೆ, ಶೌಚಾಲಯ, ಕುಡಿಯುವ ನೀರಿನ ವ್ಯವಸ್ಥೆ, ಕೂರಲು ಖುರ್ಚಿಗಳು, ಪರಗೋಲಾಗಳ ವ್ಯವಸ್ಥೆಯನ್ನು ಸಹ ಮಾಡಲಾಗಿದೆ.
ಅರಣ್ಯ ಇಲಾಖೆ ವತಿಯಿಂದಲೇ ಬೇರೆ ಪ್ರವಾಸಿ ತಾಣಗಳಲ್ಲಿ ಈಗಾಗಲೇ ಇರುವಂತೆ ಸಫಾರಿ ವಾಹನಗಳ ವ್ಯವಸ್ಥೆ ಕಪ್ಪತ್ತಗುಡ್ಡ ಅರಣ್ಯ ಪ್ರದೇಶದಲ್ಲಿಯೂ ಜಾರಿಯಾಗಬೇಕು. ಇದರಿಂದ ಕಪ್ಪತ್ತಗುಡ್ಡ ವ್ಯೂ ಪಾಯಿಂಟ್ ಸೇರಿದಂತೆ ಸುತ್ತಮುತ್ತಲಿನ ಪ್ರದೇಶ ಸ್ವಚ್ಛವಾಗಿಟ್ಟುಕೊಳ್ಳುವುದರ ಜೊತೆಗೆ ಅಪಾರ ಸಸ್ಯ ಸಂಕುಲ, ವನ್ಯಜೀವಿಗಳಿಗೂ ಆಗಬಹುದಾದ ತೊಂದರೆಯನ್ನು ತಪ್ಪಿಸಬಹುದಾಗಿದೆ ಎಂಬುದು ಪ್ರವಾಸಿಗರ ಅನಿಸಿಕೆಯಾಗಿದೆ.
“ಮುಂಗಾರು ಪ್ರಾರಂಭವಾದಾಗಿನಿಂದಲೂ ಕಪ್ಪತ್ತಗುಡ್ಡದಲ್ಲಿ ಇಲಾಖೆ ವತಿಯಿಂದ ಗುರುತಿಸಿರುವ ವ್ಯೂ ಪಾಯಿಂಟ್ನಲ್ಲಿ ಮೋಡಗಳು ಅತೀ ಕೆಳಗಡೆ ಸಂಚರಿಸುತ್ತಿರುವದರಿಂದ ಪ್ರವಾಸಿಗರ ಆಕರ್ಷಣೀಯ ಸ್ಥಳವಾಗಿದೆ. ಪ್ರವಾಸಿಗರಿಗೆ ಅಗತ್ಯ ಮೂಲಸೌಲಭ್ಯ ಕಲ್ಪಿಸಲಾಗುತ್ತಿದ್ದು, ಪ್ಲಾಸ್ಟಿಕ್ ನಿಷೇಧದ ಬಗ್ಗೆ ಕಟ್ಟುನಿಟ್ಟಿನ ಕ್ರಮ ಹಾಗೂ ಟ್ರೆಕ್ಕಿಂಗ್ ಮಾಡುವವರಿಗೆ ಆನ್ಲೈನ್ ಬುಕ್ಕಿಂಗ್ ವ್ಯವಸ್ಥೆಗೂ ಸಹ ಕ್ರಮ ಕೈಕೊಳ್ಳಲಾಗುತ್ತಿದೆ”
– ರಾಮಪ್ಪ ಪೂಜಾರ.
ವಲಯ ಅರಣ್ಯಾಧಿಕಾರಿ.
ಈ ಕುರಿತು ಪ್ರತಿಕ್ರಿಯಿಸಿದ ಮಹಾಂತೇಶ ದಶಮನಿ, ಎಪ್ಪತ್ತು ಗಿರಿಗಿಂತ ಕಪ್ಪತ್ತಗಿರಿ ಮೇಲು ಎಂಬ ನಾಣ್ಣುಡಿಯಂತೆ ಕಪ್ಪತ್ತಗುಡ್ಡದಲ್ಲಿ ಅರಣ್ಯ ಇಲಾಖೆ ಗುರುತಿಸಿರುವ ವ್ಯೂ ಪಾಯಿಂಟ್ ಬಳಿ ಮೋಡಗಳು ಸಮೀಪ ಕಾಣುತ್ತಿದ್ದು ಈ ದೃಶ್ಯವನ್ನು ಕಣ್ತುಂಬಿಕೊಳ್ಳಲು ಇಲ್ಲಿ ಪ್ರವಾಸಿಗರ ಸಂಖ್ಯೆ ಹೆಚ್ಚಾಗುತ್ತಿದ್ದು, ಅರಣ್ಯ ಪ್ರದೇಶ ವ್ಯಾಪ್ತಿಯಲ್ಲಿ ಸಫಾರಿ ವಾಹನ ವ್ಯವಸ್ಥೆ ಜಾರಿಯಾದರೆ ಅರಣ್ಯ ಸ್ವಚ್ಛತೆ ಮತ್ತು ಸುರಕ್ಷತೆಗೆ ಆದ್ಯತೆ ನೀಡಿದಂತಾಗುವುದು ಎಂದರು.