ವಿಜಯಸಾಕ್ಷಿ ಸುದ್ದಿ, ಗದಗ : ಲೋಕಸಭಾ ಚುನಾವಣೆಯ ಮತದಾನವು ಜಿಲ್ಲೆಯಾದ್ಯಂತ ಮಂಗಳವಾರ ಶಾಂತಿಯುತವಾಗಿ ನಡೆಯಿತು. ಬೆಳಿಗ್ಗೆ 9 ಗಂಟೆ ವೇಳೆಗೆ ಶೇ. 8.7ರಷ್ಟು, ಬೆಳಗ್ಗೆ 11 ಗಂಟೆ ವೇಳೆಗೆ ಶೇ. 23.37ರಷ್ಟು, ಮಧ್ಯಾಹ್ನ 1 ಗಂಟೆ ವೇಳೆಗೆ ಶೇ. 41.57ರಷ್ಟು, ಮಧ್ಯಾಹ್ನ 3 ಗಂಟೆ ವೇಳೆಗೆ ಶೇ. 55.60ರಷ್ಟು ಮತ್ತು ಸಂಜೆ 5 ಗಂಟೆಯ ವೇಳೆಗೆ ಶೇ. 67.47ರಷ್ಟು ಮತ್ತು ಮತದಾನ ಪ್ರಕ್ರಿಯೆ ಪೂರ್ಣಗೊಂಡಾಗ 73.64ರಷ್ಟು ಮತದಾನವಾಯಿತು.
ಹಾವೇರಿ-ಗದಗ ಲೋಕಸಭೆ ಕ್ಷೇತ್ರ ವ್ಯಾಪ್ತಿಯ ರೋಣ, ಶಿರಹಟ್ಟಿ ಮತ್ತು ಗದಗ ವಿಧಾನಸಭೆ ಕ್ಷೇತ್ರ ವ್ಯಾಪ್ತಿಯಲ್ಲಿ ಒಟ್ಟಾರೆ ಶೇ. 73.19ರಷ್ಟು ಮತದಾನವಾದರೆ, ಬಾಗಲಕೋಟ ಲೋಕಸಭೆ ಕ್ಷೇತ್ರ ವ್ಯಾಪ್ತಿಯ ನರಗುಂದ ವಿಧಾನಸಕ್ಷೆ ಕ್ಷೇತ್ರ ವ್ಯಾಪ್ತಿಯಲ್ಲಿ ಶೇ. 75.29ರಷ್ಟು ಜನ ಮತದಾನ ಮಾಡಿದರು. ಜಿಲ್ಲೆಯ ಹಲವೆಡೆ ಸಂಜೆ 6 ಗಂಟೆ ನಂತರವೂ ಮತದಾರರು ಮತಗಟ್ಟೆ ಆವರಣದಲ್ಲಿ ಸೇರಿದ್ದರಿಂದ ಜಿಲ್ಲೆಯ ಕೆಲ ಮತಗಟ್ಟೆಗಳಲ್ಲಿ ಸಂಜೆ 7 ಗಂಟೆಯವರೆಗೂ ಮತದಾನ ನಡೆಯಿತು.

ಜಿಲ್ಲೆಯ ನಾಲ್ಕು ವಿಧಾನಸಭಾ ಕ್ಷೇತ್ರದ ಒಟ್ಟು 961 ಮತಗಟ್ಟೆಗಳಲ್ಲಿ ಮತದಾರರು ಉತ್ಸಾಹ ಹಾಗೂ ಸಂಭ್ರಮದಿಂದ ಮತದಾನದ ಹಬ್ಬದಲ್ಲಿ ಪಾಲ್ಗೊಂಡರು. ಮತದಾರರು ಮತಹಕ್ಕು ಚಲಾಯಿಸಿ ಮತಗಟ್ಟೆಯಿಂದ ಹೊರಬರುತ್ತಿದ್ದ ದೃಶ್ಯವು ಮತದಾನದ ಹುಮ್ಮಸ್ಸನ್ನು ಹೆಚ್ಚಿಸಿತ್ತು. ಪ್ರಥಮ ಬಾರಿಗೆ ಮತಹಕ್ಕು ಚಲಾಯಿಸಿದ ಯುವ ಮತದಾರರು ಸಂತಸದಿಂದ ಮತದಾನ ಸಂಭ್ರಮದಲ್ಲಿ ಪಾಲ್ಗೊಂಡಿದ್ದರು.
ಮುಳಗುಂದ ನಾಕಾ ಬಳಿಯ ನೀರಾವರಿ ಇಲಾಖೆ ಕಚೇರಿಯ ಮತಗಟ್ಟೆ ಸಂಖ್ಯೆ 124ರಲ್ಲಿ ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಎಸ್. ನೇಮಗೌಡ ಮತ ಚಲಾಯಿಸಿ ಮತದಾನದ ಮಹತ್ವ ಮತ್ತು ಮೌಲ್ಯದ ಸಂದೇಶ ಸಾರಿದರು. ಈ ಸಂದರ್ಭದಲ್ಲಿ ಜಿ.ಪಂ ಸಿಇಒ ಎಸ್. ಭರತ್ ಇದ್ದರು.
ಅಲ್ಲಿನ ಮತಗಟ್ಟೆಯಲ್ಲಿ ಬೆಳಗಿನಿಂದಲೇ ಸರತಿ ಸಾಲಿನಲ್ಲಿ ನಿಂತು ಹಿರಿಯರು, ಯುವಜನರು ಸೇರಿದಂತೆ ಎಲ್ಲರೂ ಮತದಾನ ಮಾಡಿದರು. ಲಕ್ಷ್ಮೇಶ್ವರ ಮತಗಟ್ಟೆಗಳಲ್ಲಿ ಅರ್ಹರೆಲ್ಲರೂ ಉತ್ಸಾಹದಿಂದ ಮತದಾನ ಮಾಡಿದ್ದು ಕಂಡುಬಂದಿತು. ಜಿಲ್ಲೆಯ ವಿವಿಧ ಕಡೆ ಸ್ಥಾಪಿಸಲಾಗಿದ್ದ ಸಖಿ, ವಿಶೇಷ ಚೇತನರ ಸ್ನೇಹಿ ಮತಗಟ್ಟೆ, ಯುವ ಮತದಾರರ ಮತಗಟ್ಟೆ, ಸಾಂಪ್ರದಾಯಿಕ ಮತಗಟ್ಟೆ, ಥೀಮ್ ಬೇಸ್ಡ್ ಮತಗಟ್ಟೆಗಳು ಮತದಾರರ ಗಮನ ಸೆಳೆದವು.
ಜಿಲ್ಲೆಯ ನರಗುಂದ, ಗಜೇಂದ್ರಗಡ, ರೋಣ, ಶಿರಹಟ್ಟಿ, ಮುಂಡರಗಿ ಸೇರಿದಂತೆ ಹಲವು ಮತಗಟ್ಟೆಗಳಲ್ಲಿ ಮತದಾರರು ಮಧ್ಯಾಹ್ನದ ವೇಳೆಗೆ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಮತದಾನದಲ್ಲಿ ಪಾಲ್ಗೊಂಡಿದ್ದು ಕಂಡುಬಂದಿತು. ಸುಮಾರು 70 ವರ್ಷ ಮೇಲ್ಪಟ್ಟ ಒಬ್ಬರು ಗಾಲಿ ಕುರ್ಚಿಯಲ್ಲಿ ಕುಟುಂಬದ ಸದಸ್ಯರೊಂದಿಗೆ ಆಗಮಿಸಿ ತಮ್ಮ ಮತದಾನದ ಹಕ್ಕು ಚಲಾಯಿಸಿದರು.
ಲೋಕಸಭಾ ಚುನಾವಣೆಯು ಮತದಾರರಲ್ಲಿ ಸಂಭ್ರಮ ಜೊತೆಗೆ ಹೊಣೆಗಾರಿಕೆಯನ್ನು ಹೆಚ್ಚಿಸಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಚುನಾವಣೆಯನ್ನು ಮತದಾರರ ಹಬ್ಬವೆಂದು ಪರಿಗಣಿಸಲಾಗಿದೆ. ಪ್ರಜಾಪ್ರಭುತ್ವದ ಆಶಯ ಸಾಕಾರವಾಗುವಲ್ಲಿ ಚುನಾವಣೆಯ ಪಾತ್ರ ಬಹು ದೊಡ್ಡದು ಎಂದು ಹಿರಿಯ ಮತದಾರರೊಬ್ಬರು ಅಭಿಪ್ರಾಯ ವ್ಯಕ್ತಪಡಿಸಿದರು.
ಒಟ್ಟಾರೆ, ಗದಗ ಜಿಲ್ಲೆಯಲ್ಲಿ ಮತದಾರರು ಶಾಂತಿಯುತವಾಗಿ ಹಾಗೂ ಉತ್ಸಾಹದಿಂದ ಮತದಾನದಲ್ಲಿ ಪಾಲ್ಗೊಂಡು ಪ್ರಜಾಪ್ರಭುತ್ವದ ಮತದಾನೋತ್ಸವದಲ್ಲಿ ಪಾಲ್ಗೊಂಡರು.

ಗದಗ ಜಿಲ್ಲಾ ಉಸ್ತುವಾರಿ, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ. ಪಾಟೀಲ ಹುಲಕೋಟಿಯ ಸರಕಾರಿ ಮಾದರಿ ಕನ್ನಡ ಗಂಡು ಮಕ್ಕಳ ಕೇಂದ್ರ ಶಾಲೆಯಲ್ಲಿ ಕುಟುಂಬ ಸಮೇತರಾಗಿ ತಮ್ಮ ಹಕ್ಕು ಚಲಾಯಿಸಿದರು. ಬಳಿಕ ಮಾತನಾಡಿದ ಸಚಿವರು, ಪ್ರಜಾಪ್ರಭುತ್ವ ಹಬ್ಬದಲ್ಲಿ 18 ವರ್ಷ ಪೂರ್ಣಗೊಂಡವರೆಲ್ಲರೂ ಮತಹಕ್ಕು ಚಲಾಯಿಸಬೇಕು. ಇದರಿಂದ ಪ್ರಜಾಪ್ರಭುತ್ವವನ್ನು ಬಲಪಡಿಸಲು ಸಾಧ್ಯ ಎಂದು ಅಭಿಪ್ರಾಯಪಟ್ಟರು.
ಗದಗ ನಗರದ ಎಸ್.ಎಂ. ಕೃಷ್ಣ ನಗರದ ಸರ್ಕಾರಿ ಪ್ರೌಡಶಾಲೆಯಲ್ಲಿ ಸ್ಥಾಪಿಸಲಾಗಿದ್ದ ಸಖಿ ಮತಗಟ್ಟೆ, ವೀರನಾರಾಯಣ ದೇವಸ್ಥಾನದ ಬಳಿ ಸ್ಥಾಪಿಸಲಾಗಿದ್ದ ಥೀಮ್ ಬೇಸ್ಡ್ ಮತಗಟ್ಟೆ, ಕಬಲಾಯತಕಟ್ಟಿಯ ಸರ್ಕಾರಿ ಕನ್ನಡ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಸ್ಥಾಪಿಸಲಾಗಿದ್ದ ಸಾಂಪ್ರದಾಯಿಕ ಮತಗಟ್ಟೆ, ಬೆಟಗೇರಿಯ ಎಪಿಎಂಸಿ ಕಚೇರಿಯ ಬಲಗಡೆ ಸ್ಥಾಪಿಸಲಾಗಿದ್ದ ವಿಶೇಷಚೇತನರ ಸ್ನೇಹಿ ಮತಗಟ್ಟೆ, ಮುಂಡರಗಿಯ ಶಿವಾಜಿನಗರದ ಸರ್ಕಾರಿ ಪ್ರೌಢಶಾಲೆಯಲ್ಲಿ ಸ್ಥಾಪಿಸಲಾಗಿದ್ದ ಯುವ ಮತಗಟ್ಟೆಗಳು ಗಮನ ಸೆಳೆದವು.
2019ರ ಲೋಕಸಭೆ ಚುನಾವಣೆಗೆ ಹೋಲಿಸಿದರೆ, ಈ ಬಾರಿಯ ಮತದಾನದಲ್ಲಿ ಶೇ. 3ರಷ್ಟು ಏರಿಕೆ ಕಂಡಿದೆ. ಸ್ವೀಪ್ ಸಮಿತಿ ಕೈಗೊಂಡ ಮತದಾನ ಜಾಗೃತಿ ಕಾರ್ಯಕ್ರಮದಿಂದ ಮತದಾನ ಪ್ರಮಾಣ ಹೆಚ್ಚಳವಾಗಿದೆ. 2019ರ ಚುನಾವಣೆಗೂ, ಪ್ರಸ್ತುತ 2024ರ ಚುನಾವಣೆಗೂ ಕ್ಷೇತ್ರವಾರು ವ್ಯತ್ಯಾಸ ಗಮನಿಸಿದರೆ, ಶಿರಹಟ್ಟಿ-69.87ರಿಂದ 72.2, ಗದಗ-72.41ರಿಂದ 74.25, ರೋಣ-69.49ರಿಂದ 73.13, ನರಗುಂದ-70.33ರಿಂದ 75.29 ಹೀಗೆ ಒಟ್ಟೂ ಪ್ರಮಾಣದಲ್ಲಿ 70.53ರಿಂದ 73.64ಕ್ಕೆ ಏರಿಕೆ ಕಂಡಿಬಂದಿದೆ.
Advertisement