ಯಾದಗಿರಿ:- ನಿನ್ನನ್ನು ಮದುವೆ ಆಗುತ್ತೇನೆ, ನಿನಗೊಂದು ಬಾಳುಕೊಟ್ಟು ಖುಷಿಯಿಂದ ನೋಡಿಕೊಳ್ಳುತ್ತೇನೆ ಎಂಬೆಲ್ಲಾ ಸಿನಿಮೀಯ ಡೈಲಾಗ್ ಹೊಡೆದು ವಿಧವೆಗೆ ಯುವಕನೋರ್ವ ವಂಚಿಸಿರುವ ಘಟನೆ ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ಬಸವಂತಪುರ ಗ್ರಾಮದಲ್ಲಿ ಜರುಗಿದೆ.
ಯುವಕನ ಮಾತು ನಂಬಿ ಲೈಂಗಿಕ ಸಂಪರ್ಕದ ಜೊತೆ ಲಕ್ಷ-ಲಕ್ಷ ಕಳೆದುಕೊಂಡ ವಿಧವೆ ಮಹಿಳೆಯೋರ್ವರು ಬೀದಿಗೆ ಬಿದ್ದಿದ್ದಾರೆ.
ಬಸವಂತಪುರ ಗ್ರಾಮದ ಮಹಿಳೆಯನ್ನು ದೂರದ ತೆಲಂಗಾಣದ ನಾರಾಯಣಪೇಟೆ ಜಿಲ್ಲೆಯ ಮಕ್ತಲ್ ತಾಲೂಕಿನ ಅಮೀನಾಪುರ ಗ್ರಾಮದ ಬಸನಗೌಡ ಎಂಬಾತನಿಗೆ ಸುಮಾರು ಹತ್ತು ವರ್ಷಗಳ ಹಿಂದೆ ಮದುವೆ ಮಾಡಿ ಕೊಡಲಾಗಿತ್ತು. ಮದುವೆಯಾದ ಒಂದು ವರ್ಷದಲ್ಲಿ ಮುದ್ದಾದ ಗಂಡು ಮಗು ಹುಟ್ಟಿತ್ತು. ಮಗು, ಗಂಡನ ಜೊತೆ ಸುಖ ಸಂಸಾರ ನಡೆಸುವಾಗಲೇ ಆಕೆಯ ಗಂಡ ಪಾರ್ಶ್ವವಾಯು ಸಮಸ್ಯೆಗೆ ಒಳಗಾಗಿ ಮೃತಪಟ್ಟು ಸಂಕಷ್ಟಕ್ಕೆ ಸಿಲುಕುವಂತಾಯಿತು.
ಬಳಿಕ ಮಾಳಪ್ಪ ಹತ್ತಿಕುಣಿ ಎಂಬಾತನ ಪರಿಚಯವಾಗಿದೆ. ಆತ ಬಣ್ಣ ಬಣ್ಣದ ಮಾತನಾಡಿ ವಿಧವೆ ಜತೆ ಸ್ನೇಹ ಬೆಳೆಸಿಕೊಂಡಿದ್ದಾನೆ. ವಿಧವೆ ಜೊತೆ ಪ್ರೀತಿ-ಪ್ರೇಮದ ನಾಟಕವಾಡಿದ ಮಾಳಪ್ಪ, ‘‘ಪತಿಯನ್ನು ಕಳೆದುಕೊಂಡ ನಿನಗೆ ಗಂಡನ ಸ್ಥಾನ ಕೊಡುತ್ತೇನೆ. ನಾವಿಬ್ಬರು ಹಾಲು-ಜೇನಿನಂತೆ ಸುಖ-ಸಂಸಾರದಿಂದ ಕೂಡಿ ಬಾಳೋಣ’’ ಎಂದು ಮರುಳು ಮಾಡುವ ಮಾತುಗಳನ್ನಾಡಿದ್ದಾನೆ. ಮಾಳಪ್ಪ ಮೇಲಿನ ಪ್ರೀತಿ, ವಿಶ್ವಾಸದಿಂದ ವಿಧವೆ, ತೆಲಂಗಾಣದಲ್ಲಿರುವ ತನ್ನ ನಾಲ್ಕೂವರೆ ಎಕರೆ ಜಮೀನನ್ನು ಮಾರಾಟ ಮಾಡಿದ್ದಾಳೆ. ಜಮೀನು ಮಾರಿದ ಸುಮಾರು 80 ಲಕ್ಷ ರೂ. ಹಣವನ್ನು ಆಕೆಯಿಂದ ಮಾಳಪ್ಪ ತೆಗೆದುಕೊಂಡಿದ್ದಾನೆ. ಆಕೆಯ ಹೆಸರಿನಲ್ಲಿದ್ದ ಆಸ್ತಿ-ಪಾಸ್ತಿ, ಬಂಗಾರವನ್ನು ಸಹ ಮಾರಿಕೊಂಡು ಹಣ ಗಳಿಸಿ ವಂಚಿಸಿದ್ದಾನೆ.
ಈ ಬಗ್ಗೆ ಶಹಾಪುರ ಪೋಲಿಸ್ ಠಾಣೆಯಲ್ಲಿ ಮಾಳಪ್ಪನ ವಿರುದ್ಧ ವಿಧವೆ ದೂರು ನೀಡಿದ್ದು ಕೇಸ್ ಸಹ ದಾಖಲಾಗಿದೆ. ಆದರೆ ಆರೋಪಿಯ ಬಂಧವಾಗಿಲ್ಲ. ನ್ಯಾಯ ಬೇಕು ಎಂದು ಇದೀಗ ವಿಧವೆ ಯಾದಗಿರಿ ಎಸ್ಪಿ ಕಚೇರಿ ಮುಂದೆ ಧರಣಿ ನಡೆಸಿದ್ದಾಳೆ.