ವಿಜಯಸಾಕ್ಷಿ ಸುದ್ದಿ, ನರೇಗಲ್ಲ : ಇಂದಿನ ದಿನಗಳಲ್ಲಿ ಮಹಿಳೆ ಎಲ್ಲ ರಂಗಗಳಲ್ಲಿಯೂ ಸಮರ್ಥಳಾಗಿದ್ದಾಳೆ. ಈ ಹಿಂದಿನ ದಿನಗಳಲ್ಲಿ ನಾಲ್ಕು ಗೋಡೆಗಳ ಮಧ್ಯೆ ಮಾತ್ರ ಅವಳ ಬದುಕು ಎಂಬುದನ್ನು ದಾಟಿ ಮುಂದೆ ಬಂದಿರುವ ಮಹಿಳೆ, ಈ ಸಮಾಜದಲ್ಲಿ ಪುರಷನಷ್ಟೇ ಸಮರ್ಪಕವಾಗಿ ಕಾರ್ಯಗಳನ್ನು ನಿರ್ವಹಿಸಬಲ್ಲಳು ಎಂಬುದನ್ನು ಅನೇಕ ಉದಾಹರಣೆಗಳ ಮೂಲಕ ಸಾಧಿಸಿ ತೋರಿಸಿದ್ದಾಳೆ ಎಂದು ಸಂಗೀತಗಾರ್ತಿ ರಾಜಶ್ರೀ ಕುಲಕರ್ಣಿ ಹೇಳಿದರು.
ಪಟ್ಟಣದ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದಲ್ಲಿ ಆಚರಿಸಲಾದ ಮಹಿಳಾ ದಿನಾಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮಹಿಳೆಗೂ ಒಂದು ವ್ಯಕ್ತಿತ್ವವಿದೆ. ಅವಳೂ ಸಹ ಪುರುಷರಂತೆ ಎಲ್ಲ ರೀತಿಯ ಶ್ರಮದಾಯಕ ಕಾರ್ಯಗಳನ್ನು ನಿರ್ವಹಿಸಬಲ್ಲಳು. ಅದಕ್ಕಾಗಿ ಅವಳಿಗಾಗಿಯೆ ಒಂದು ದಿನ ಮೀಸಲಿಡಬೇಕೆಂದು ಪ್ರತಿಪಾದಿಸಿದವರು ಕ್ಲಾರಾ ಜೆಟ್ಕಿನ್. 1911ರ ಮಾರ್ಚ್ 8ರಂದು ಈ ಕುರಿತು ತನ್ನ ಅಭಿಪ್ರಾಯವನ್ನು ಮಂಡಿಸಿದ ಅವರು ಮಹಿಳಾ ದಿನಾಚರಣೆಯನ್ನು ಜಾರಿಗೆ ತಂದಿದ್ದಾರೆ. ಇಂದಿನ ದಿನ ಮಹಿಳೆ ಮಾಡಿರುವ ಸಾಧನೆಗಳ ಕುರಿತು ಪ್ರಾತ್ಯಕ್ಷಿಕೆ, ಸಾಧನೆ ಮಾಡಿದ ಮಹಿಳೆಯರಿಗೆ ಸನ್ಮಾನ, ಮಹಿಳೆಯರಿಗೆಗಾಗಿ ರಾಜ್ಯ, ಕೇಂದ್ರ ಸರಕಾರಗಳು ಅನುಷ್ಠಾನ ಮಾಡಿರುವ ಕಾರ್ಯಕ್ರಮಗಳು, ಸಂಘ ಸಂಸ್ಥೆಗಳು ಮಹಿಳೆಯರಿಗಾಗಿ ಸಂಕಲ್ಪಿಸಿರುವ ಕಾರ್ಯಕ್ರಮಗಳು ಹೀಗೆ ಎಲ್ಲದರ ಬಗ್ಗೆ ಇಂದಿನ ದಿನ ಚರ್ಚೆ ನಡೆಯಬೇಕೆಂಬುದು ಜಟ್ಕಿನ್ ಅವರ ಆಶಯವಾಗಿತ್ತು ಎಂದರು.
ಶಿಕ್ಷಕಿ ಶ್ವೇತಾ ಕೊಟಗಿ ಮಾತನಾಡಿದರು. ವೇದಿಕೆಯ ಮೇಲೆ ಆರೋಗ್ಯ ಇಲಾಖೆಯ ರತ್ನಾ ಅವರೆಡ್ಡಿ, ಪ.ಪಂ. ಸದಸ್ಯೆ ಸುಮಿತ್ರಾ ಕಮಲಾಪುರ ಉಪಸ್ಥಿತರಿದ್ದರು. ಶಿಕ್ಷಕಿ ಕೆ.ವಿ. ಕಟ್ಟಿ, ನೇತ್ರಾ ಅಪ್ಪಣ್ಣವರ, ರತ್ನಾ ಬಾಣದ, ರೇಖಾ ದೇವರೆಡ್ಡಿ, ಹೇಮಾ ಚನ್ನಗಿರಿ, ನರೇಗಲ್ಲ ಪ್ರಾಥಮಿಕ ಆರೋಗ್ಯ ಕೇಂದ್ರದ ಮಹಿಳಾ ಕಾರ್ಯಕರ್ತರು, ಪಟ್ಟಣ ಪಂಚಾಯತಿಯ ಮಹಿಳಾ ಸದಸ್ಯರು, ಧರ್ಮಸ್ಥಳ ಗುಂಪಿನ ಎಲ್ಲ ಸದಸ್ಯರು ಪಾಲ್ಗೊಂಡಿದ್ದರು.
ಸಂಚಾಲಕಿ ಸವಿತಕ್ಕ ಮಾತನಾಡಿ, ಮಹಿಳೆಯರಿಂದ ನಡೆಯುವ ಈ ವಿಶ್ವವಿದ್ಯಾಲಯವು ಮಹಿಳೆಯರಿಗಾಗಿಯೇ ಅನೇಕ ಕಾರ್ಯಕ್ರಮಗಳನ್ನು ರೂಪಿಸಿ ಅವರನ್ನು ಜಾಗೃತಗೊಳಿಸಲು ಪ್ರಯತ್ನಿಸುತ್ತಿದೆ. ಅವರಿಗೆ ಒತ್ತಡ ರಹಿತ ಬದುಕನ್ನು ಹೇಗೆ ಬಾಳಬೇಕು ಎಂಬುದರ ಬಗ್ಗೆ ಪಾಠವನ್ನು ನೀಡುತ್ತಿದೆ. ಭಗವಂತನ ಬಗ್ಗೆ ಜ್ಞಾನವನ್ನು ಪಡೆದುಕೊಂಡ ಮಹಿಳೆಯರು ತಮ್ಮ ಬದುಕಿನಲ್ಲಿ ಸಂತಸದ ಕ್ಷಣಗಳನ್ನು ಅನುಭವಿಸುತ್ತಿದ್ದಾರೆ. ಇದರಿಂದ ಅವರು ಮಾನಸಿಕವಾಗಿ, ದೈಹಿಕವಾಗಿ ಸಧೃಡಗೊಂಡು ತಮ್ಮ ಕುಟುಂಬದ ಸೇವೆಯ ಜೊತೆಗೆ ಸಮಾಜದ ಸೇವೆಯಲ್ಲಿಯೂ ತಮ್ಮನ್ನು ತಾವು ತೊಡಗಿಸಿಕೊಳ್ಳುತ್ತಿದ್ದಾರೆ ಎಂದರು.


