ರಾಯಚೂರು: ಯುವಕನೊಬ್ಬ ಪ್ರೀತಿಸುವಂತೆ ಒತ್ತಾಯಿಸಿ ಯುವತಿ ಮನೆ ಮುಂದೆ ಹೋಗಿ ಗಲಾಟೆ ಮಾಡಿ ಪೋಷಕರಿಗೆ ಕೊಲೆ ಬೆದರಿಕೆ ಹಾಕಿ ಹಲ್ಲೆ ಮಾಡಿರುವ ಆರೋಪ ಕೇಳಿಬಂದಿದೆ.
ರಾಯಚೂರು ಜಿಲ್ಲೆ ಸಿಂಧನೂರು ಪಟ್ಟಣದ ವೆಂಕಟೇಶ್ವರ ನಗರದಲ್ಲಿ ಈ ಘಟನೆ ನಡೆದಿದ್ದು, ಯುವತಿ ತಂದೆ ಹಾಗೂ ಪಾಗಲ್ ಪ್ರೇಮಿ ಗಲಾಟೆಯ ವಿಡಿಯೋ ವೈರಲ್ ಆಗಿದೆ.
ವೆಂಕಟೇಶ್ವರ ನಗರದ ಸತೀಶ್ ಎಂಬುವರ ಮನೆ ಬಳಿ ಯುವಕ ವಸಂತ್ ಕಿರಿಕ್ ಮಾಡಿದ್ದು, ಸತೀಶ್ ಎನ್ನುವವರ ಮಗಳು ಕಾಲೇಜಿಗೆ ಹೋಗುತ್ತಿದ್ದಳು. ಆಕೆಗೆ ಪ್ರೀತಿ ಮಾಡುವಂತೆ ಹೇಳಿದ್ದಾನೆ. ಅದಕ್ಕೆ ಆಕೆ ನಿರಾಕರಿಸಿದ್ದಾಳೆ. ಆದರೆ ಅಷ್ಟಕ್ಕೆ ಸುಮ್ಮನಾಗದ ವಸಂತ ದಿನನಿತ್ಯ ಆಕೆಯು ಹಿಂದೆ ಬಿದ್ದು ಕಿರುಕುಳ ನೀಡಿದ್ದಾನೆ.
ಬೇಸತ್ತ ಯುವತಿ ಕೆಲ ದಿನಗಳ ಕಾಲ ಸಿಂಧನೂರನ್ನೇ ಬಿಟ್ಟು ಹೋಗಿದ್ದಳು. ಯುವತಿ ಮತ್ತೆ ಸಿಂಧನೂರಿಗೆ ಬಂದ ವಿಚಾರ ತಿಳಿದು ಕಂಠ ಪೂರ್ತಿ ಕುಡಿದು ವಸಂತ್ ಯುವತಿ ಮನೆಗೆ ಬಂದಿದ್ದಾನೆ.
ಪ್ರೀತಿಸುವಂತೆ ಒತ್ತಾಯಿಸಿ ಯುವತಿ ಮನೆ ಮುಂದೆ ಪುಂಡಾಟ ಮೆರೆದಿದ್ದಾನೆ. ಯುವತಿ ತಂದೆ ಹಾಗೂ ಪಾಗಲ್ ಪ್ರೇಮಿ ಹೊಡೆದಾಡಿಕೊಂಡಿದ್ದಾರೆ. ಈ ಕಿತ್ತಾಟದಲ್ಲಿ ಯುವತಿ ತಂದೆ ಸತೀಶ್ ಹಾಗೂ ಯುವಕ ವಸಂತ್ ಗೆ ಗಾಯಗಳಾಗಿವೆ. ಇಬ್ಬರು ಸಿಂಧನೂರು ತಾಲೂಕು ಆಸ್ಪತ್ರೆಗೆ ದಾಖಲಾಗಿದ್ದಾರೆ. ಸಿಂಧನೂರು ಟೌನ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.