ಚಿಕ್ಕಬಳ್ಳಾಪುರ:– ಪೋಷಕರು ಬುದ್ಧಿವಾದ ಹೇಳಿದ್ದಕ್ಕೆ ಯುವಕನೋರ್ವ ನೇಣಿಗೆ ಶರಣಾದ ಘಟನೆ ಮಾಡೇಶ್ವರ ಗ್ರಾಮದ ಹೊರವಲಯದಲ್ಲಿ ಜರುಗಿದೆ.
ಇದ್ದ ಕೆಲಸ ಬಿಟ್ಟು, ಈಗ ಬೈಕ್ ಇಎಂಐ ಕಂತು ಹೇಗೆ ಕಟ್ತೀಯಾ? ಎಂದು ತಂದೆ ತಾಯಿ ಬುದ್ಧಿವಾದ ಹೇಳಿದ್ದಾರೆ. ಇದರಿಂದ ಮನನೊಂದು ಮಗ ನೇಣಿಗೆ ಶರಣಾಗಿದ್ದಾನೆ. 25 ವರ್ಷದ ನಿಖಿಲ್ ನೇಣಿಗೆ ಶರಣಾದ ಯುವಕ ಎಂದು ತಿಳಿದು ಬಂದಿದೆ.
ಆತ ಖಾಸಗಿ ಕಾರ್ಖಾನೆಗೆ ಕೆಲಸಕ್ಕೆ ತೆರಳುತ್ತಿದ್ದ. ಇತ್ತೀಚೆಗೆ ಕೆಲಸ ಬಿಟ್ಟು ಹಸು ಮೇಯುಸುತ್ತಿದ್ದ. ಅಲ್ಲದೇ ಇತ್ತೀಚೆಗಷ್ಟೇ ಸಾಲ ಮಾಡಿ ಬೈಕ್ ಖರೀದಿಸಿದ್ದ. ಇದಕ್ಕೆ ಪೋಷಕರು ಈಗ ಬೈಕ್ ಅಗತ್ಯವೆನಿತ್ತು? ಕೆಲಸ ಬೇರೆ ಬಿಟ್ಟಿದ್ದೀಯಾ ತಿಂಗಳು ತಿಂಗಳು ಇಎಂಐ ಹೇಗೆ ಕಟ್ತೀಯಾ ಎಂದು ಬೈದು ಬುದ್ಧಿವಾದ ಹೇಳಿದ್ದರು.
ಪೋಷಕರ ಮಾತಿಗೆ ಬೇಸತ್ತು, ಹಸು ಮೇಯಿಸಲು ತೆರಳಿದ್ದ ವೇಳೆ ಮರಕ್ಕೆ ನೇಣು ಬಿಗಿದುಕೊಂಡು ಯುವಕ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ. ಸ್ಥಳಕ್ಕೆ ದೊಡ್ಡಬೆಳವಂಗಲ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.