ಹಾಸನ: ನ್ಯೂ ಇಯರ್ ಪಾರ್ಟಿಗಾಗಿ ಗೋವಾಕ್ಕೆ ತೆರಳಿದ್ದ ಹಾಸನ ಜಿಲ್ಲೆಯ ಆಲೂರು ತಾಲೂಕಿನ ಹೊಸಳ್ಳಿ ಗ್ರಾಮದ ಯುವಕನೊಬ್ಬ ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ ನಡೆದಿದೆ. ಮೃತನನ್ನು ರಕ್ಷಿತ್ (26) ಎಂದು ಗುರುತಿಸಲಾಗಿದೆ.
ಡಿ.31 ರಂದು ಸಂಬಂಧಿಕರು ಹಾಗೂ ಸಹೋದರರಾದ ಚಿದಂಬರಂ ಮತ್ತು ಪ್ರವೀಣ್ ಜೊತೆ ರಕ್ಷಿತ್ ಗೋವಾಗೆ ತೆರಳಿದ್ದರು. ಅದೇ ದಿನ ಗೋವಾದಲ್ಲಿ ನ್ಯೂ ಇಯರ್ ಪಾರ್ಟಿ ಆಚರಿಸಿದ್ದರು. ಜ.1 ರಂದು ಬೆಳಿಗ್ಗೆ ತಿಂಡಿ ಮುಗಿಸಿ ಗೋವಾದಲ್ಲಿ ತಿರುಗಾಡುತ್ತಿರುವ ವೇಳೆ ರಕ್ಷಿತ್ಗೆ ದಿಢೀರ್ ಹೃದಯಾಘಾತ ಸಂಭವಿಸಿದೆ.
ಕೂಡಲೇ ಜೊತೆಯಲ್ಲಿದ್ದವರು ಸ್ಥಳೀಯ ಆಸ್ಪತ್ರೆಗೆ ಕರೆದೊಯ್ದರೂ, ಅಷ್ಟರಲ್ಲೇ ರಕ್ಷಿತ್ ಹೃದಯಾಘಾತದಿಂದ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ.
ಗೋವಾದಿಂದ ಮೃತದೇಹವನ್ನು ಸ್ವಗ್ರಾಮ ಹೊಸಳ್ಳಿಗೆ ತರಲಾಗಿದ್ದು, ಈ ಸುದ್ದಿ ತಿಳಿದ ಪೋಷಕರು ಮತ್ತು ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.



