ಬೆಂಗಳೂರು: ಆನ್ಲೈನ್ನಲ್ಲಿ ಪ್ರಕಟವಾಗಿದ್ದ ವಶೀಕರಣ ಜಾಹೀರಾತನ್ನು ನಂಬಿದ ಯುವತಿಯೊಬ್ಬರು ಲಕ್ಷಾಂತರ ರೂಪಾಯಿ ಹಣ ಕಳೆದುಕೊಂಡ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಪ್ರೀತಿಸಿದ ಯುವಕನನ್ನು ವಶೀಕರಣ ಮೂಲಕ ಪಡೆಯಿಸಿಕೊಡುವುದಾಗಿ ನಂಬಿಸಿ ಆರೋಪಿಯು ಯುವತಿಯಿಂದ 2 ಲಕ್ಷಕ್ಕೂ ಹೆಚ್ಚು ಹಣ ಪಡೆದು ಮೋಸಮಾಡಿದ್ದಾನೆ. ಈ ಸಂಬಂಧ ಆಡುಗೋಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸೋಷಿಯಲ್ ಮೀಡಿಯಾದಲ್ಲಿ “ಕಷ್ಟಗಳಿಗೆ ಪರಿಹಾರ” ಎಂಬ ಶೀರ್ಷಿಕೆಯಲ್ಲಿ ಕೃಷ್ಣಮೂರ್ತಿ ಗುರೂಜಿ ಎಂಬ ಹೆಸರಿನ ಅಕೌಂಟ್ ಮೂಲಕ ಜಾಹೀರಾತು ಪ್ರಕಟಿಸಲಾಗಿತ್ತು. ಜಾಹೀರಾತಿನಲ್ಲಿ ನೀಡಿದ್ದ ಮೊಬೈಲ್ ಸಂಖ್ಯೆಗೆ ಕರೆ ಮಾಡಿದ ಯುವತಿಯೊಂದಿಗೆ ಚಂದ್ರಶೇಖರ್ ಸುಗತ್ ಗುರೂಜಿ ಎಂದು ಪರಿಚಯಿಸಿಕೊಂಡ ವ್ಯಕ್ತಿ ಮಾತನಾಡಿದ್ದಾನೆ.
ಯುವತಿ ತನ್ನ ಪ್ರೀತಿಸಿದ ಯುವಕನ ಬಗ್ಗೆ ಮಾಹಿತಿ ನೀಡಿದ ಬಳಿಕ, ವಶೀಕರಣ ಮಾಡಿದರೆ ಮದುವೆ ಆಗುವುದು ಖಚಿತ, ಆದರೆ ಇದಕ್ಕೆ ಖರ್ಚು ಆಗುತ್ತದೆ ಎಂದು ಆರೋಪಿಯು ನಂಬಿಸಿದ್ದಾನೆ. ಈ ನಂಬಿಕೆಯಿಂದ ಯುವತಿ ಹಂತ ಹಂತವಾಗಿ ಆನ್ಲೈನ್ ಮೂಲಕ ಒಟ್ಟು 2.05 ಲಕ್ಷ ರೂಪಾಯಿ ಹಣ ವರ್ಗಾವಣೆ ಮಾಡಿದ್ದಾಳೆ.
ನಂತರ ಆರೋಪಿಯು ಮತ್ತಷ್ಟು 4 ಲಕ್ಷ ರೂಪಾಯಿ ಕೇಳಿದಾಗ ಅನುಮಾನಗೊಂಡ ಯುವತಿ ಹಣ ವಾಪಸ್ ಕೇಳಿದ್ದಾಳೆ. ಇದಕ್ಕೆ ಆರೋಪಿಯು “ಏನು ಮಾಡ್ತಿಯೋ ಮಾಡಿಕೋ” ಎಂದು ಬೆದರಿಕೆ ಹಾಕಿದ್ದಾನೆ ಎಂದು ಯುವತಿ ದೂರಿನಲ್ಲಿ ಆರೋಪಿಸಿದ್ದಾಳೆ. ಈ ಕುರಿತು ಯುವತಿ ಆಡುಗೋಡಿ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.



