ವಿಜಯಸಾಕ್ಷಿ ಸುದ್ದಿ, ಧಾರವಾಡ : ಧಾರವಾಡ ಜಿಲ್ಲೆಯ ಜನಸ್ಪಂದನ ಕಾರ್ಯಕ್ರಮಗಳ ಫಲಶೃತಿಯಾಗಿ, ಸಾರ್ವಜನಿಕರ ಬೇಡಿಕೆಯಂತೆ ಜುಲೈ 3ರಿಂದ ನವಲಗುಂದ ಮತ್ತು ಕಲಘಟಗಿಯಲ್ಲಿ ಆಧಾರ್ ಸೇವಾ ಕೇಂದ್ರಗಳ ಮೂಲಕ ವಿಶೇಷ ಆಧಾರ್ ಕ್ಯಾಂಪ್ ಆಯೋಜಿಸಲು ಡಿಸಿ ಕಚೇರಿ ಸಿಬ್ಬಂದಿಗಳನ್ನು ನೇಮಿಸಿ, ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ಆದೇಶ ಹೊರಡಿಸಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು, ನವಲಗುಂದ ಮತ್ತು ಕಲಘಟಗಿ ಜನಸ್ಪಂದನ ಸಭೆಗಳಲ್ಲಿ ಸಾರ್ವಜನಿಕರು ಆಧಾರ್ ತಿದ್ದುಪಡಿ, ಬ್ಯಾಂಕ್ ಖಾತೆಗಳಿಗೆ ಆಧಾರ್ ಜೋಡಣೆ ಸೇರಿದಂತೆ ಆಧಾರ್ ಕಾರ್ಡ್ ಸಂಬಂಧಿತ ಕಾರ್ಯಗಳಿಗೆ ಪಕ್ಕದ ನಗರಗಳಿಗೆ ಅಲೆಯಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ.
ನಾಡಕಚೇರಿಗಳ ಆಧಾರ ಸೇವಾ ಕೇಂದ್ರಗಳಲ್ಲಿ ಸಿಬ್ಬಂದಿ ಹಾಜರಾತಿ ಸಮಸ್ಯೆ, ಸರ್ವರ್ ಸಮಸ್ಯೆ, ಜನದಟ್ಟನೆ ಕಾರಣಗಳಿಂದ ಆಧಾರ್ ತಿದ್ದುಪಡಿ ಕಾರ್ಯ ವಿಳಂಬವಾಗುತ್ತಿದೆ. ಆಧಾರ್ ಸೇವೆಗಳಿಗಾಗಿ ವಿಶೇಷ ಕ್ಯಾಂಪ್ ಮಾಡುವಂತೆ ಸಾರ್ವಜನಿಕರು ಮನವಿ ಸಲ್ಲಿಸಿದ್ದರು.
ಅವರ ಮನವಿಗೆ ಸ್ಪಂದಿಸಿ, ಜುಲೈ 3ರಿಂದ ಸೀಮಿತ ಅವಧಿಗೆ ನವಲಗುಂದ ಪಟ್ಟಣ ಮತ್ತು ಕಲಘಟಗಿ ಪಟ್ಟಣದಲ್ಲಿ ವಿಶೇಷ ಆಧಾಎದ ಕ್ಯಾಂಪ್ ಸಂಘಟಿಸಲು ಆದೇಶಿಸಲಾಗಿದೆ. ನವಲಗುಂದ ಆಧಾರ್ ಕ್ಯಾಂಪ್ ಸಂಯೋಜಕರಾಗಿ ಡಿಸಿ ಕಚೇರಿಯ ಜಿಲ್ಲಾ ಆಧಾರ್ ಸಮಾಲೋಚಕರನ್ನು ಹಾಗೂ ಕಲಘಟಗಿ ಆಧಾರ್ ಕ್ಯಾಂಪ್ ಸಂಯೋಜಕರನ್ನಾಗಿ ಡಿಸಿ ಕಚೇರಿಯ ಎ.ಜೆ.ಎಸ್.ಕೆ. ಸಮಾಲೋಚಕರನ್ನು ನಿಯೋಜಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.
ಕಲಘಟಗಿ ಮತ್ತು ನವಲಗುಂದ ಪಟ್ಟಣದ ಸಾರ್ವಜನಿಕರು ಆಧಾರ ವಿಶೇಷ ಕ್ಯಾಂಪ್ ಸದುಪಯೋಗ ಪಡಿಸಿಕೊಳ್ಳಬೇಕೆಂದು ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕಲಘಟಗಿ ಹಾಗೂ ಅಣ್ಣಿಗೇರಿ ತಹಸೀಲ್ದಾರ ಕಚೇರಿಗಳಲ್ಲಿನ ನಾಡಕಚೇರಿಯ ಆಧಾರ್ ಸೇವಾ ಕೇಂದ್ರಗಳು ಸಿಬ್ಬಂದಿಯ ಗೈರು ಹಾಗೂ ತಾಂತ್ರಿಕ ಕಾರಣಗಳಿಂದ ನಿಯಮಿತವಾಗಿ ಕಾರ್ಯನಿರ್ವಹಿಸುತ್ತಿಲ್ಲವೆಂದು ಸಾರ್ವಜನಿಕರು ದೂರು ಸಲ್ಲಿಸಿದ್ದು, ಈ ಕೇಂದ್ರಗಳಿಗೆ ಹೊಸ ಆಪ್ರೇಟರ್ (ನಿರ್ವಾಹಕ)ರನ್ನು ನೇಮಿಸಲು ಕ್ರಮವಹಿಸಲಾಗಿದ್ದು, ಅಲ್ಲಿವರೆಗೆ ಅಗತ್ಯ ಸಿಬ್ಬಂದಿ ನೇಮಿಸಿ, ಅವರಿಗೆ ತರಬೇತಿ ನೀಡಲಾಗಿದೆ. ನೇಮಿಸಿದ ಸಿಬ್ಬಂದಿಗೆ ಅಗತ್ಯ ಗುರುತಿನ ಸಂಖ್ಯೆ ಹಾಗೂ ಅಗತ್ಯ ಅನುಮತಿ ಶೀಘ್ರದಲ್ಲಿ ಬರಲಿದೆ. ಅಲ್ಲಿಯವರೆಗೆ ಜಿಲ್ಲಾ ಸಮಾಲೋಚಕರು ನಿರ್ವಹಣೆ ಮಾಡಲಿದ್ದಾರೆ.