ಚಿಕ್ಕೋಡಿ:- ದಲಿತ ಯುವತಿಗೆ ನಿಂದಿಸಿದ ಆರೋಪದಡಿ ಅಥಣಿ ಡಿವೈಎಸ್ಪಿ ಪ್ರಶಾಂತ್ ಮುನ್ನೋಳಿ ವಿರುದ್ಧ ಎಫ್ಐಆರ್ ದಾಖಲಾಗಿದೆ.
ದೂರು ಕೊಡಲು ದಲಿತ ಯುವತಿ ಪೊಲೀಸ್ ಠಾಣೆಗೆ ಬಂದ ವೇಳೆ ಘಟನೆ ಜರುಗಿದೆ. ಅಥಣಿ ಪಟ್ಟಣದ ಆಸ್ಪತ್ರೆಯೊಂದರ ವೈದ್ಯರಾಗಿರುವ ಸಾಗರ ಭಾವಿ ಅದೇ ಆಸ್ಪತ್ರೆಯಲ್ಲಿ ನರ್ಸ್ ಆಗಿ ಕೆಲಸ ಮಾಡುತ್ತಿದ್ದ ಯುವತಿಯನ್ನು ಮದುವೆಯಾಗುವುದಾಗಿ ನಂಬಿಸಿ, ಕಳೆದ ಆರು ತಿಂಗಳಿಂದ ನಿರಂತರ ಲೈಂಗಿಕವಾಗಿ ಬಳಸಿಕೊಂಡಿದ್ದಾನೆ. ಕೊನೆಗೆ ಮದುವೆಯಾಗುವುದಿಲ್ಲವೆಂದು ಹೇಳಿದ್ದಾನೆ ಎಂದು ಆರೋಪಿಸಿ ಯುವತಿಯು ಅಥಣಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಳು.
ದೂರು ನೀಡಿದ ಬಳಿಕ ಆರೋಪಿ ಜೀವ ಬೆದರಿಕೆ ಹಾಕಿದ್ದಾನೆ. ಈ ಬಗ್ಗೆ ಡಿವೈಎಸ್ಪಿ ಕಚೇರಿಗೆ ಹೋದಾಗ ಪ್ರಶಾಂತ್ ಮುನ್ನೋಳ್ಳಿ ಮತ್ತು ಪೊಲೀಸ್ ಪೇದೆ ಸದಾಶಿವ ಪಾಟೀಲ್ ಜಾತಿ ನಿಂದನೆ ಮಾಡಿ ಯುವತಿಯನ್ನು ಠಾಣೆಯಿಂದ ಹೊರಹಾಕಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ನೊಂದ ಯುವತಿಯು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಈ ಕುರಿತು ವಿವರಿಸಿದಾಗ ಡಿವೈಎಸ್ಪಿ ಮತ್ತು ಪೊಲೀಸ್ ಪೇದೆ ಮೇಲೆ ದೂರು ದಾಖಲಿಸಿ ಕ್ರಮ ಕೈಗೊಳ್ಳಬೇಕು ಎಂದು ಆದೇಶಿಸಿದ್ದಾರೆ.