ಗದಗ: ಪೈಪ್ಲೈನ್ ದುರಸ್ಥಿ ವೇಳೆ ಸಂಭವಿಸಿದ ಅವಘಡದಲ್ಲಿ ಮಣ್ಣು ಕುಸಿದು ಓರ್ವ ಕಾರ್ಮಿಕ ಸಾವನ್ನಪ್ಪಿದ್ದು, ಮತ್ತೊಬ್ಬ ಯುವಕ ಗಂಭೀರವಾಗಿರುವ ಘಟನೆ ನಗರದ ಟಿಪ್ಪು ಸುಲ್ತಾನ್ ಸರ್ಕಲ್ ಬಳಿ ಜರುಗಿದೆ. ಕಾಮಗಾರಿ ವೇಳೆ ಕಾರ್ಮಿಕರ ಮೇಲೆ ಏಕಾಏಕಿ ಮಣ್ಣು ಕುಸಿದಿದೆ.
ಈ ವೇಳೆ ಕಾರ್ಮಿಕರನ್ನು ಕೂಡಲೇ ಸ್ಥಳೀಯ ಜಿಮ್ಸ್ ಆಸ್ಪತ್ರೆಗೆ ರವಾನಿಸಲಾಗಿತ್ತು. ಆದರೆ ಅದರಲ್ಲಿ ಓರ್ವ ಗಾಯಾಳು ನಜೀರ್ ಸಾಬ್ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾರೆ. ಹಾಗೂ ಮತ್ತೊಬ್ಬ ಮಂಜುನಾಥ್ ಎಂಬುವವನ ಸ್ಥಿತಿ ಗಂಭೀರವಾಗಿದ್ದು, ಜಿಮ್ಸ್ ನಲ್ಲಿ ಚಿಕಿತ್ಸೆ ಮುಂದುವರಿದಿದೆ.
ಗ್ಯಾಸ್ಪೈಪ್ ಲೈನ್ ಹಾಕುವ ವೇಳೆ ನೀರಿನ ಪೈಪ್ ಡ್ಯಾಮೇಜ್ ಗೊಂಡಿತ್ತು. ಈ ವೇಳೆ ನೀರಿನ ಪೈಪ್ ರಿಪೇರಿ ಮಾಡಲು ನಗರಸಭೆ ಅಧಿಕಾರಿಗಳು ಕೆಲ ಕಾರ್ಮಿಕರ ಜೊತೆಗೆ ಮುಂದಾಗಿದ್ದರು. ಆ ಸಂದರ್ಭದಲ್ಲಿ ಏಕಾಏಕಿ ಮಣ್ಣು ಕುಸಿತದಿಂದಾಗಿ ಮಣ್ಣಿನ ಅಡಿಯಲ್ಲಿ ಕಾರ್ಮಿಕರು ಸಿಲುಕಿ ಅವಘಡ ಸಂಭವಿಸಿದೆ.
ನನ್ನ ಗಂಡನ ಸಾವಿಗೆ ನಗರಸಭೆ, ಗ್ಯಾಸ್ ಪೈಪ್ ಲೈನ್ ಕಂಪನಿ ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣ ಅಂತ ಮೃತನ ಪತ್ನಿ ಆರೋಪ ಮಾಡಿದ್ದು,
ಕಾಮಗಾರಿ ವೇಳೆ ಯಾವುದೇ ಮುಂಜಾಗ್ರತಾ ಕ್ರಮ ಕೈಗೊಂಡಿಲ್ಲ, ಆದ್ದರಿಂದ ಈ ದುರ್ಘಟನೆ ನಡೆದಿದೆ ಎಂದು ಕುಟುಂಬಸ್ಥರು ಆರೋಪ ಮಾಡಿದ್ರೆ ಮೃತ ಕಾರ್ಮಿಕ ನಜೀರಸಾಬ್ ನಮ್ಮ ಕಾರ್ಮಿಕ ಅಲ್ಲ ಎಂದು ನಗರಸಭೆ ಅಧಿಕಾರಿಗಳು ಹಾಗೂ ಗ್ಯಾಸ್ ಲೈನ್ ಕಂಪನಿ ಅಧಿಕಾರಿಗಳು ನುಣುಚಿಕೊಳ್ಳುವ ಯತ್ನ ಮಾಡುತ್ತಿದ್ದಾರೆ.
ನಗರಸಭೆ, ಗ್ಯಾಸ್ ಕಂಪನಿ ವಿರುದ್ಧ ಸಾರ್ವಜನಿಕರ ತೀವ್ರ ಆಕ್ರೋಶ ವ್ಯಕ್ತವಾಗಿದ್ದು, ಸದ್ಯ ಈ ಕುರಿತು ಗದಗ ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.