ಹಾಸನ: ಜಿಲ್ಲೆಯ ಬೇಲೂರು ತಾಲ್ಲೂಕಿನ ಮುತ್ತಗನ್ನೆ ಗ್ರಾಮದ ಬಳಿ ಮುಂಜಾನೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಇಬ್ಬರು ಯುವಕರು ಸ್ಥಳದಲ್ಲೇ ಸಾವನ್ನಪ್ಪಿದ ದಾರುಣ ಘಟನೆ ಬೆಳಕಿಗೆ ಬಂದಿದೆ. ಬೈಕ್ಗೆ ಅಪರಿಚಿತ ವಾಹನ ಗುದ್ದಿದ ಪರಿಣಾಮ ದುರಂತ ನಡೆದಿದೆ.
ಮೃತರಾದವರು ಹೊನ್ನೇನಹಳ್ಳಿ ಗ್ರಾಮದ ಲೋಕೇಶ್ (25) ಹಾಗೂ ಚಿಕ್ಕಮಗಳೂರು ಜಿಲ್ಲೆಯ ರಾಮೇನಹಳ್ಳಿ ಗ್ರಾಮದ ಕಿರಣ್ (32) ಎಂದು ಗುರುತಿಸಲಾಗಿದೆ. ಲೋಕೇಶ್ ಅವರ ತಂಗಿಯ ಆರತಕ್ಷತೆ ಕಾರ್ಯಕ್ರಮಕ್ಕಾಗಿ ಮಜ್ಜಿಗೆ–ಮೊಸರು ತರಲು ಇಬ್ಬರೂ KA-05 LE-4017 ಸಂಖ್ಯೆಯ ಹೀರೋ ಸ್ಪ್ಲೆಂಡರ್ ಬೈಕ್ನಲ್ಲಿ ಬೇಲೂರು ಕಡೆಗೆ ತೆರಳುತ್ತಿದ್ದರು ಎಂದು ತಿಳಿದು ಬಂದಿದೆ.
ರಾತ್ರಿ ಅಪರಿಚಿತ ವಾಹನ ಬೈಕ್ಗೆ ಡಿಕ್ಕಿ ಹೊಡೆದಿದ್ದು, ರಭಸದ ತೀವ್ರತೆಯಿಂದ ಬೈಕ್ ಪಲ್ಟಿಯಾಗಿ ಸುಮಾರು 10 ಅಡಿ ದೂರದಲ್ಲಿ ಬಿದ್ದಿದೆ. ಹೊಡೆತದ ಪರಿಣಾಮ ಸ್ಥಳದಲ್ಲೇ ಇಬ್ಬರೂ ಮೃತಪಟ್ಟಿದ್ದಾರೆ. ಬೆಳಿಗ್ಗೆ ದೇಹಗಳನ್ನು ರಸ್ತೆ ಬದಿಯಲ್ಲಿ ಕಂಡ ಗ್ರಾಮಸ್ಥರು ಪೊಲೀಸರಿಗೆ ಮಾಹಿತಿ ನೀಡಿದ್ದು,
ಪಿಎಸ್ಐ ಪಾಟೀಲ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪ್ರಕರಣವನ್ನು ಬೇಲೂರು ಪೊಲೀಸ್ ಠಾಣೆಯಲ್ಲಿ ದಾಖಲಿಸಲಾಗಿದ್ದು, ಅಪರಿಚಿತ ವಾಹನದ ಪತ್ತೆಗೆ ಪೊಲೀಸರು ತನಿಖೆ ಆರಂಭಿಸಿದ್ದಾರೆ.


