ವಿಜಯಸಾಕ್ಷಿ ಸುದ್ದಿ, ಲಕ್ಮೇಶ್ವರ: ತಾಲೂಕಿನ ಬಾಲೆಹೊಸೂರ ಗ್ರಾಮದ ಹೊರವಲಯದ ಗುಡಿಸಲಿಗೆ ಆಕಸ್ಮಿಕ ಬೆಂಕಿ ಹೊತ್ತಿಕೊಂಡು ಗುಡಿಸಲು ಸಂಪೂರ್ಣ ಕರಕಲಾದ ಘಟನೆ ಜರುಗಿದೆ.
ಗ್ರಾಮದ ರೈತ ಮಂಜಪ್ಪ ತಿಪ್ಪಣ್ಣ ಹುಚ್ಚಣ್ಣನವರ ಅವರಿಗೆ ಸೇರಿದ ಗುಡಿಸಲಿಗೆ ಮಧ್ಯಾಹ್ನ ಹೊತ್ತಿಕೊಂಡಿದ್ದ ಆಕಸ್ಮಿಕ ಬೆಂಕಿಯಿಂದ ಗುಡಿಸಲಿನಲ್ಲಿದ್ದ ಸಿಲಿಂಡರ್ ಸ್ಫೋಟಗೊಂಡು ಧವಸಧಾನ್ಯ, ಗೃಹ ಬಳಕೆ ವಸ್ತುಗಳು, ಬಟ್ಟೆ-ಬರೆ, 50 ಸಾವಿರ ನಗದು, 20 ಗ್ರಾಂ ಬಂಗಾರ ಇತರೇ ವಸ್ತುಗಳು ಸೇರಿ ಅಪಾರ ಪ್ರಮಾಣದ ವಸ್ತುಗಳು ಬೆಂಕಿಗಾಹುತಿಯಾಗಿವೆ. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿಯಾಗಿಲ್ಲ. ಜಮೀನಿನಲ್ಲಿಯೇ ತಗಡಿ ಶೆಡ್ ನಿರ್ಮಿಸಿಕೊಂಡು ವಾಸಿಸುತ್ತಿದ್ದ ಮಂಜಪ್ಪನ ಕುಟುಂಬ ಇದೀಗ ಬೀದಿಗೆ ಬಿದ್ದಿದೆ. ಘಟನಾ ಸ್ಥಳಕ್ಕೆ ಪಿಡಿಓ ಶೇಖರಗೌಡ ವಡಕನಗೌಡ್ರ, ಗ್ರಾಮ ಸಹಾಯಕ ಮಲೀಕ ಪಿಂಜಾರ ಭೇಟಿ ನೀಡಿ ಪರಿಶೀಲಿಸಿ, ವರದಿ ಸಲ್ಲಿಸಿದ್ದಾರೆ.
ಮುಂದೇನು ಎಂಬ ಚಿಂತೆಯಲ್ಲಿರುವ ಕುಟುಂಬಕ್ಕೆ ತಾಲೂಕಾಡಳಿತ, ಜನಪ್ರತಿನಿಧಿಗಳು ಪರಿಹಾರ ಕಲ್ಪಿಸುವ ಪ್ರಾಮಾಣಿಕ ಪ್ರಯತ್ನ ಮಾಡಬೇಕು ಎಂದು ಮಂಜುನಾಥ ಸೀತಮ್ಮನವರ, ರಾಜು ಬೆಂಚಳ್ಳಿ ಮುಂತಾದವರು ಆಗ್ರಹಿಸಿದ್ದಾರೆ.