ವಿಜಯಸಾಕ್ಷಿ ಸುದ್ದಿ, ಮುಳಗುಂದ: ಪ್ರತಿಯೊಬ್ಬರೂ ಸೇವಾ ಮನೋಭಾವನೆಯಿಂದ ಕೆಲಸ ಮಾಡಿದಲ್ಲಿ ಕಾರ್ಯಸಿದ್ಧಿಯಾಗುತ್ತದೆ ಎಂದು ಗದಗ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಕೆ.ಎ. ಬಳಿಗಾರ ಹೇಳಿದರು.
ಅವರು ಪಟ್ಟಣದ ಬಾಲಲೀಲಾ ಮಾಹಾಂತ ಶಿವಯೋಗಿಗಳ ಗವಿಮಠದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಗದಗ ಜಿಲ್ಲಾ ಯೋಜನಾ ನಿರ್ದೇಶಕ ಯೋಗರಾಜ ಅವರ ಬೀಳ್ಕೊಡುಗೆ ಸಮಾರಂಭದಲ್ಲಿ ಮಾತನಾಡಿದರು.
ಧರ್ಮಸ್ಥಳ ಗ್ರಾಮಾಭಿವೃದ್ಧಿಯ ಪ್ರತಿಯೊಬ್ಬ ಸೇವಾ ಪ್ರತಿನಿಧಿಯ ಸೇವೆ ಅತ್ಯಂತ ಶ್ಲಾಘನೀಯ. ಗಾಂಧೀಜಿ ಕಂಡ ಕನಸು ಇಂದು ನನಸಾಗಲು ಧರ್ಮಸ್ಥಳ ಗ್ರಾಮಾಭಿವೃದ್ಧಿಯ ಡಾ. ವಿರೇಂದ್ರ ಹೆಗ್ಗಡೆ ಅವರ ಶ್ರಮ ಅತ್ಯಮೂಲ್ಯವಾಗಿದೆ. ಗ್ರಾಮೀಣ ಭಾಗದ ಬಡ ಕುಟುಂಬಗಳನ್ನು ಆರ್ಥಿಕವಾಗಿ ಸಬಲರನ್ನಾಗಿಸಲು ಹತ್ತು ಹಲವು ಯೋಜನೆಗಳ ಮೂಲಕ ಆರ್ಥಿಕವಾಗಿ ಸದೃಢರನ್ನಾಗಿಸಲು ಕಂಕಣಬದ್ಧರಾಗಿ ಸೇವಾ ಮನೋಭಾವದಿಂದ ಕಾಯಕ ಮಾಡುತ್ತಿದ್ದಾರೆ. ಗದಗ ಜಿಲ್ಲಾ ಯೋಜನಾಧಿಕಾರಿ ಯೋಗೇಶ ಅವರ ಸೇವಾ ಮನೋಭಾವನೆಯಿಂದ ಮುಳಗುಂದ ಪಟ್ಟಣದಲ್ಲಿ ಸಾಕಷ್ಟು ಅಭಿವೃದ್ಧಿ ಸಾಧ್ಯವಾಗಿದೆ ಎಂದರು.
ಅಧ್ಯಕ್ಷತೆಯನ್ನು ಎಂ.ಡಿ. ಬಟ್ಟೂರ ವಹಿಸಿದ್ದರು. ಡಾ. ಎಸ್.ಸಿ. ಚವಡಿ, ಎಸ್.ಸಿ. ಬಡ್ನಿ, ಶಿವಬಸವ ಹಸಬಿ, ಮಾಹಾಂತೇಶ ಕೋರಿ, ತಾ.ಯೋಜನಾಧಿಕಾರಿ ಪುನಿತ ಓಲೇಕಾರ, ಮೇಲ್ವಿಚಾರಕಿ ಶಾಂತಾ, ಪ್ರಕಾಶ ಮದ್ದಿನ ಇದ್ದರು.