ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಕಳ್ಳತನ ಮಾಡಿ ಕದ್ದ ಆಭರಣಗಳೊಂದಿಗೆ ಕಾಡಿಗೆ ಎಸ್ಕೇಪ್ ಆಗುತ್ತಿದ್ದ ಖದೀಮನನ್ನು ಬಂಧಿಸುವಲ್ಲಿ ಗಿರಿನಗರ ಪೊಲೀಸರು ಯಶಸ್ವಿಯಾಗಿದ್ದಾರೆ. ನರಸಿಂಹ ರೆಡ್ಡಿ ಬಂಧಿತ ಆರೋಪಿಯಾಗಿದ್ದು, ಬೀಗ ಹಾಕಿದ ಮನೆಗಳಲ್ಲಿ ಯಾರು ಇಲ್ಲದ ವೇಳೆ ಕಳ್ಳತನ ಮಾಡುತ್ತಿದ್ದ. ಇತ್ತೀಚಿಗೆ ಗಿರಿನಗರ ವ್ಯಾಪ್ತಿಯಲ್ಲಿ ಬರುವ ಮನೆಯೊಂದರಲ್ಲಿ ಕಳ್ಳತನ ಮಾಡಿದ್ದ. ಕದ್ದ ಆಭರಣ ಸಮೇತ ಕಾಡಿಗೆ ಎಸ್ಕೇಪ್ ಆಗಿದ್ದ. ಆರೋಪಿ ಎರಡು ಕಾಡುಗಳನ್ನು ತನ್ನ ಆವಾಸಸ್ಥಾನ ಮಾಡಿಕೊಂಡಿದ್ದ.
ಈತ ನೆಲಮಂಗಲ ಬಳಿಯ ಗುಡೇಮಾರನಹಳ್ಳಿ ಹಾಗೂ ಕೃಷ್ಣಗಿರಿಯ ಫಾರೆಸ್ಟ್ನಲ್ಲಿ ವಾಸ ಮಾಡುತ್ತಿದ್ದ. ಕಾಡಿನ ಬಂಡೆಗಳ ಮೇಲೆ ಮಲಗುತ್ತಿದ್ದ. ಆರೋಪಿಯನ್ನು ಬೆನ್ನತ್ತಿದರೆ, ‘ಪೊಲೀಸರು ನನ್ನ ಹಿಂದೆ ಬರಬೇಕು, ಬೆನ್ನತ್ತಬೇಕು’ ಎಂದು ಚಾಲೆಂಜ್ ಹಾಕಿ ಪೊಲೀಸರ ಜೊತೆ ಕಣ್ಣಾಮುಚ್ಚಾಲೆ ಆಡಿ ತಪ್ಪಿಸಿಕೊಳ್ಳುತ್ತಿದ್ದ. ಹೀಗೆ ಗುಡೇಮಾರನಹಳ್ಳಿ ಕಾಡಿನಲ್ಲಿದ್ದ ವೇಳೆ ಆರೋಪಿ ನರಸಿಂಹ ರೆಡ್ಡಿಯನ್ನು ಗಿರಿನಗರ ಪೊಲೀಸರು ಬಂಧಿಸಿದ್ದಾರೆ. ಇನ್ನೂ ಬಂಧಿತನಿಂದ 70 ಲಕ್ಷ ಮೌಲ್ಯದ ಒಂದು ಕೆಜಿ ಚಿನ್ನಾಭರಣ ವಶಕ್ಕೆ ಪಡೆದು ಪ್ರಕರಣ ದಾಖಲಿಸಿದ್ದಾರೆ.