ವಿಜಯಸಾಕ್ಷಿ ಸುದ್ದಿ, ಹುಬ್ಬಳ್ಳಿ: ಹುಬ್ಬಳ್ಳಿ ಮತ್ತು ನವಲಗುಂದ ಸೇರಿದಂತೆ ತಾಲೂಕಿನ ಕರ್ಲವಾಡ, ಆರೇಕುರಟ್ಟಿ, ಯಮನೂರ ಗ್ರಾಮಗಳ ಹತ್ತಿರ ಬೆಣ್ಣೆಹಳ್ಳದಿಂದ ಅಪಾರ ಪ್ರಮಾಣದ ನೀರು ಬಂದು, ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದ್ದ ಮತ್ತು ಹಾನಿಯಾದ ಪ್ರದೇಶವನ್ನು ಶನಿವಾರ ಬೆಳಿಗ್ಗೆ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಎಸ್.ಲಾಡ್ ಅವರು ಹಾಗೂ ಶಾಸಕ ಎನ್.ಎಚ್. ಕೋನರಡ್ಡಿ ವೀಕ್ಷಣೆ ಮಾಡಿದರು.
ಈ ಸಂದರ್ಭದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಸಚಿವರು, ರೈತರ ಜಮೀನುಗಳಲ್ಲಿನ ಬದುಗಳು ಕೊಚ್ಚಿ ಹೋಗಿ ಹಾನಿಯಾಗಿದೆ. ಕ್ಷೇತ್ರದಲ್ಲಿ ಬೆಳೆ ಹಾನಿ ಬಗ್ಗೆ ಮಾಹಿತಿ ತೆಗೆದುಕೊಳ್ಳಲು ಅಧಿಕಾರಿಗಳಿಗೆ ಸೂಚಿಸಲಾಗಿದ್ದು, ಮಾಹಿತಿ ಮತ್ತು ವರದಿ ಮೇಲೆ ಸರ್ಕಾರದ ಜೊತೆ ಚರ್ಚಿಸಿ, ಎಸ್.ಡಿ.ಆರ್.ಎಫ್ ನಿಯಮಾವಳಿಗಳನ್ನು ಪರಿಶೀಲಿಸಿ, ಅದಕ್ಕೆ ಅನುಗುಣವಾಗಿ ಪರಿಹಾರ ನೀಡಲಾಗುವುದು ಎಂದು ತಿಳಿಸಿದರು.
ಕೆಲವು ಹೊಲಗಳಿಗೆ ನೀರು ನುಗ್ಗಿ ರೈತರಿಗೆ ತೊಂದರೆಯಾಗಿದೆ. ಅದನ್ನು ಪರಿಗಣಿಸಿ ಮುಂದೆ ಮತ್ತೆ ಬಿತ್ತನೆ ಮಾಡುವ ಅವಕಾಶ ಕಲ್ಪಿಸಿಕೊಡಲಾಗುತ್ತದೆ. ಅದರಂತೆ ಮುಂದೆ ಫಸಲು ಬರದೆ ಹೋದಲ್ಲಿ, ಪರಿಹಾರ ಒದಗಿಸುವ ನಿಟ್ಟಿನಲ್ಲಿ ಸರ್ಕಾರದೊಂದಿಗೆ ಚರ್ಚಿಸಲಾಗುತ್ತದೆ ಎಂದು ಸಚಿವ ಸಂತೋಷ ಲಾಡ್ ತಿಳಿಸಿದರು.
ಶಾಸಕ ಎನ್.ಎಚ್. ಕೋನರಡ್ಡಿ ಮಾತನಾಡಿ, ನವಲಗುಂದ ಕ್ಷೇತ್ರದಲ್ಲಿ 3 ತಾಲೂಕಿನ ಹಳ್ಳಗಳು ಬರುತ್ತವೆ. ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಮಳೆಯಾಗಿದ್ದು, ಬೆಣ್ಣೆಹಳ್ಳ, ತುಪ್ಪರಿಹಳ್ಳಕ್ಕೆ ಇತರ 56 ಹಳ್ಳಗಳ ನೀರು ಸೇರಿ ಪ್ರವಾಹ ಸೃಷ್ಟಿಯಾಗಿದೆ. ರೈತರಿಗಾದ ಹಾನಿ ಸರಿದೂಗಿಸುವ ವಿಚಾರವಾಗಿ ಸೋಮವಾರ ಜಿಲ್ಲಾ ಸಚಿವರೊಂದಿಗೆ ಸಭೆ ಮಾಡಿ ಪರಿಹಾರಕ್ಕಾಗಿ ಸರ್ಕಾರಕ್ಕೆ ಒತ್ತಾಯ ಮಾಡುತ್ತೇವೆ ಎಂದರು.
ಈಗಾಗಲೇ ಬೆಣ್ಣೆಹಳ್ಳ ಅಗಲೀಕರಣ ಕಾಮಗಾರಿಗೆ ರೂ. 200 ಕೋಟಿ ಅನುದಾನ ಬಿಡುಗಡೆಯಾಗಿದ್ದು, ಟೆಂಡರ್ ಕರೆದು ಕಾಮಗಾರಿ ಪ್ರಾರಂಭಿಸಲು ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್ ಅವರ ಜೊತೆ ಚರ್ಚಿಸಿ ಶೀಘ್ರವೇ ಯೋಜನೆಯನ್ನು ಅನುಷ್ಠಾನಗೊಳಿಸಲು ಮನವಿ ಮಾಡಲಾಗಿದೆ. ಮಳೆ ಪ್ರಾರಂಭವಾಗಿದ್ದರಿಂದ ಕಾಮಗಾರಿ ಪ್ರಾರಂಭಿಸುವದು ವಿಳಂಬವಾಗಿದೆ. ಮಳೆಗಾಲ ಮುಗಿದ ತಕ್ಷಣ ಕಾಮಗಾರಿಯನ್ನು ಪ್ರಾರಂಭಿಸಲಾಗುವದು ಎಂದರು.
ಈ ಸಂದರ್ಭದಲ್ಲಿ ಜಿ.ಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭುವನೇಶ ಪಾಟೀಲ, ಅಪರ ಜಿಲ್ಲಾಧಿಕಾರಿ ಗೀತಾ ಸಿ.ಡಿ., ತಹಸೀಲ್ದಾರ ಸುಧೀರ ಸಾಹುಕಾರ, ಕೃಷಿ ಇಲಾಖೆ ಜಂಟಿ ನಿರ್ದೇಶಕ ಮಂಜುನಾಥ ಅಂತರವಳ್ಳಿ, ಉಪನಿರ್ದೇಶಕ ಸಂದೀಪ, ತಾ.ಪಂ ಇಒ ಭಾಗ್ಯಶ್ರೀ ಜಾಗೀದಾರ, ಕ್ಷೇತ್ರ ಶಿಕ್ಷಣಾಧಿಕಾರಿ ಶಿವಾನಂದ ಮಲ್ಲಾಡ, ಹಿರಿಯ ಕಾರ್ಮಿಕ ನಿರೀಕ್ಷಕಿ ಭುವನೇಶ್ವರಿ ಕೋಟಿಮಠ, ಸಿಪಿಐ ಶಿವಾನಂದ ಕಟಗಿ ಸೇರಿದಂತೆ ಪಂಚಾಯತರಾಜ್ ಇಂಜಿನಿಯರಿಂಗ್, ಪಂಚಾಯತರಾಜ್ ಮತ್ತು ಗ್ರಾಮೀಣಾಭಿವೃದ್ಧಿ ಇಲಾಖೆ, ಲೋಕೋಪಯೋಗಿ ಇಲಾಖೆ, ನವಲಗುಂದ ಪುರಸಭೆ, ಹೆಸ್ಕಾಂ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.
ನವಲಗುಂದ ತಾಲೂಕಿನಲ್ಲಿ ಪ್ರವಾಹ ಪಿಡೀತ ಹಾಗೂ ಮಳೆ ಹಾನಿ ಪ್ರದೇಶ ವೀಕ್ಷಣೆ ಪ್ರವಾಸ ಕೈಗೊಂಡಿದ್ದ ಸಚಿವ ಸಂತೋಷ ಲಾಡ್ ಶಾಸಕ ಎನ್.ಎಚ್. ಕೋನರಡ್ಡಿ ಅವರೊಂದಿಗೆ ಬೈಕ್ ಏರಿ ತಾಲೂಕಿನ ಆರೆಕುರಹಟ್ಟಿ ಗ್ರಾಮದಲ್ಲಿ ಬೆಣ್ಣೆಹಳ್ಳದಿಂದ ಬಾಧಿತವಾಗುವ ಎಸ್.ಸಿ. ಕಾಲೋನಿ, ಲಕ್ಷಿö್ಮÃನಗರ ಪ್ರದೇಶಗಳನ್ನು ವೀಕ್ಷಣೆ ಮಾಡಿದರು. ಸಚಿವರನ್ನು ಬೈಕ್ ಮೇಲೆ ನೋಡಿದ ಅನೇಕರು ಮನೆ ಬಾಗಿಲ್ಲಿ ನಿಂತು ಕೈ ಮುಗಿದರು. ಕೆಲವರು ವಾಹನ ನಿಲ್ಲಿಸಿ, ತಮ್ಮ ಸಮಸ್ಯೆ ತಿಳಿಸಿದರು. ಸಚಿವರ ಬೈಕ್ ಸಂಚಾರ ಗ್ರಾಮಸ್ಥರಲ್ಲಿ ಆಶ್ಚರ್ಯ ಮತ್ತು ಅಭಿಮಾನ ಮೂಡಿಸಿತು.
“ನವಲಗುಂದ ವಿಧಾನಸಭಾ ಮತಕ್ಷೇತ್ರದಲ್ಲಿ ಅನೇಕ ಹಳ್ಳಿಗಳನ್ನು ಪ್ರವಾಸ ಮಾಡಿದ್ದೇವೆ. ಬಹಳ ವರ್ಷಗಳಿಂದ ನವಲಗುಂದ, ಕುಂದಗೋಳ ಭಾಗಗಳಲ್ಲಿ ಈ ರೀತಿ ಪ್ರವಾಹ ಪರಿಸ್ಥಿತಿಯಿಂದ ತೊಂದರೆ ಆಗುತ್ತಿದೆ. ಇದಕ್ಕೆ ಶಾಶ್ವತ ಪರಿಹಾರ ಕಂಡುಹಿಡಿಯಬೇಕು ಎಂದು ಮುಖ್ಯಮಂತ್ರಿಗಳ ನೇತೃತ್ವದಲ್ಲಿ ಬದು ಪುನರ್ ನಿರ್ಮಾಣ ಮಾಡುವ ನಿಟ್ಟಿನಲ್ಲಿ 160 ಕೋಟಿ ರೂ.ಗಳ ಕಾಮಗಾರಿಗೆ ಡಿಪಿಆರ್ ಮಾಡಲಾಗಿದ್ದು, ಅದು ಒಂದು ಹಂತಕ್ಕೆ ಬಂದಿದೆ”
– ಸಂತೋಷ್ ಲಾಡ್.
ಸಚಿವರು, ಧಾರವಾಡ.