ಬೆಂಗಳೂರು:- ಹಾದಿಬೀದಿಯಲ್ಲಿ ಮಾತಾಡುವವರ ವಿರುದ್ಧ ಕ್ರಮ ಆಗಬೇಕು ಎಂದು ಹೇಳುವ ಮೂಲಕ ಬಿಜೆಪಿ ಶಾಸಕ ಯತ್ನಾಳ್ ಗೆ BY ವಿಜಯೇಂದ್ರ ಟಾಂಗ್ ಕೊಟ್ಟಿದ್ದಾರೆ.
ಈ ಸಂಬಂಧ ಮಾತನಾಡಿದ ಅವರು, ಇಷ್ಟು ಕಾಲ ಸಹಿಸಿದ್ದೇವೆ. ಇನ್ನುಮುಂದೆ ಸಹಿಸಲು ಆಗಲ್ಲ. ಪಕ್ಷ ಸಂಘಟನೆಗೆ ಯತ್ನಾಳ್ ಸಹಕಾರ ಕೊಡಲಿ. ಇಲ್ಲದಿದ್ದರೆ ಹೈಕಮಾಂಡ್ ನಿರ್ಧಾರ ಕೈಗೊಳ್ಳಲಿ ಎಂದರು.
ಯತ್ನಾಳ್ ವಿಚಾರವನ್ನು ಹೈಕಮಾಂಡ್ ಗಂಭೀರವಾಗಿ ಪರಿಗಣಿಸಬೇಕು. ಏನಾದರೊಂದು ತೀರ್ಮಾನ ತೆಗೆದುಕೊಳ್ಳಬೇಕು ಎಂದು ವಿಜಯೇಂದ್ರ ಒತ್ತಾಯಿಸಿದರು. ಪಕ್ಷದಲ್ಲಿ ಕೆಲವರು ಮಾತನಾಡುತ್ತಿರುವುದರ ಬಗ್ಗೆ, ಪಕ್ಷ ವಿರೋಧಿ ಹೇಳಿಕೆಗಳ ಬಗ್ಗೆ ಚರ್ಚೆ ಆಗಿದೆ. ಇದನ್ನ ಹೈಕಮಾಂಡ್ ಗಮನಕ್ಕೆ ತರಬೇಕು ಎಂದು ಚರ್ಚೆ ಆಗಿದೆ. ಹಾದಿಬೀದಿಯಲ್ಲಿ ಮಾತಾಡುವವರು ಯಾರೇ ಇರಲಿ ಕ್ರಮ ಆಗಬೇಕು ಎಂದು ಚರ್ಚಿಸಲಾಗಿದೆ ಎಂದು ತಿಳಿಸಿದರು.
ಯತ್ನಾಳ್ ವಿರುದ್ಧ ಕ್ರಮ ವಿಚಾರವಾಗಿ ಪ್ರತಿಕ್ರಿಯಿಸಿ, ಇದರ ಬಗ್ಗೆ ನಾನು ಈಗ ಬಹಿರಂಗ ಚರ್ಚೆ ಮಾಡಲ್ಲ. ಈಗಾಗಲೇ ಈ ವಿಚಾರ ವರಿಷ್ಠರ ಅಂಗಳದಲ್ಲಿದೆ. ಅವರೂ ಕೂಡಾ ಶಿಸ್ತು ಸಮಿತಿ ಎದುರು ಹಾಜರಾಗಿ ಬಂದಿದ್ದಾರೆ. ಬಾಲ್ ಹೈಕಮಾಂಡ್ ಅಂಗಳದಲ್ಲಿದೆ, ಹೈಕಮಾಂಡ್ ತೀರ್ಮಾನ ಮಾಡುತ್ತೆ. ಶಿಸ್ತು ಉಲ್ಲಂಘನೆ ಇನ್ನೂ ಮುಂದುವರೆಸಿದರೆ ಕಾರ್ಯಕರ್ತರಿಗೂ ಬೇಸರವಾಗಿದೆ. ಪಕ್ಷದ ಬೆಳವಣಿಗೆಗೂ ಒಳ್ಳೆಯದಲ್ಲ. ಯಾರೇ ಇದ್ದರೂ ಪಕ್ಷದ ಚೌಕಟ್ಟಿನಲ್ಲೇ ಚರ್ಚೆ ಮಾಡಬೇಕು. ಹಾದಿಬೀದಿಯಲ್ಲಿ ಮಾತನಾಡುವವರ ವಿರುದ್ಧ ಗಂಭೀರ ಕ್ರಮ ಆಗಬೇಕು ಎಂದರು.