ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಸುಮಾರು ಐದು ತಿಂಗಳ ಕಾಲ ಜೈಲಿನಲ್ಲಿದ್ದು ಸದ್ಯ ಮಧ್ಯಂತರ ಜಾಮೀನು ಪಡೆದು ಹೊರ ಬಂದಿರುವ ದರ್ಶನ್ ಜಾಮೀನು ಅರ್ಜಿ ವಿಚಾರಣೆ ಇಂದು ಹೈಕೋರ್ಟ್ನಲ್ಲಿ ನಡೆಯಲಿದೆ. ಚಿಕಿತ್ಸೆಗಾಗಿ ಈಗಾಗಲೇ ಆರು ವಾರಗಳ ಕಾಲ ಮಧ್ಯಂತರ ಜಾಮೀನು ಪಡೆದಿರುವ ದರ್ಶನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈಗಾಗಲೇ ಮೂರು ವಾರ ಕಳೆದಿದ್ದು ಇದುವರೆಗೂ ಯಾವುದೇ ಶಸ್ತ್ರಚಿಕಿತ್ಸೆ ನಡೆದಿಲ್ಲ.
ದರ್ಶನ್ ಜಾಮೀನು ಅರ್ಜಿಗೆ ಎಸ್ಪಿಪಿ ಪ್ರಸನ್ನಕುಮಾರ್ ಅವರು ಆಕ್ಷೇಪಣೆ ಸಲ್ಲಿಸಿದ್ದಾರೆ. ದರ್ಶನ್ಗೆ ನೀಡುತ್ತಿರುವ ಚಿಕಿತ್ಸೆ ಕುರಿತು ವೈದ್ಯಕೀಯ ವರದಿ ಸಲ್ಲಿಸಲಾಗಿದೆ. ವೈದ್ಯರ ವರದಿ ಆಧಾರಿಸಿ ಎಸ್ಪಿಪಿ ಪ್ರತಿವಾದ ಮಂಡಿಸುವ ಸಾಧ್ಯತೆ ಇದ್ದು, ಚಿಕಿತ್ಸೆ ಹಾಗೂ ಆಪರೇಷನ್ ಸಂಬಂಧ ವೈದ್ಯರಿಂದ ವರದಿ ಸಲ್ಲಿಕೆಯಾಗಿದೆ.
ಇಂದು ದರ್ಶನ್ ಸೇರಿ ಒಟ್ಟು 6 ಆರೋಪಿಗಳ ಜಾಮೀನು ಅರ್ಜಿ ವಿಚಾರಣೆ ನಡೆಯಲಿದೆ. ದರ್ಶನ್, ಪವಿತ್ರಾಗೌಡ, ನಾಗರಾಜ್, ಅನುಕುಮಾರ್ ಲಕ್ಷ್ಮಣ ಹಾಗೂ ಜಗದೀಶ್ ಸಲ್ಲಿಸಿರುವ ಅರ್ಜಿಗಳ ವಿಚಾರಣೆ ಇಂದು ನಡೆಯಲಿದ್ದು. ನ್ಯಾಯಮೂರ್ತಿ ವಿಶ್ವಜಿತ್ ಶೆಟ್ಟಿ ಅವರ ಪೀಠದಲ್ಲಿ ವಿಚಾರಣೆ ನಡೆಯಲಿದೆ.