ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿ ದರ್ಶನ್ ಅವರಿಗೆ ಡಿಸೆಂಬರ್ 11ರಂದು ಶಸ್ತ್ರಚಿಕಿತ್ಸೆ ಮಾಡಲಾಗುವುದು. ಈ ಬಗ್ಗೆ ಹೈಕೋರ್ಟ್ಗೆ ವರದಿ ಸಲ್ಲಿಕೆ ಮಾಡಲಾಗಿದೆ. ಈಗಾಗಲೇ ದರ್ಶನ್ಗೆ ನೀಡಲಾಗುತ್ತಿರುವ ಚಿಕಿತ್ಸೆಯ ವಿವರಗಳನ್ನು ಕೂಡ ಕೋರ್ಟ್ಗೆ ನೀಡಲಾಗಿದೆ. ದರ್ಶನ್ ಪರ ವಕೀಲರು 5 ಸರ್ಟಿಫಿಕೆಟ್ಗಳನ್ನ ಹೈಕೋರ್ಟ್ಗೆ ಸಲ್ಲಿಸಿದ್ದಾರೆ.
ಇನ್ನೂ ಮಾಹಿತಿ ಪ್ರಕಾರ ಇದುವರೆಗೂ ದರ್ಶನ್ ಗೆ ಯಾವುದೇ ಸರ್ಜರಿ ಆಗಿಲ್ಲ ಎನ್ನಲಾಗಿದೆ. ಇನ್ನೂ ಕೂಡಾ ನಟನಿಗೆ ಚಿಕಿತ್ಸೆ ಮುಂದುವರೆಸಲಾಗಿದೆ ಎಂದು ತಿಳಿದು ಬಂದಿದೆ. ಫಿಸಿಯೋಥೆರಪಿ ಹಾಗೂ ಔಷದಿಗಳ ಮೂಲಕವೇ ದರ್ಶನ್ ಗೆ ಸರ್ಜರಿ ಮಾಡಲು ಬೇಕಾದ ಆರೋಗ್ಯವನ್ನು ವೈದ್ಯರು ಸಮತೋಲನಕ್ಕೆ ತಂದಿದ್ದಾರೆ ಎಂದು ಹೇಳಲಾಗ್ತಿದೆ. ವೈದ್ಯ ನವೀನ್ ಅಪ್ಪಾಜಿಗೌಡ ಸರ್ಜರಿಗೆ ಬೇಕಾದ ಎಲ್ಲಾ ವ್ಯವಸ್ಥೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.
ಪತ್ನಿ ವಿಜಯಲಕ್ಷ್ಮಿಯಿಂದ ಗಂಡನ ಸರ್ಜರಿಗೆ ಇನ್ನೂ ಗ್ರೀನ್ ಸಿಗ್ನಲ್ ಸಿಕ್ಕಿಲ್ಲ ಎನ್ನಲಾಗುತ್ತಿದೆ. ಪತಿ ಸರ್ಜರಿ ಬಗ್ಗೆ ಇನ್ನೂ ಆತಂಕದಲ್ಲೇ ಇರುವ ವಿಜಯಲಕ್ಷ್ಮಿ ಅವರು ಸರ್ಜರಿ ನಂತರದ ಪರಿಣಾಮಗಳು ಹಾಗೂ ಆರೋಗ್ಯದ ಪರಿಸ್ಥಿತಿ ಬಗ್ಗೆ ಆತಂಕದಲ್ಲಿದ್ದಾರಂತೆ.
ದರ್ಶನ್ ಅವರ ಪತ್ನಿ ವಿಜಯಲಕ್ಷ್ಮಿ ಒಕೆ ಎಂದ ತಕ್ಷಣವೇ ಸರ್ಜರಿ ಮಾಡಲು ವೈದ್ಯ ನವೀನ್ ಅಪ್ಪಾಜಿಗೌಡ ಸಿದ್ದತೆ ಮಾಡಿದ್ದಾರೆ. ಸರ್ಜರಿ ಅಗತ್ಯತೆ ಹಾಗೂ ಯಾವುದೇ ಸಮಸ್ಯೆ ಆಗೋದಿಲ್ಲವೆಂದು ವೈದ್ಯ ನವೀನ್ ವಿಜಯಲಕ್ಷ್ಮಿಗೆ ಭರವಸೆ ನೀಡಿದ್ದಾರೆ ಎನ್ನಲಾಗಿದೆ.
ಇನ್ನೂ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿರುವ ನಟ ದರ್ಶನ್, ಪವಿತ್ರಾ ಗೌಡ ಸೇರಿದಂತೆ 7 ಆರೋಪಿಗಳ ಜಾಮೀನು ಅರ್ಜಿ ವಿಚಾರಣೆ ಹೈ ಕೋರ್ಟ್ ಕೈಗೆತ್ತಿಕೊಂಡಿತ್ತು. ದರ್ಶನ್ ಪರ-ವಿರುದ್ಧ ವಕೀಲರು ವಾದ ಮಂಡಿಸಿದ್ರು. ಸುದೀರ್ಘ ವಾದ ಆಲಿಸಿದ ನ್ಯಾಯಧೀಶರು ತೀರ್ಪು ಕಾಯ್ದಿರಿಸಿದ್ದಾರೆ. ದಿನಾಂಕ ನಿಗದಿ ಮಾಡದೆ ತೀರ್ಪು ಕಾಯ್ದಿರಿಸಿ ಆದೇಶ ಹೊರಡಿಸಿದ್ದಾರೆ. ನಟ ದರ್ಶನ್ಗೂ ತಾತ್ಕಾಲಿಕ ರಿಲೀಫ್ ಸಿಕ್ಕಿದೆ. ತೀರ್ಪು ಆದೇಶ ಹೊರಬೀಳುವವರೆಗೂ ನಟ ದರ್ಶನ್ ಮಧ್ಯಂತರ ಜಾಮೀನು ಅವಧಿ ಮುಂದುವರಿಕೆ ಆಗಲಿದೆ.