ಕನ್ನಡದ ನಟ ಧ್ರುವ ಸರ್ಜಾ ಸಿನಿಮಾಗಳ ಜೊತೆಗೆ ಸಾಮಾಜಿಕ ಕಾರ್ಯದಲ್ಲೂ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಈಗಾಗಲೇ ಹಲವು ರೀತಿಯ ಸಹಾಯ ಹಸ್ತ ಚಾಚಿರುವ ನಟ ಇದೀಗ ಬುಡಕಟ್ಟು ಮಕ್ಕಳಿಗೆ ನೆರವಿಗೆ ದಾವಿಸಿದ್ದಾರೆ. ಮಕ್ಕಳ ಆಟಕ್ಕೆ ಬೇಕಾದ ಕೆಲವು ಕ್ರೀಡಾ ಸಲಕರಣೆಗಳನ್ನು ಧ್ರುವ ಸರ್ಜಾ ಕಳಿಸಿಕೊಟ್ಟಿದ್ದಾರೆ.
ಇತ್ತೀಚೆಗಷ್ಟೆ ನಟ ಧ್ರುವ ಸರ್ಜಾ ಪತ್ನಿ ಪ್ರೇರಣಾ ಮತ್ತು ಮಕ್ಕಳೊಡನೆ ನಾಗರಹೊಳೆಗೆ ಸಫಾರಿಗಾಗಿ ತೆರಳಿದ್ದಾರೆ. ಆ ಸಮಯದಲ್ಲಿ ಚಾಮರಾಜನಗರದ ಹುತ್ಕೂರು ಹಾಡಿಯ ಬುಡಕಟ್ಟು ವಸತಿ ಶಾಲೆಗೆ ಭೇಟಿ ನೀಡಿದ್ದು ಶಾಲಾ ಮಕ್ಕಳು ಮತ್ತು ಶಿಕ್ಷಕರೊಟ್ಟಿಗೆ ಸಮಯ ಕಳೆದಿದ್ದಾರೆ. ಇದೇ ವೇಳೆ ಶಾಲೆಗೆ ತಾವೇನು ಸಹಾಯ ಮಾಡಬಹುದು ಎಂಬುದನ್ನು ಶಿಕ್ಷಕರಿಂದ ಕೇಳಿ ತಿಳಿದುಕೊಂಡಿದ್ದಾರೆ.
ಬಳಕ ಮೈಸೂರಿನಲ್ಲಿ ಆಟೋ ಓಡಿಸುತ್ತಿದ್ದ ತನ್ನ ಅಭಿಮಾನಿಗೆ ಕರೆ ಮಾಡಿ, ಅಂಗಡಿಗೆ ತೆರಳಿ ಶಾಲೆ ಮಕ್ಕಳಿಗೆ ಬೇಕಾದ ಸಲಕರಣೆಗಳನ್ನೆಲ್ಲ ತೆಗೆದುಕೊಂಡು ಕಳುಹಿಸುವಂತೆ ಸೂಚಿಸಿದ್ದಾರೆ. ಬಳಿಕ ಅದರ ಸಂಪೂರ್ಣ ಹಣವನ್ನು ತಾವೇ ನೀಡಿದ್ದಾರೆ. ಮಕ್ಕಳಿಗೆ ವಾಲಿಬಾಲ್ಗಳು, ಬ್ಯಾಡ್ಮಿಂಟನ್ ಕಿಟ್, ಕ್ರಿಕೆಟ್ ಕಿಟ್, ಗ್ಲೌಸ್, ನೀ ಕ್ಯಾಪ್ ಇನ್ನೂ ಹಲವಾರು ಕಲಿಕಾ ಸಾಮಗ್ರಿಗಳನ್ನು ಧ್ರುವ ಸರ್ಜಾ ನೀಡಿದ್ದಾರೆ.
ಧ್ರುವ ಸರ್ಜಾ ಮಾಡಿರುವ ಸೇವೆಯ ಬಗ್ಗೆ ಸ್ಥಳೀಯ ವ್ಯಕ್ತಿಯೊಬ್ಬ ವಿಡಿಯೋ ಮೂಲಕ ಮಾಹಿತಿ ಹಂಚಿಕೊಂಡಿದ್ದು, ಈ ಶಾಲೆಗೆ ಹಲವು ರಾಜಕಾರಣಿಗಳು, ಕೆಲ ಸಿನಿಮಾ ಸೆಲೆಬ್ರಿಟಿಗಳು ಬಂದು ಹೋಗಿದ್ದಾರೆ ಆದರೆ ಯಾರೂ ಸಹ ಧ್ರುವ ರೀತಿ ಸಹಾಯ ಮಾಡಿರಲಿಲ್ಲ, ಧ್ರುವ ಅವರ ಸೇವೆಯಿಂದ ಮಕ್ಕಳಿಗೆ ಸಹಾಯ ಆಗಿದೆ ಎಂದಿದ್ದಾರೆ.