2017ರಲ್ಲಿ ಕೇರಳದಲ್ಲಿ ನಡೆದ ಅಪಹರಣ ಮತ್ತು ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದಿಲೀಪ್ ಅವರನ್ನು ಎರ್ನಾಕುಲಂ ಸೆಷನ್ಸ್ ಕೋರ್ಟ್ ಈ ವಾರದ ಆರಂಭದಲ್ಲಿ ಖುಲಾಸೆಗೊಳಿಸಿದೆ. ಈ ತೀರ್ಪಿನ ಬೆನ್ನಲ್ಲೇ ಪ್ರಕರಣದ ಸಂತ್ರಸ್ತ ನಟಿ ಭಾವನ ತಮ್ಮ ಮೌನ ಮುರಿದು ನ್ಯಾಯ ವ್ಯವಸ್ಥೆ ಕುರಿತು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ದೀರ್ಘ ಇನ್ಸ್ಟಾಗ್ರಾಮ್ ಪೋಸ್ಟ್ನಲ್ಲಿ ಪ್ರತಿಕ್ರಿಯಿಸಿರುವ ಭಾವನಾ, “ವರ್ಷಗಳ ನೋವು, ಕಣ್ಣೀರು ಮತ್ತು ಭಾವನಾತ್ಮಕ ಹೋರಾಟದ ನಂತರ, ಈ ದೇಶದಲ್ಲಿ ಪ್ರತಿಯೊಬ್ಬ ನಾಗರಿಕನನ್ನು ಕಾನೂನಿನ ಮುಂದೆ ಸಮಾನವಾಗಿ ನಡೆಸಲಾಗುವುದಿಲ್ಲ ಎಂಬ ಕಠಿಣ ಸತ್ಯವನ್ನು ನಾನು ಅರಿತುಕೊಂಡಿದ್ದೇನೆ” ಎಂದು ಹೇಳಿದ್ದಾರೆ. ಆರೋಪಿ ನಂ.1 ತಮ್ಮ ವೈಯಕ್ತಿಕ ಚಾಲಕ ಎಂಬ ಆರೋಪವನ್ನು ಅವರು ಸಂಪೂರ್ಣವಾಗಿ ತಳ್ಳಿ ಹಾಕಿದ್ದಾರೆ.
ಘಟನೆ 2017ರಲ್ಲಿ ನಡೆದಿದ್ದು, ತ್ರಿಶೂರ್ನಿಂದ ಕೊಚ್ಚಿಗೆ ಚಿತ್ರೀಕರಣ ಮುಗಿಸಿ ಹಿಂತಿರುಗುತ್ತಿದ್ದ ವೇಳೆ ಚಲಿಸುವ ವಾಹನದಲ್ಲೇ ನಟಿಯ ಮೇಲೆ ಲೈಂಗಿಕ ದೌರ್ಜನ್ಯ ನಡೆಸಲಾಗಿತ್ತು. ಆರೋಪಿಗಳು ಈ ಕೃತ್ಯವನ್ನು ಕ್ಯಾಮೆರಾದಲ್ಲಿ ಚಿತ್ರೀಕರಿಸಿದ್ದರು. ಪ್ರಕರಣದಲ್ಲಿ ಪ್ರಮುಖ ಆರೋಪಿ ಸುನಿಲ್ ಅಲಿಯಾಸ್ ‘ಪಲ್ಸರ್ ಸುನಿ’ ಸೇರಿದಂತೆ ಆರು ಮಂದಿಯನ್ನು ತಪ್ಪಿತಸ್ಥರೆಂದು ಘೋಷಿಸಿ ನ್ಯಾಯಾಲಯವು 20 ವರ್ಷಗಳ ಕಠಿಣ ಜೈಲು ಶಿಕ್ಷೆ ವಿಧಿಸಿದೆ.
ಆದರೆ ನಟ ದಿಲೀಪ್ ವಿರುದ್ಧದ ಕ್ರಿಮಿನಲ್ ಪಿತೂರಿ ಆರೋಪವನ್ನು ನಿರ್ಣಾಯಕವಾಗಿ ಸಾಬೀತುಪಡಿಸಲು ಪ್ರಾಸಿಕ್ಯೂಷನ್ ವಿಫಲವಾಗಿದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದ್ದು, ಈ ಹಿನ್ನೆಲೆ ಅವರನ್ನು ಖುಲಾಸೆಗೊಳಿಸಲಾಗಿದೆ.
“ಆರೋಪಿ ನನ್ನ ಚಾಲಕನಲ್ಲ, ನನ್ನ ಉದ್ಯೋಗಿಯಲ್ಲ. 2016ರಲ್ಲಿ ನಾನು ಕೆಲಸ ಮಾಡಿದ ಸಿನಿಮಾಗೆ ಚಾಲಕನಾಗಿ ನಿಯೋಜಿಸಲ್ಪಟ್ಟ ಅಪರಿಚಿತ ವ್ಯಕ್ತಿ ಮಾತ್ರ. ದೌರ್ಜನ್ಯಕ್ಕೂ ಮುನ್ನ ಅವನನ್ನು ಒಂದೆರಡು ಬಾರಿ ಮಾತ್ರ ನೋಡಿದ್ದೆ” ಎಂದು ಭಾವನಾ ಸ್ಪಷ್ಟಪಡಿಸಿದ್ದಾರೆ.
ವಿಚಾರಣೆಯ ಪ್ರಕ್ರಿಯೆ ವೇಳೆ ನ್ಯಾಯ ವ್ಯವಸ್ಥೆಯ ಮೇಲಿನ ತಮ್ಮ ನಂಬಿಕೆ ಕುಸಿಯಲು ಆರು ಪ್ರಮುಖ ಕಾರಣಗಳಿವೆ ಎಂದು ಅವರು ಹೇಳಿದ್ದಾರೆ. ಮೆಮೊರಿ ಕಾರ್ಡ್ ನ್ಯಾಯಾಲಯದ ಕಸ್ಟಡಿಯಲ್ಲಿ ಇದ್ದಾಗ ಮೂರು ಬಾರಿ ಅಕ್ರಮವಾಗಿ ಪ್ರವೇಶವಾಗಿದೆ, ಇಬ್ಬರು ಪಬ್ಲಿಕ್ ಪ್ರಾಸಿಕ್ಯೂಷನ್ಗಳು ಪಕ್ಷಪಾತದ ಆರೋಪದೊಂದಿಗೆ ರಾಜೀನಾಮೆ ನೀಡಿದ್ದಾರೆ, ಮೆಮೊರಿ ಕಾರ್ಡ್ ತಿರುಚುವಿಕೆ ಕುರಿತ ತನಿಖೆ ಮನವಿಗಳನ್ನು ನಿರ್ಲಕ್ಷಿಸಲಾಗಿದೆ ಹಾಗೂ ನ್ಯಾಯಾಧೀಶರ ಬದಲಾವಣೆಗೆ ಸಲ್ಲಿಸಿದ ಅರ್ಜಿಗಳನ್ನು ವಜಾಗೊಳಿಸಲಾಗಿದೆ ಎಂದು ಅವರು ಆರೋಪಿಸಿದ್ದಾರೆ.
ರಾಷ್ಟ್ರಪತಿ ಮತ್ತು ಪ್ರಧಾನಿಗೆ ತಮ್ಮ ಕಳವಳಗಳ ಬಗ್ಗೆ ಪತ್ರ ಬರೆದಿದ್ದರೂ ಯಾವುದೇ ಮಧ್ಯಪ್ರವೇಶವಾಗಿಲ್ಲ ಎಂದು ಹೇಳಿರುವ ಭಾವನಾ, ಮುಕ್ತ ನ್ಯಾಯಾಲಯದಲ್ಲಿ ವಿಚಾರಣೆ ನಡೆಸುವ ಬೇಡಿಕೆಯನ್ನೂ ಪರಿಗಣಿಸಲಾಗಲಿಲ್ಲ ಎಂದು ತಿಳಿಸಿದ್ದಾರೆ.
ಡಿಸೆಂಬರ್ 12, 2025ರ ತೀರ್ಪು ಕೇರಳದ ಅತ್ಯಂತ ಚರ್ಚಿತ ಕ್ರಿಮಿನಲ್ ಪ್ರಕರಣಗಳಲ್ಲಿ ಒಂದಕ್ಕೆ ಭಾಗಶಃ ತೆರೆ ಎಳೆದಿದ್ದು, ನಟ ದಿಲೀಪ್ ಖುಲಾಸೆ ಮತ್ತು ಆರು ಆರೋಪಿಗಳಿಗೆ ಶಿಕ್ಷೆ ಎಂಬ ತೀರ್ಪು ಸಾರ್ವಜನಿಕ ವಲಯದಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿದೆ.



