ತೆಲುಗು ಚಿತ್ರರಂಗದಲ್ಲಿ ನಟ ಶ್ರೀವಿಷ್ಣು ತಮ್ಮದೇ ಆದ ಹೆಸರು ಮಾಡಿದ್ದಾರೆ. ರೊಮ್ಯಾಂಟಿಕ್-ಕಾಮಿಡಿ ಸಿನಿಮಾಗಳ ಮೂಲಕ ತಮ್ಮದೇ ಆದ ಅಭಿಮಾನಿ ಬಳಗ ಹೊಂದಿರುವ ಶ್ರೀವಿಷ್ಣು ಸದ್ಯ‘ಸಿಂಗಲ್’ (Single) ಹೆಸರಿನ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಇತ್ತೀಚೆಗೆ ಈ ಸಿನಿಮಾದ ಟ್ರೈಲರ್ ಬಿಡುಗಡೆ ಆಗಿದ್ದು ಟ್ರೈಲರ್ನಲ್ಲಿದ್ದ ಕೆಲ ಸಂಭಾಷಣೆಗಳ ಬಗ್ಗೆ ತೆಲುಗು ಕಲಾವಿದರ ಸಂಘದ ಅಧ್ಯಕ್ಷ, ನಟ ಮಂಚು ವಿಷ್ಣು ಅಸಮಾಧಾನ ಹೊರಹಾಕಿದ್ದರು. ಆ ಬಳಿಕ ವಿವಾದಾತ್ಮಕ ಸಂಭಾಷಣೆಗಳನ್ನು ಚಿತ್ರತಂಡ ತೆಗೆದು ಹಾಕಿತ್ತು. ಇದೀಗ ಶ್ರೀ ವಿಷ್ಣು ಈ ಬಗ್ಗೆ ಬಹಿರಂಗ ಕ್ಷಮಾಪಣೆ ಕೇಳಿದ್ದಾರೆ.
ಶ್ರೀ ವಿಷ್ಣು ತಮ್ಮ ಸಿನಿಮಾಗಳಲ್ಲಿ ಪ್ರಚಲಿತದಲ್ಲಿರುವ ಮೀಮ್ಸ್ಗಳನ್ನು, ವೈರಲ್ ವಿಡಿಯೋ ಕಂಟೆಂಟ್ ಅನ್ನು ತೆಗೆದುಕೊಳ್ಳುತ್ತಾರೆ. ವಿಶೇಷವಾಗಿ ತೆಲುಗು ಸಿನಿಮಾ ಸ್ಟಾರ್ಗಳ ಬಗ್ಗೆ ಇರುವ ಮೀಮ್ಗಳನ್ನು ತೆಗೆದುಕೊಂಡು ಅದನ್ನು ಅಶ್ಲೀಲಗೊಳಿಸದೆ, ಯಾರಿಗೂ ನೋವಾಗದಂತೆ ಹಾಸ್ಯಮಯವಾಗಿ ಸಿನಿಮಾಗಳಲ್ಲಿ ಬಳಸಿಕೊಳ್ಳುತ್ತಾರೆ. ‘ಸಿಂಗಲ್’ ಸಿನಿಮಾದಲ್ಲಿಯೂ ಆ ರೀತಿಯ ಪ್ರಯತ್ನ ಮಾಡಿದ್ದರು. ಆದರೆ ಅದನ್ನು ಮಂಚು ವಿಷ್ಣುಗೆ ಸಹಿಸಲಾಗಿಲ್ಲ.
ಮಂಚು ವಿಷ್ಣು ನಟಿಸಿರುವ ‘ಕಣ್ಣಪ್ಪ’ ಸಿನಿಮಾದಲ್ಲಿ ಮಂಚು ವಿಷ್ಣು ‘ಶಿವಯ್ಯ’ ಎಂದು ಕರೆಯುವ ದೃಶ್ಯ ವೈರಲ್ ಆಗಿತ್ತು. ಅದರ ಮೇಲೆ ಮೀಮ್ ಸಹ ಆಗಿದ್ದವು. ಅದನ್ನೇ ಶ್ರೀ ವಿಷ್ಣು ಅವರ ‘ಸಿಂಗಲ್’ ಸಿನಿಮಾದಲ್ಲಿ ಬಳಸಿಕೊಳ್ಳಲಾಗಿತ್ತು. ಟ್ರೈಲರ್ನ ಕೊನೆಗೆ ‘ಬದುಕು ಮಂಚು ಕುರಿಸಿಪೋಯಿಂದಿ’ (ಬದುಕು ಹಾಳಾಗಿ ಹೋಗಿದೆ ಎಂಬ ಭಾವಾರ್ಥ) ಎಂಬ ಸಾಲು ಸಹ ಇತ್ತು. ಅಸಲಿಗೆ ಈ ಡೈಲಾಗ್ ತೆಲುಗು ಭಾಷೆಯಲ್ಲಿ ಬಹಳ ಜನಪ್ರಿಯ ಆದರೆ ಟ್ರೈಲರ್ನಲ್ಲಿ, ಬಳಕೆಯಲ್ಲಿರುವ ಪದವನ್ನು ‘ಮಂಚು’ ಪದದಿಂದ ರೀಪ್ಲೇಸ್ ಮಾಡಿ ಬದಲಾಯಿಸಲಾಗಿದೆ.
ಮಂಚು ಕುಟುಂಬದಲ್ಲಿ ನಡೆಯುತ್ತಿರುವ ವಿವಾದಗಳ ಕಾರಣದಿಂದ ಈ ಸಂಭಾಷಣೆಯನ್ನು ಬಳಸಲಾಗಿತ್ತು. ಇದರ ಬಗ್ಗೆಯೂ ಸಹ ಮಂಚು ವಿಷ್ಣು ಆಕ್ಷೇಪಣೆ ಎತ್ತಿರುವ ಕಾರಣ, ಇದೀಗ ಈ ಸಂಭಾಷಣೆಯನ್ನೂ ಸಹ ತೆಗೆದು ಹಾಕಲಾಗಿದೆ. ಈ ಬಗ್ಗೆ ವಿಡಿಯೋ ಮಾಡಿರುವ ಶ್ರೀ ವಿಷ್ಣು, ‘ನಮ್ಮ ಸಿನಿಮಾದಲ್ಲಿ ಚಾಲ್ತಿಯಲ್ಲಿರುವ ಮೀಮ್ಗಳನ್ನು ಬಳಸಲಾಗಿತ್ತು. ಆದರೆ ಅದರಿಂದ ಕೆಲವರಿಗೆ ನೋವಾಗಿದೆ ಹಾಗಾಗಿ ಅದನ್ನು ನಾವು ತೆಗೆದಿದ್ದೇವೆ. ಟ್ರೈಲರ್ನಲ್ಲಿ ಬಾಲಕೃಷ್ಣ, ಚಿರಂಜೀವಿ ಅವರ ಸಂಭಾಷಣೆಗಳು ಸಹ ಇವೆ, ಅದನ್ನೆಲ್ಲ ನಾವು ಗೌರವದಿಂದ ಮಾಡಿದ್ದೇವೆ’ ಎಂದಿದ್ದಾರೆ.
‘ಸಿಂಗಲ್’ ಸಿನಿಮಾದಲ್ಲಿ ಶ್ರೀ ವಿಷ್ಣು ಜೊತೆಗೆ ಕೇತಿಕಾ ಶರ್ಮಾ, ಇವಾನಾ, ವೆನ್ನಿಲ ಕಿಶೋರ್, ವಿವಿಟಿ ಗಣೇಶ್ ಅವರುಗಳು ನಟಿಸಿದ್ದಾರೆ.